• ಹೋಂ
  • »
  • ನ್ಯೂಸ್
  • »
  • Explained
  • »
  • Jamia Masjid Controversy: ಶ್ರೀರಂಗಪಟ್ಟಣದಲ್ಲಿರೋದು ಮಂದಿರವೋ, ಮಸೀದಿಯೋ? ಐತಿಹಾಸಿಕ ಸ್ಥಳ ಈಗ ವಿವಾದಿತ ಪ್ರದೇಶವಾಗಿದ್ದೇಕೆ?

Jamia Masjid Controversy: ಶ್ರೀರಂಗಪಟ್ಟಣದಲ್ಲಿರೋದು ಮಂದಿರವೋ, ಮಸೀದಿಯೋ? ಐತಿಹಾಸಿಕ ಸ್ಥಳ ಈಗ ವಿವಾದಿತ ಪ್ರದೇಶವಾಗಿದ್ದೇಕೆ?

ಶ್ರೀರಂಗಪಟ್ಟಣದ ವಿವಾದಿತ ಜಾಮಿಯಾ ಮಸೀದಿ

ಶ್ರೀರಂಗಪಟ್ಟಣದ ವಿವಾದಿತ ಜಾಮಿಯಾ ಮಸೀದಿ

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಒಂದು ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳ. ಇದೀಗ ಆ ಮಸೀದಿ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ರೆ ಏನಿದು ಜಾಮಿಯಾ ಮಸೀದಿ ವಿವಾದ? ಜಾಮಿಯಾ ಮಸೀದಿ ಮೊದಲು ಮಂದಿರವಾಗಿತ್ತಾ? ಈ ಬಗ್ಗೆ ದಾಖಲೆಗಳು ಹೇಳುವುದೇನು? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…

  • Share this:

ಶ್ರೀರಂಗಪಟ್ಟಣ, ಮಂಡ್ಯ: ಉತ್ತರ ಪ್ರದೇಶದ (Uttar Pradesh) ಕಾಶಿಯ (Kashi) ಜ್ಞಾನವಾಪಿ ಮಸೀದಿ (Gyanavapi Masjid) ವಿವಾದದ ಅರ್ಜಿ ವಿಚಾರಣೆಯನ್ನು ಕೋರ್ಟ್ (Court) ಕೈಗೆತ್ತಿಕೊಂಡಿರೋದು ಗೊತ್ತೇ ಇದೆ. ಜ್ಞಾನವಾಪಿ ಮಸೀದಿ ಮೊದಲು ಶಿವಾಲಯವಾಗಿತ್ತು (Shiva Temple), ಅದನ್ನು ಕೆಡವಿ ಮೊಘಲ್ ರಾಜ (Mughal king) ಔರಂಗಜೇಬ (Aurangzeb) ಮಸೀದಿ ಕಟ್ಟಿದ ಎನ್ನುವುದು ಹಿಂದೂ ಭಕ್ತರ ವಾದವಾಗಿತ್ತು. ಅದರ ಹಿನ್ನೆಲೆಯಲ್ಲಿ ವಿಡಿಯೋ ಸರ್ವೆ (Video Survey) ನಡೆಸಲು ಕೋರ್ಟ್ ಆದೇಸಿತ್ತು. ಈ ವೇಳೆ ಶಿವಲಿಂಗವೊಂದು (Shiva Linga) ಪತ್ತೆಯಾಗಿದೆ ಎನ್ನಲಾಗಿತ್ತು. ಸದ್ಯ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅದರ ಬೆನ್ನಲ್ಲೇ ಮಂಗಳೂರಿನ (Mangaluru) ಮಳಲಿಯಲ್ಲೂ (Malali) ಮಸೀದಿ ನವೀಕರಣದ ವೇಳೆ ಹಿಂದೂ ದೇಗುಲದ ಕುರುಹು ಪತ್ತೆಯಾಗಿತ್ತು. ಹಿಂದೂ ಕಾರ್ಯಕರ್ತರು ತಾಂಬೂಲ ಪ್ರಶ್ನೆ (Tambula Prashne) ಕೇಳಿದಾಗ ಅದೊಂದು ಮಠ (Math) ಅಥವಾ ಶಿವನ ಆರಾಧನ ಸ್ಥಳ ಅಂತ ಹೇಳಲಾಗಿದ್ಯಂತೆ. ಅತ್ತ ಮಳಲಿಯಲ್ಲಿ ಮಸೀದಿ ವಿವಾದ ನಡೆಯುತ್ತಿರುವಾಗಲೇ ಇತ್ತ ಮಂಡ್ಯದ (Mandya) ಶ್ರೀರಂಗಪಟ್ಟಣದಲ್ಲಿ (Srirangapatna) ಜಾಮಿಯಾ ಮಸೀದಿ ವಿವಾದ (Jamia Masjid Controversy)ಭುಗಿಲೆದ್ದಿದೆ. ಅದು ಹನುಮ ದೇಗುಲವಾಗಿದ್ದು (Hanuma Temple), ಟಿಪ್ಪು ಸುಲ್ತಾನ್ (Tipu Sultan) ಅದನ್ನು ಅದನ್ನು ಜಾಮಿಯಾ ಮಸೀದಿಯನ್ನಾಗಿ ಬದಲಾಯಿಸಿದ ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ ಹಿಂದೂ ಸಂಘಟನೆ ಕಾರ್ಯಕರ್ತರು ‘ಶ್ರೀರಂಗಪಟ್ಟಣ ಚಲೋ’ ಅಭಿಯಾನ ಹಮ್ಮಿಕೊಂಡಿದ್ದು ವಿವಾದಕ್ಕೆ ತುಪ್ಪ ಎರಚಿದಂತಾಗಿದೆ. ಹಾಗಿದ್ರೆ ಏನಿದು ಜಾಮಿಯಾ ಮಸೀದಿ ವಿವಾದ? ಜಾಮಿಯಾ ಮಸೀದಿ ಮೊದಲು ಮಂದಿರವಾಗಿತ್ತಾ? ಈ ಬಗ್ಗೆ ದಾಖಲೆಗಳು ಹೇಳುವುದೇನು? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…


ಇತಿಹಾಸದಲ್ಲಿ ಉಲ್ಲೇಖವಾಗಿದ್ದೇನು?


ಶ್ರೀರಂಗಪಟ್ಟಣದಲ್ಲಿ ಮಸ್ಜಿದ್ –ಇ – ಅಕ್ಸ ಎಂದೇ ಹೆಸರಾದ ಜಾಮಿಯಾ ಮಸೀದಿಯು ಐತಿಹಾಸಿಕ ಸ್ಥಳವಾಗಿದೆ. ಈ ಮಸೀದಿಯನ್ನು ಟಿಪ್ಪು ಸುಲ್ತಾನನು ಮೈಸೂರನ್ನು ತನ್ನ ವಶಕ್ಕೆ ಪಡೆದ ನಂತರ 1784ರಲ್ಲಿ ಕಟ್ಟಿಸಿದನು. ನಂಬಿಕೆಗಳ ಪ್ರಕಾರ ಟಿಪ್ಪು ಸುಲ್ತಾನ್ ಇಲ್ಲಿನ ಮೊದಲ ಇಮಾಮತ್ ಆಗಿ ಸ್ವತಃ ತಾನೆ ಕಾರ್ಯನಿರ್ವಹಿಸಿದನೆಂದು ಹೇಳಲಾಗುತ್ತದೆ. ಈ ಸ್ಮಾರಕವು ಟಿಪ್ಪುಸುಲ್ತಾನ ನೆಚ್ಚಿನ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು.


ಜಾಮಿಯಾ ಮಸೀದಿ ಹೇಗಿದೆ?


ಎರಡು ಅಂತಸ್ತಿನ ಈ ಮಸೀದಿಯು ಅಪರೂಪದ ಬಿಳಿಯ ಬಣ್ಣದ ಗುಮ್ಮಟವನ್ನು ಹೊಂದಿದೆ. ಜೊತೆಗೆ ಪ್ರಬಲ ಗೋಪುರಗಳನ್ನು ಹಾಗೂ ಎರಡು ಮಿನಾರ್ ಗಳನ್ನು ಹೊಂದಿದೆ. ಅಲ್ಲದೆ ಈ ಮಸೀದಿಯು 97 ವರ್ಷಗಳಷ್ಟು ಹಳೆಯದಾದೆಂದು ಹೇಳಲಾಗುವ ಟ್ರಿಕ್ ಟಾಕಿಂಗ್ ಗಡಿಯಾರವನ್ನು ಹೊಂದಿದೆ. ಇದು ಇಂದಿಗೂ ಸುಸ್ಥಿತಿಯಲ್ಲಿದ್ದು, ವೇಳೆ ತೋರಿಸುತ್ತದೆ.


ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?


ಸುಂದರ ವಾಸ್ತುಶಿಲ್ಪ ಇಲ್ಲಿದೆ


ಇದರ ಪಶ್ಚಿಮ ಭಾಗದಲ್ಲಿ ಒಂದು ಹಜಾರವಿದ್ದು ಇದು ಪ್ರಾರ್ಥನೆಯ ಮೊಗಸಾಲೆಯನ್ನು ಮತ್ತು ಮಸೀದಿಯ ಮಿಹ್ರಾಬನ್ನು ಅಂದರೆ ಮೆಕ್ಕಾದ ದಿಕ್ಕು ಸೂಚಿಸುವ ತಾಣವನ್ನು ಹೊಂದಿದೆ. ಮಸೀದಿಯು ಎತ್ತರವಾದ ಬುನಾದಿಯ ಮೇಲೆ ನಿರ್ಮಾಣಗೊಂಡಿದ್ದು, ಮುಂದೆ ತೆರೆದ ಅಂಗಳವಿದೆ. ಗುಮ್ಮಟಗಳನ್ನು ಅಷ್ಟಕೋನಾಕೃತಿಯ ಮಿನಾರುಗಳ ಮೇಲೆ ಸ್ಥಾಪಿಸಲಾಗಿದೆ.  ಈ ಮಿನಾರುಗಳಿಗೆ ಪಾರಿವಾಳದ ಕಿಂಡಿಗಳನ್ನು ಮಾಡಲಾಗಿದೆ. 200 ಮೆಟ್ಟಿಲು ಹತ್ತಿ ಮಿನಾರಿನ ತುದಿಗೆ ಹೋದರೆ ಅಲ್ಲಿಂದ ಸುತ್ತಲ ಸುಂದರ ಪ್ರದೇಶಗಳನ್ನು ನೋಡಬಹುದು.


ಅಲ್ಲಾನ 99 ಹೆಸರುಗಳ ಉಲ್ಲೇಖದ ಶಾಸನ


ಇಲ್ಲಿ 50 ವರ್ಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ ಅಬ್ದುಲ್ ಹಫೀಝ್ ಜುನೈದಿಯವರು ಈ ಮಸೀದಿಯ ಏಕೈಕ ಇಮಾಮ್ ಎಂದು ಹೇಳುತ್ತಾರೆ.  ಇಲ್ಲಿ ಅಲ್ಲಾನ 99 ಹೆಸರುಗಳನ್ನು ಮುದ್ರಿಸಿರುವ ಶಾಸನವೊಂದನ್ನು ನೋಡಬಹುದು. ಈ ಮಸೀದಿಯ ಆವರಣದಲ್ಲಿ ಒಂದು ಮದ್ರರಸಾ ಎಂದು ಕರೆಯಲಾಗುವ ಧಾರ್ಮಿಕ ಶಿಕ್ಷಣ ಸಂಸ್ಥೆಯಿದೆ.




ಜಾಮಿಯಾ ಮಸೀದಿ ಕುರಿತು ವಿವಾದವಾಗಿದ್ದೇಕೆ?


ಟಿಪ್ಪು ಸುಲ್ತಾನ್ ಈ ಮಸೀದಿ ಕಟ್ಟಿಸಿದ್ದು ಅಂತ ಇತಿಹಾಸ ಪುಸ್ತಕದಲ್ಲಿ ಹೇಳಲಾಗಿದೆ. ಆದರೆ ಇದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಇದು ಮೊದಲು ಹನುಮಾನ್ ಮಂದಿರವಾಗಿದ್ದು, ಅದನ್ನು ಟಿಪ್ಪು ಸುಲ್ತಾನ್ ಮಸೀದಿಯನ್ನಾಗಿ ಬದಲಾಯಿಸಿದ ಎನ್ನುವ ಗಂಭೀರ ಆರೋಪ ಮಾಡಲಾಗಿದೆ.


ಪೂಜೆಗೆ ಅವಕಾಶ ನೀಡುವಂತೆ ಹಿಂದೂ ಸಂಘಟನೆ ಪಟ್ಟು


ಈ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದೂ ಸಂಘಟನೆಗಳು ಈ ಮಸೀದಿಯಲ್ಲಿ ಆಂಜನೇಯ ಮೂರ್ತಿಯ ಪೂಜೆ ಮಾಡಲು ಅನುಮತಿ ಕೋರಿದ್ದರು. ಪುರಾತತ್ವ ಇಲಾಖೆ ಐತಿಹಾಸಿಕ ತತ್ವಗಳ ಅಭ್ಯಾಸ ನಡೆಸಿ ಈ ಪ್ರಕರಣದ ಅನ್ವೇಷಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಇದೇ ಕಾರಣಕ್ಕೆ ಇಂದು ಶ್ರೀರಂಗಪಟ್ಟಣ ಚಲೋ ಹಮ್ಮಿಕೊಳ್ಳಲಾಗಿತ್ತು.


ಐತಿಹಾಸಕ ಸ್ಮಾರಕದಲ್ಲಿ ಮದರಸಾ ನಡೆಸಲು ವಿರೋಧ


ಇನ್ನು ಇದು ಐತಿಹಾಸಕ ಸ್ಮಾರಕ ಅಂತ ಸರ್ಕಾರಿ ದಾಖಲೆಗಳೇ ಹೇಳುತ್ತಿವೆ. ಹೀಗಾಗಿ ಇಲ್ಲಿ ಮದರಸಾ ನಡೆಸುತ್ತಿರುವುದು ಕಾನೂನು ಬಾಹಿರ ಅಂತ ಹಿಂದೂ ಸಂಘಟನೆ ಹೇಳಿದೆ.  ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಕಟ್ಟಡವಾಗಿದೆ. ಮೊನೊಮೆಂಟಲ್ ಆಕ್ಟ್‌ಗೆ ಒಳ ಪಡುವ ಕಟ್ಟಡ ಜಾಮಿಯಾ ಮಸೀದಿಯಾಗಿದ್ದು, ಈ ಆ್ಯಕ್ಟ್‌ನ ಪ್ರಕಾರ ಮಸೀದಿಯಲ್ಲಿ ಯಾರು ವಾಸ್ತವ್ಯ ಹೂಡುವ ಹಾಗೆ ಇಲ್ಲ. ಹೀಗಿದ್ದರೂ ಮಸೀದಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಮದರಸಾ ಮಾದರಿಯಲ್ಲಿ ಅರೆಬಿಕ್ ಶಿಕ್ಷಣ ನೀಡಲಾಗುತ್ತದೆ.


1935ರ ಭಾರತ ಸರ್ಕಾರದ ಸರ್ವೆ ಏನು ಹೇಳುತ್ತದೆ?


1935ರಲ್ಲಿ ನಡೆದ ಭಾರತ ಸರ್ಕಾರದ ಸರ್ವೆ ಇದು ಮೊದಲು ಮಂದಿರವಾಗಿತ್ತು ಎನ್ನವುದುನ್ನು ಹೇಳುತ್ತದೆ. ಟಿಪ್ಪು ಸುಲ್ತಾನ್ ಆಂಜನೇಯ ದೇಗುಲ ಧ್ವಂಸಗೊಳಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಟಿಪ್ಪು ಸುಲ್ತಾನ ದೇವಾಲಯ ಮಾದರಿಯಲ್ಲೇ ಮಸೀದಿ ನಿರ್ಮಾಣ ಮಾಡಿದ್ದಾಗಿ ಹೇಳಲಾಗಿದೆ. ದೇಗುಲದ ಮೊದಲ ಮಹಡಿ ಎತ್ತರಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ ಅಂತ ಹೇಳಲಾಗಿದೆ.


ಇತಿಹಾಸಕಾರರು ಹೇಳಿದ್ದೇನು?


‘ಟಿಪ್ಪು ಸುಲ್ತಾನ್‌ ಮಸೀದಿ ನಿರ್ಮಿಸುವುದಕ್ಕೂ ಮುನ್ನ ಆ ಸ್ಥಳದಲ್ಲಿ ಹನುಮಂತನ ದೇಗುಲ ಇತ್ತು ಎಂಬ ಅಂಶವನ್ನು ಟಿಪ್ಪು ಆಸ್ಥಾನದ ಪರ್ಶಿಯನ್‌ ಬರಹಗಾರರು ಉಲ್ಲೇಖಿಸಿದ್ದಾರೆ’ ಎಂದು ಸಾಹಿತಿ ಪ್ರೊ.ಎಂ.ಕರಿಮುದ್ದೀನ್‌ ಹೇಳುತ್ತಾರೆ ಅಂತ ಪ್ರಜಾವಾಣಿ ಪತ್ರಿಕೆ ಉಲ್ಲೇಖಿಸಿದೆ.


1979ರಿಂದ ಮಸೀದಿಯಲ್ಲಿ ಮದರಸಾ ಸ್ಥಾಪನೆ


ಇನ್ನು ಐತಿಹಾಸಿಕ ಸ್ಮಾರಕ ಆಗಿದ್ದರೂ ಇದರ ಒಳಗೆ ಮದರಸಾ ಸ್ಥಾಪಿಸಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅರೆಬಿಕ್ ಶಿಕ್ಷಣ ನೀಡಲಾಗುತ್ತಿದೆ. 1979ರಿಂದಲೂ ಇಲ್ಲಿ ಮದರಸಾ ನಡೆಯುತ್ತಿದೆ. ವಕ್ಫ್ ಬೋರ್ಡ್‌ನಿಂದಲೇ ಮದರಸಾಕ್ಕೆ ವಿರೋಧ ವ್ಯಕ್ತವಾಗಿದ್ದ ಬಗ್ಗೆ ಮಾಹಿತಿ ಇದೆ.


ಟಿಪ್ಪು ಪತ್ರದಲ್ಲೇ ಉಲ್ಲೇಖವಿದೆಯಾ?


ನರೇಂದ್ರ ಮೋದಿ ವಿಚಾರ ಮಂಚ್ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಈ ಬ್ಗಗೆ ಪ್ರಸ್ತಾಪ ಮಾಡಿದ್ದಾರೆ. "ಹನುಮಾನ್ ಮಂದಿರ ಮತ್ತು ಮಸೀದಿಯ ಕಂಬ ಮತ್ತು ಗೋಡೆಗಳ ಮೇಲಿನ ಹಿಂದೂ ಶಾಸನಗಳು ನಮ್ಮ ನಿಲುವನ್ನು ಬೆಂಬಲಿಸುವ ಟಿಪ್ಪು ಪರ್ಷಿಯಾದಲ್ಲಿ ಆಡಳಿತಗಾರನಿಗೆ ಪತ್ರ ಬರೆದಿರುವ ಸಾಕ್ಷ್ಯಚಿತ್ರ ಸಾಕ್ಷ್ಯವಾಗಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Explained: ತಾಜ್ ಮಹಲ್ಲೋ, ತೇಜೋ ಮಹಾಲಯವೋ? ಮುಚ್ಚಿದ ಆ 20 ಕೋಣೆಗಳಲ್ಲಿ ಏನಿದೆ ಗೊತ್ತಾ?


ಸದ್ಯ ಜಾಮಿಯಾ ಮಸೀದಿಗೆ ಬಿಗಿ ಭದ್ರತೆ


ಸದ್ಯ ತೀವ್ರ ವಿವಾದದ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿಗೆ ತೀವ್ರ ಭದ್ರತೆ ಒದಗಿಸಲಾಗಿದೆ. ಮಸೀದಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು