ಕರ್ನಾಟಕದಲ್ಲಿ (Karnataka) ಭಾರೀ ಚಳಿ ಇದ್ದರೂ ಎಲೆಕ್ಷನ್ ಬಿಸಿ ಮಾತ್ರ ಏರುತ್ತಲೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಎಲೆಕ್ಷನ್ (Election) ಘೋಷಣೆಯಾಗಿ, ಬಿರು ಬಿರು ಬೇಸಿಗೆಯಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಗೆಲುವಿಗಾಗಿ ಈಗಾಗಲೇ ರಾಜಕೀಯ ಪಕ್ಷಗಳು (Political Party), ರಾಜಕೀಯ ನಾಯಕರು (Political Leader) ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra) ಕಾಮಗಾರಿ ಉದ್ಘಾಟನೆ ಹೆಸರಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪಾದಯಾತ್ರೆ ನೆಪದಲ್ಲಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪ್ರಿಯಾಂಕಾ ಗಾಂಧಿ (Priyanka Gandhi) ಬೆಂಗಳೂರಿಗೆ (Bengaluru) ಬಂದಿದ್ದರೆ, ಅವರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕಲಬುರಗಿ (Kalaburagi) ಹಾಗೂ ಯಾದಗಿರಿಗೆ (Yadagiri) ಬಂದು ಹೋಗಿದ್ದರು. ಇದರೊಂದಿಗೆ ಹಲವು ಉಚಿತ ಯೋಜನೆಗಳ (Free Scheme) ಘೋಷಣೆ ಕೂಡ ಮಾಡಲಾಗಿದೆ. ಹಾಗಾದ್ರೆ ಕರ್ನಾಟಕದ ಮತದಾರರಿಗೆ (Karnataka Voters) ನಾಯಕರು ನೀಡಿದ ಭರವಸೆಗಳೇನು? ಇದರಿಂದ ಚುನಾವಣೆಯಲ್ಲಿ ಲಾಭವಾಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…
ರಾಜ್ಯದ ಮತದಾರರಿಗೆ ಭರಪೂರ ಉಚಿತ ಯೋಜನೆ
ಸಾಮಾನ್ಯವಾಗಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ತರಹೇವಾರಿ ಘೋಷಣೆಗಳನ್ನು, ವಿವಿಧ ಆಮಿಷಗಳನ್ನು ಒಡ್ಡುವುದು ಸಹಜ. ಇದೀಗ ಕರ್ನಾಟಕದಲ್ಲೂ ಉಚಿತ ಭಾಗ್ಯಗಳ ಜಾತ್ರೆಯೇ ಶುರುವಾಗಿದೆ.
ಕಾಂಗ್ರೆಸ್ನಿಂದ ಗೃಹಲಕ್ಷ್ಮೀ ಯೋಜನೆ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಮಾಸಿಕ ಸಹಾಯ ಧನ ನೀಡುವುದಾಗಿ ರಾಜ್ಯ ಕಾಂಗ್ರೆಸ್ ಭರವಸೆ ನೀಡಿದೆ. ಕಳೆದ ವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ನಾ ನಾಯಕಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ಇದನ್ನೂ ಓದಿ: One Nation, One Uniform: ಏನಿದು 'ಒಂದು ದೇಶ, ಒಂದೇ ಸಮವಸ್ತ್ರ'? ಬದಲಾಗುತ್ತಾ ಕರ್ನಾಟಕ ಪೊಲೀಸರ ಖಾಕಿ ಯೂನಿಫಾರ್ಮ್?
‘ಗೃಹಲಕ್ಷ್ಮೀ’ ಯೋಜನೆಯಡಿ ಮಹಿಳೆಯರಿಗೆ ಸಹಾಯಧನ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದು, ಆ ಮೂಲಕ ಮಹಿಳೆಯರಿಗೆ 2 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಹೇಳಲಾಗಿದೆ. ಬೆಲೆ ಏರಿಕೆಯ ಸಂಕಷ್ಟದಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಹೀಗಾಗಿ ಇಡೀ ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗಾಗಿ ಈ ಮಹತ್ವದ ಕೊಡುಗೆ ನೀಡುತ್ತಿದ್ದೇವೆ. ಯೋಜನೆಯ ಭರವಸೆಯೊಂದಿಗೆ ಗ್ಯಾರಂಟೀ ಚೆಕ್ ಅನ್ನು ಈಗಲೇ ನೀಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಉಚಿತ ವಿದ್ಯುತ್ ಭರವಸೆ ನೀಡಿದ ಡಿಕೆಶಿ
ಇದಕ್ಕೂ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಿಸಿದ್ದರು. ಬಸವಣ್ಣನ ಆಣೆ, ಕುವೆಂಪು ಆಣೆ, ಕನಕದಾಸರ ಆಣೆ, ಶರೀಫರ ಆಣೆ 200 ಯುನಿಟ್ ಕರೆಂಟ್ ಅನ್ನು ಉಚಿತವಾಗಿ ನಿಮ್ಮ ಮನೆಗೆ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದ್ದಾರೆ.
“ತೆರಿಗೆ ಹಣದಿಂದಲೇ ಉಚಿತ ಯೋಜನೆ”
ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಉಚಿತ ನೀಡುವ ಗೃಹ ಜ್ಯೋತಿ ಯೋಜನೆ ಮತ್ತು ಮಹಿಳೆಯರಿಗೆ ಮಾಸಿಕ 2,000 ರೂ.ಗಳ ಗೃಹ ಲಕ್ಷ್ಮಿ ಕಾರ್ಯಕ್ರಮಕ್ಕೆ ವಾರ್ಷಿಕ ಕನಿಷ್ಠ 40,000 ಕೋಟಿ ಬೇಕಿದೆ. ಮಹಿಳೆಯ ಮುಖ್ಯಸ್ಥರಿಗೆ ತಿಂಗಳಿಗೆ ರೂ 2,000 ನೀಡುತ್ತೇವೆ. ಒಂದು ಕುಟುಂಬಕ್ಕೆ ವರ್ಷಕ್ಕೆ 24,000 ರೂ., ಒಟ್ಟಾರೆಯಾಗಿ, ನಾವು ಪ್ರತಿ ಮನೆಗೆ 42,000 ರೂ ನೀಡುತ್ತೇವೆ. ರಾಜ್ಯದಲ್ಲಿ ಸಂಗ್ರಹಿಸಲಾಗುವ ತೆರಿಗೆ ಹಣ ಉಳಿತಾಯದಿಂದಲೇ ಈ ಹಣವನ್ನು ನಾವು ನೀಡಲಿದ್ದೇವೆ ಅಂತ ಡಿಕೆಶಿ ಲೆಕ್ಕಾಚಾರವನ್ನೂ ಹೇಳಿದ್ದಾರೆ.
ಬಿಜೆಪಿಯಿಂದಲೂ 2000 ರೂಪಾಯಿಗಳ ಭರವಸೆ!
ಇತ್ತ ಕಾಂಗ್ರೆಸ್ನ ಗೃಹಲಕ್ಷ್ಮೀ ಯೋಜನೆಗೆ ಸೆಡ್ಡು ಹೊಡೆಯಲು ಬಿಜೆಪಿ ಮುಂದಾಗಿದೆ. ಬಿಪಿಎಲ್ ಕಾರ್ಡ್ ಇರುವ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೆರವು ನೀಡುವ ಯೋಜನೆ ಪ್ರಕಟಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಪಿಎಲ್ ಕಾರ್ಡ್ ಇರುವ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೆರವು ನೀಡುವ ಯೋಜನೆ ಪ್ರಕಟಿಸುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ: Santro Ravi: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?
ರೈತರ ಸಾಲ ತೀರಿಸ್ತಾರಂತೆ ಕುಮಾರಣ್ಣ!
ಅತ್ತ ಜೆಡಿಎಸ್ ಕೂಡ ಉಚಿತ ಭಾಗ್ಯಗಳ ಮೂಲಕ ಜನರನ್ನು ಸೆಳೆಯಲು ಮುಂದಾಗಿದೆ. ರೈತರು ಈಗ ಎಷ್ಟು ಬೇಕೆ ಅಷ್ಟು ಸಾಲ ಮಾಡಿಕೊಳ್ಳಿ ಅಂತ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದರು. ಸ್ತ್ರೀ ಶಕ್ತಿ ಸಂಘಗಳು, ರೈತರು ಈಗ ನಿಮಗೆ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ ಅಂತ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪತ್ನಿ, ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಿಮಗೆ ಎಷ್ಟು ಬೇಕೋ ಅಷ್ಟು ಸಾಲ ತಗೊಂಡು ಬಿಡಿ ಅಂತ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ