• ಹೋಂ
  • »
  • ನ್ಯೂಸ್
  • »
  • Explained
  • »
  • ದೇಶೀಯ ಟೂರ್ನಿಯಲ್ಲಿ 'ಸಮರ್ಥ'ನಾಗಿ ಮಿಂಚಿದರೂ ಕನ್ನಡಿಗನಿಗೆ ಸಿಗುತ್ತಿಲ್ಲ IPL ಚಾನ್ಸ್​..!

ದೇಶೀಯ ಟೂರ್ನಿಯಲ್ಲಿ 'ಸಮರ್ಥ'ನಾಗಿ ಮಿಂಚಿದರೂ ಕನ್ನಡಿಗನಿಗೆ ಸಿಗುತ್ತಿಲ್ಲ IPL ಚಾನ್ಸ್​..!

Ravikumar Samarth

Ravikumar Samarth

ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಅವರಂತಹ ಪ್ರತಿಭೆಗಳು ಕರ್ನಾಟಕದಿಂದ ಟೀಮ್ ಇಂಡಿಯಾಗೆ ಪ್ರವೇಶಿಸುತ್ತಿದ್ದಂತೆ, ಇತ್ತ ರಾಜ್ಯ ತಂಡದ ಆರಂಭಿಕರ ಕೊರತೆಯನ್ನು ನೀಗಿಸಿದ್ದು ರವಿಕುಮಾರ್ ಸಮರ್ಥ್.

  • Share this:

    ರವಿಕುಮಾರ್ ಸಮರ್ಥ್...ಈ ಹೆಸರು ಕನ್ನಡಿಗರಿಗೆ ಅಷ್ಟೇನೂ ಪರಿಚಿತವಲ್ಲ. ಏಕೆಂದರೆ ಈತ ರಾಷ್ಟ್ರೀಯ ತಂಡವನ್ನೂ ಪ್ರತಿನಿಧಿಸಿಲ್ಲ. ಹಾಗೆಯೇ ಐಪಿಎಲ್​ ಕೂಡ ಆಡಿಲ್ಲ. ಆದರೆ ಕರ್ನಾಟಕ ರಣಜಿ ತಂಡದ ಆಧಾರಸ್ತಂಭ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು, ರವಿಕುಮಾರ್ ಸಮರ್ಥ್ ಎಂತಹ ಬ್ಯಾಟ್ಸ್​ಮನ್ ಎಂಬುದಕ್ಕೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟೂರ್ನಿಯ ಬ್ಯಾಟಿಂಗ್​ ಪ್ರದರ್ಶನವೇ ಸಾಕ್ಷಿ.


    ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಅವರಂತಹ ಪ್ರತಿಭೆಗಳು ಕರ್ನಾಟಕದಿಂದ ಟೀಮ್ ಇಂಡಿಯಾಗೆ ಪ್ರವೇಶಿಸುತ್ತಿದ್ದಂತೆ, ಇತ್ತ ರಾಜ್ಯ ತಂಡದ ಆರಂಭಿಕರ ಕೊರತೆಯನ್ನು ನೀಗಿಸಿದ್ದು ರವಿಕುಮಾರ್ ಸಮರ್ಥ್. 2013-14ರ ರಣಜಿ ಸೀಸನ್​ನಲ್ಲಿ ಕರ್ನಾಟಕದ ಪರ ಮೊದಲ ಪಂದ್ಯವಾಡಿದ ಸಮರ್ಥ್ ಮುಂಬೈ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ 75 ರನ್ ಸಿಡಿಸಿದ್ದರು.


    ಇದರ ಬಳಿಕ ಕರ್ನಾಟಕ ತಂಡದ ಮಧ್ಯಮ ಕ್ರಮಾಂಕವನ್ನು ಸಮರ್ಥ್ ಸಮರ್ಥವಾಗಿ ನಿಭಾಯಿಸಿದ್ದರು. 2015-16ರ ದೇಶೀಯ ಟೂರ್ನಿಯಲ್ಲಿ ಮಿಡಲ್ ಆರ್ಡರ್​ನಲ್ಲಿ ಬ್ಯಾಟ್ ಬೀಸಿ 487 ರನ್​ಗಳಿಸಿದ್ದರು. 2016-17ರಲ್ಲಿ ಮೇಲಿನ ಕ್ರಮಾಂಕದಲ್ಲಿ ಅವಕಾಶ ಪಡೆದ ಬಳಿಕ ಕನ್ನಡಿಗ ಹಿಂತಿರುಗಿ ನೋಡಿಲ್ಲ. ಈ ಸೀಸನ್​ನಲ್ಲಿ 46.80 ರ ಸರಾಸರಿಯಲ್ಲಿ 702 ರನ್ ಗಳಿಸಿದ ಅವರು, ಕರ್ನಾಟಕದ ಪ್ರಮುಖ ರನ್-ಸ್ಕೋರರ್ ಆಗಿ ಹೊರಹೊಮ್ಮಿದರು.
    ಅಲ್ಲದೆ ರಾಷ್ಟ್ರೀಯ ಆಯ್ಕೆದಾರರು ಅವರ ಮೇಲೆ ಕಣ್ಣಿಟ್ಟಿರುವುದು ಕೂಡ ಖಾತ್ರಿಯಾಗಿತ್ತು. ಗಾಯಾಳು ಅಭಿನವ್ ಮುಕುಂದ್ ಬದಲಿಗೆ ಭಾರತದ 'ಎ' ತಂಡದಲ್ಲೂ ಸ್ಥಾನ ಪಡೆದಿದ್ದರು.


    ಇದರ ಬಳಿಕ ಕೂಡ ಸಮರ್ಥ್ ಆರ್ಭಟ ದೇಶೀಯ ಟೂರ್ನಿಯಲ್ಲಿ ಮುಂದುವರೆದಿತ್ತು. 2017/18 ರಣಜಿ ಟ್ರೋಫಿ ಸೀಸನ್​ನ 12 ಇನ್ನಿಂಗ್ಸ್‌ಗಳಿಂದ ಸಮರ್ಥ್​​ ಕಲೆಹಾಕಿದ್ದು ಬರೋಬ್ಬರಿ 652 ರನ್​ಗಳು. ತಮ್ಮ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆ ಸೀಸನ್​ನಲ್ಲಿ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿತ್ತು. ಇದಾದ ಬಳಿಕ ಕರ್ನಾಟಕ ವಿಜಯ್ ಹಝಾರೆ ಟ್ರೋಫಿಯನ್ನು ಗೆಲ್ಲುವಲ್ಲಿ ಸಮರ್ಥ್ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ಸಮರ್ಥ್ ಅವರನ್ನು ಖರೀದಿಸಲು ಯಾವುದೇ ಐಪಿಎಲ್ ಫ್ರಾಂಚೈಸಿಗಳು ಮುಂದಾಗಲಿಲ್ಲ.


    ಇನ್ನು ಭಾರತ ಎ ತಂಡವನ್ನು ಪ್ರತಿನಿಧಿಸಿದ್ದ ಸಮರ್ಥ್ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ 127 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಎ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಸಮರ್ಥ್ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.


    ಅನುಭವಿ ಆಟಗಾರರ ಕೊರತೆಯ ನಡುವೆ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ 28 ವರ್ಷದ ಸಮರ್ಥ್ ಕಳೆದ 5 ಇನಿಂಗ್ಸ್​ಗಳಿಂದ ಕಲೆಹಾಕಿದ್ದು ಬರೋಬ್ಬರಿ 413 ರನ್​ಗಳು. ಅದರಲ್ಲಿ ಎರಡು ಭರ್ಜರಿ ಅಜೇಯ ಶತಕಗಳು ( 158, 130 ) ಹಾಗೂ 2 ಬಿರುಸಿನ ಅರ್ಧಶತಕಗಳು ಮೂಡಿಬಂದಿರುವುದು ವಿಶೇಷ. ಭರ್ಜರಿ ಬ್ಯಾಟಿಂಗ್ ಜೊತೆಗೆ ಅತ್ಯುತ್ತಮವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಕರ್ನಾಟಕ ತಂಡ ವಿಜಯ್ ಹಝಾರೆ ಟೂರ್ನಿಯಲ್ಲಿ ಕ್ವಾಟರ್​ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಗುರುತಿಸಿಕೊಂಡಿದೆ.


    ಇನ್ನು 66 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ರವಿಕುಮಾರ್ ಸಮರ್ಥ್ 4171 ರನ್​ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 10 ಶತಕ ಹಾಗೂ 21 ಅರ್ಧಶತಕಗಳಿವೆ. ಕಳೆದೆರಡು ವರ್ಷಗಳಿಂದ ಅದ್ಭುತ ಫಾರ್ಮ್​ ಪ್ರದರ್ಶಿಸುತ್ತಿರುವ ಕನ್ನಡಿಗ, 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಐಪಿಎಲ್​ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೂ ಹರಾಜಾಗದಿರುವುದು ಮಾತ್ರ ಅಚ್ಚರಿಯೇ ಸರಿ.

    Published by:zahir
    First published: