‘ಬಸವರಾಜ್ ಬೊಮ್ಮಾಯಿ (Basavaraj Bommai) ಯಾರು?’ ಅಂದ್ರೆ ‘ಸಿಎಂ’ (CM) ಅಂತ ಎಲ್ಲರಿಗೂ ಗೊತ್ತು. ಆದರೆ ಅವರ ಹಿನ್ನೆಲೆ ಏನು? ಅವರ ರಾಜಕೀಯ ಜೀವನ (political career) ಹೇಗಿದೆ? ಸಿಎಂ ಆಗಿ ಅವರ ಸಾಧನೆಗಳೇನು? ಬಸವರಾಜ ಬೊಮ್ಮಾಯಿವರು ಸದ್ಯ ರಾಜ್ಯದ ಸಿಎಂ. ಮಾಜಿ ಸಿಎಂ, ದಿವಂಗತ ಎಸ್.ಆರ್. ಬೊಮ್ಮಾಯಿ (S.R. Bommai) ಅವರ ಪುತ್ರರಾದ ಬಸವರಾಜ ಬೊಮ್ಮಾಯಿ ತಾನು ‘ಸಿಎಂ’ ಅಂದರೆ ‘ಕಾಮನ್ ಮ್ಯಾನ್’ (Common Man) ಅಂತ ಹೇಳಿಕೊಂಡವರು. ಶಾಸಕರಾಗಿ (MLA), ಗೃಹ ಸಚಿವರಾಗಿ (Home Minister) ಪ್ರಸ್ತುತ ಸಿಎಂ ಆಗಿ ಆಡಳಿತ ನಡೆಸುತ್ತಿರುವ ಬಸವರಾಜ ಬೊಮ್ಮಾಯಿ, ರಾಜ್ಯ ರಾಜಕಾರಣದಲ್ಲಿ (Karnataka Politics) ಅಪಾರ ಅನುಭವ ಪಡೆದವರು. ಅವರ ರಾಜಕೀಯ ಜೀವನದ ಏಳು-ಬೀಳುಗಳ ಪರಿಚಯ ಇಲ್ಲಿದೆ…
ಮಾಜಿ ಸಿಎಂ ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ, ದಿವಂಗತ ಎಸ್ಆರ್ ಬೊಮ್ಮಾಯಿ ಅವರ ಪುತ್ರ. ಜನವರಿ 28, 1960ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಾಯಿ ಗಂಗಮ್ಮ. ಬೊಮ್ಮಾಯಿ-ಗಂಗಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ ಹಿರಿಯ ಮಗನೇ ಬಸವರಾಜ. ಇವರಿಗೆ ತಮ್ಮ ಹಾಗೂ ಇಬ್ಬರು ತಂಗಿಯರಿದ್ದಾರೆ.
ಬೊಮ್ಮಾಯಿ ಮೂಲತಃ ಕೈಗಾರಿಕೋದ್ಯಮಿ
ಬಸವರಾಜ್ ಬೊಮ್ಮಾಯಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರರು. ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ, ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.
ಇಂಜಿನಿಯರಿಂಗ್ ಪದವಿ ಬಿಟ್ಟು ಕೈಗಾರಿಕೋದ್ಯಮ
ಇಂಜಿನಿಯರಿಂಗ್ ಪದವಿ ಬಳಿಕ ಪುಣೆಯಲ್ಲಿ ಟಾಟಾ ಮೋಟಾರ್ಸ್ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೂರು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅವರು ಸ್ವತಂತ್ರವಾಗಿ ಹೋಗಲು ನಿರ್ಧರಿಸಿದರು. ಅಲ್ಲಿಂದ ತಿರುಗಿ ಊರಿಗೆ ಬಂದವರೇ ಕೈಗಾರಿಕೋದ್ಯಮಿಯಾಗಲು ನಿರ್ಧರಿಸಿದರು.
ಇದನ್ನೂ ಓದಿ: Channagiri: ಅಡಿಕೆನಾಡಲ್ಲಿ ಮುಗಿದೇ ಹೋಯ್ತಾ ಮಾಡಾಳ್-ವಡ್ನಾಳ್ ರಾಜಕೀಯ? ನೇಪಥ್ಯಕ್ಕೆ ಸರಿದ ಹಳೆ ಹುಲಿಗಳು!
ಜನತಾದಳದಿಂದ ರಾಜಕೀಯ ಪ್ರವೇಶ
ಬಸವರಾಜ ಬೊಮ್ಮಾಯಿ ತಂದೆಯಂತೆ ರಾಜಕೀಯ ಪ್ರವೇಶಿಸಿದರು. ಜನತಾದಳದ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. 1995ರಲ್ಲಿ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1996–1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆಎಚ್ ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರ 1997ರಲ್ಲಿ ಮೊದಲ ಬಾರಿಗೆ ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2003ರಲ್ಲಿಯೂ ವಿಧಾನ ಪರಿಷತ್ಗೆ ಮತ್ತೊಮ್ಮೆ ಆಯ್ಕೆಯಾದರು.
2008ರಲ್ಲಿ ‘ದಳ’ದಿಂದ ‘ಕಮಲ’ ಸೇರಿದ ಬೊಮ್ಮಾಯಿ
2008ರಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಬಸವರಾಜ ಬೊಮ್ಮಾಯಿ ದಳದಿಂದ ಬಿಜೆಪಿ ಸೇರಿದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಬಳಿಕ 2013 ಹಾಗೂ 2018ರಲ್ಲಿ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ತಂದೆಯಂತೆಯೇ ಸಿಎಂ ಆಗಿ ಪ್ರಮಾಣವಚನ
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅವರನ್ನು ಸಹಕಾರ ಸಚಿವರನ್ನಾಗಿ ನೇಮಿಸಲಾಯಿತು. ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಬಳಿಕ ಸಿಎಂ ನಂತರದ ಪ್ರಮುಖ ಖಾತೆಯಾದ ಗೃಹ ಖಾತೆಯನ್ನೂ ಬೊಮ್ಮಾಯಿ ನಿರ್ವಹಿಸಿದರು. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಬಿಜೆಪಿ ಹೈಕಮಾಂಡ್ ಸೂಚನೆಯಂತೆ 2021 ಜುಲೈ 28ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದರು.
ಬಸವರಾಜ ಬೊಮ್ಮಾಯಿ ರಾಜಕೀಯ ಹೆಜ್ಜೆ ಗುರುತು
ರಾಜ್ಯದ ಜಲ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಬಸವರಾಜ ಬೊಮ್ಮಾಯಿ ಆಳವಾದ ಜ್ಞಾನ ಹೊಂದಿದ್ದಾರೆ ಎನ್ನಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಭಾರತದಲ್ಲೇ ಮೊದಲ ಶೇಕಡಾ 100ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ: Madhu Bangarappa: ಅಣ್ಣನ ಎದುರು ತೊಡೆ ತಟ್ಟಿರುವ ಮಧು ಯಾರು? ಇಲ್ಲಿದೆ ಬಂಗಾರಪ್ಪ ಪುತ್ರನ ರಾಜಕೀಯ ಕಹಾನಿ
ಕ್ರಿಕೆಟ್ ಎಂದರೆ ಅಚ್ಚುಮೆಚ್ಚು
ರಾಜಕೀಯ ಹೊರತಾಗಿ ಸಿಎಂ ಬಸವರಾಜ ಬೊಮ್ಮಾಯಿ ಕ್ರೀಡೆ, ಸಿನಿಮಾ ಸೇರಿಂದತೆ ಇತರೇ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಕ್ರೀಡೆಗಳ ಪೈಕಿ ಕ್ರಿಕೆಟ್ ಹಾಗೂ ಗಾಲ್ಫ್ ಎಂದರೆ ಇವರಿಗೆ ಇಷ್ಟದ ಕ್ರೀಡೆ. ಅಂದಹಾಗೆ ಈಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಧಾರವಾಡದ ಅಧ್ಯಕ್ಷರಾಗಿಯೂ ಬಸವರಾಜ ಬೊಮ್ಮಾಯಿ ಸೇವೆ ಸಲ್ಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ