ಗ್ರಾಮಗಳಲ್ಲಿ ಪ್ರತಿದಿನ ಕಂಡುಬರುವ ಸಾಮಾನ್ಯ ದೃಶ್ಯವೆಂದರೆ ಹಸು, ಎಮ್ಮೆಗಳು ರಸ್ತೆಯಲ್ಲಿ (Road) ಓಡಾಡುತ್ತಾ, ರಸ್ತೆ ಸವಾರರಿಗೆ, ದಾರಿಹೋಕರಿಗೆ ತೊಂದರೆಯನ್ನುಂಟು ಮಾಡುತ್ತಿರುತ್ತವೆ. ನಂತರ ಅವುಗಳ ಟಾರ್ಗೆಟ್ ಹೊಲ, ಗದ್ದೆ ಆಗಿರುತ್ತವೆ. ಅಲ್ಲಿಗೆ ಹೋಗಿ ಹೊಲದಲ್ಲಿ ಹಾಕಿರುವ ಬೆಳೆಗಳನ್ನು ಹಾಳು ಮಾಡುತ್ತವೆ. ಪ್ರತಿದಿನ ಈ ಬಿಡಾಡಿ ದನಗಳಿಂದ ಮತ್ತು ಕಾಡು ಪ್ರಾಣಿಗಳಿಂದ (Wild Animals) ಕೃಷಿ ಭೂಮಿಯನ್ನು (Agricultural land) ರಕ್ಷಿಸುವ ಕೆಲಸವನ್ನು ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಪ್ರತಿಕ್ಷಣ ಯಾರೂ ಕೂಡ ಈ ಪ್ರಾಣಿಗಳಿಂದ ಕೃಷಿಭೂಮಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ. ಆದರೆ ಹೊಲ, ಗದ್ದೆಗಳಿಗೆ ಹಾಕುವ ಬೇಲಿ ಈ ಪ್ರಾಣಿಗಳಿಂದ ಖಂಡಿತ ಕೃಷಿ ಭೂಮಿಯನ್ನು ರಕ್ಷಣೆ ಮಾಡಿಯೇ ಮಾಡುತ್ತದೆ.
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಖಪರ್ವಾಡಿ ಬುದ್ರುಕ್ ಗ್ರಾಮದ ಜಗನ್ ಪ್ರಹ್ಲಾದ್ ಬಾಗಡೆ ಅವರು ಮಾಡಿದ್ದು ಇದನ್ನೇ. ಅವರು ತಮ್ಮ ಕೃಷಿ ಭೂಮಿಗೆ ಜೈವಿಕ ಬೇಲಿಯನ್ನು ಬೆಳೆಸಿದ್ದಾರೆ. ಈ ಬೇಲಿಯನ್ನು ಸಂಪೂರ್ಣವಾಗಿ ಕಳ್ಳಿಗಳಿಂದ ಬೆಳೆಸಲಾಗಿದೆ. ಇದಕ್ಕೆ ಸ್ಥಳೀಯವಾಗಿ ನಿವ್ಡಂಗ್ ಎಂದು ಕರೆಯಲಾಗುತ್ತದೆ. ಇದು ಈಗ 12 ಅಡಿಗಳವರೆಗೆ ಬೆಳೆದಿದೆ ಮತ್ತು ಅವರ 30 ಎಕರೆ ಜಮೀನನ್ನು ಸುತ್ತುವರೆದಿದೆ. ಈಗ ಅರ್ಥವಾಗುತ್ತಿರಬೇಕಲ್ವಾ ಬೇಲಿ ಬಗ್ಗೆ ಯಾಕೆ ಹೇಳ್ತಿದಾರೆ ಅಂತ.
ಹಾಗಿದ್ರೆ ಈ ಜೈವಿಕ ಬೇಲಿ ಅಥವಾ ಬಯೋಫೆನ್ಸಿಂಗ್ ಎಂದ್ರೇನು?
ಜೈವಿಕ ಬೇಲಿ ಅಥವಾ ಬಯೋಫೆನ್ಸಿಂಗ್ ಅನ್ನು ಲೈವ್ ಫೆನ್ಸಿಂಗ್ ಎಂದೂ ಕರೆಯುತ್ತಾರೆ. ಇದು ಫಾರ್ಮ್ ಅಥವಾ ಹೊಲದ ಬದಿಯಲ್ಲಿ ನೆಡಲಾದ ಮರಗಳು ಅಥವಾ ಪೊದೆಗಳ ಸಾಲು ಆಗಿದೆ. ಇದು ಮರ, ಮುಳ್ಳುತಂತಿ ಅಥವಾ ಕಲ್ಲುಗಳಿಂದ ಮಾಡಿದ ಬೇಲಿಗಳಿಗಿಂತ ಕಡಿಮೆ ವೆಚ್ಚದಾಯಕ ಮತ್ತು ಹೆಚ್ಚು ಉಪಯುಕ್ತವಾಗಿದೆ. ಇಂತಹವುಗಳನ್ನು ಪರಿಸರವಾದಿಗಳು ಜೈವಿಕ, ಪರಿಸರ ಸ್ನೇಹಿ ವಿಧಾನವೆಂದು ಪರಿಗಣಿಸುತ್ತಾರೆ.
ಜಗನ್ ಬಾಗಡೆ ಅವರ ಹೊಲಗಳ ಬದಿಯಲ್ಲಿರುವ ಕಳ್ಳಿ ಯುಫೋರ್ಬಿಯಾ ಲ್ಯಾಕ್ಟಿಯಾ, ಇದು ಭಾರತದಲ್ಲಿ ಬೆಳೆಯುವ ಸ್ಥಳೀಯ ಸಸ್ಯವಾಗಿದೆ ಮತ್ತು 16 ಅಡಿ ಎತ್ತರದವರೆಗೆ ಬೆಳೆಯುವ ಸಸ್ಯವಾಗಿದ್ದು, ಸಣ್ಣ ಮುಳ್ಳುಗಳನ್ನು ಹೊಂದಿರುವ ಕೊಂಬೆಗಳು ಇರುವ ಪೊದೆ ಸಸ್ಯವಾಗಿದೆ. “ನಾನು ನನ್ನ ಜಮೀನಿನ ಅಂಚಿನಲ್ಲಿ ಕಳ್ಳಿ ಗಿಡಗಳನ್ನು ನೆಡಲು ಪ್ರಾರಂಭಿಸಿದಾಗ ಜನರು ನನ್ನನ್ನು ನೋಡಿ ನಕ್ಕರು. ಅವರು ನನ್ನನ್ನು ಮೂರ್ಖ ಎಂದು ಕರೆದರು. ಅವನು ಹುಚ್ಚನಾಗಿದ್ದಾನೆ ಎಂದು ಆಡಿಕೊಂಡರು. ಏಳು ವರ್ಷಗಳ ನಂತರ ಕಳ್ಳಿ ಸಸ್ಯವು ಸಂಪೂರ್ಣವಾಗಿ ಅವರ ಹೊಲವನ್ನು ಸುತ್ತುವರಿದಿತ್ತು” ಎಂದು ಬಾಗಾಡೆ ಅವರು ನೆನಪಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Pears Farming: ಅರೇ ವಾವ್! ಈ ಹಣ್ಣು ಬೆಳೆಸಿ ವರ್ಷಕ್ಕೆ 25 ಲಕ್ಷ ರೂಪಾಯಿ ಗಳಿಸ್ತಾರೆ ರೈತ
ಅವರನ್ನು ಈಗ 'ಕಳ್ಳಿ ಮನುಷ್ಯ' ಎಂದು ಕರೆಯಲಾಗುತ್ತದೆ. ಜೈವಿಕ ಫೆನ್ಸಿಂಗ್ನ ಮಹತ್ವ ಮತ್ತು ವೆಚ್ಚ-ಪರಿಣಾಮಕಾರಿತ್ವದ ಕುರಿತು ರೈತರ ಸಭೆಗಳನ್ನು ಕರೆಯುತ್ತಾರೆ. ರೈತರನ್ನು ಉದ್ದೇಶಿಸಿ ಸ್ಥಳೀಯ ಕೃಷಿ ಅಧಿಕಾರಿಗಳು ಆಗಾಗ ಇದರ ಬಗ್ಗೆ ಮಾಹಿತಿ ನೀಡುತ್ತಾರೆ. ಜಗನ್ ಬಾಗಡೆಯ ಅವರ ಜೈವಿಕ ಬೇಲಿಯ ಮಹತ್ವವನ್ನು ಮನಗಂಡ ಸುಮಾರು 30ಕ್ಕೂ ಹೆಚ್ಚು ರೈತರು ಈಗಾಗಲೇ ತಮ್ಮ ಜಮೀನಿನ ಬದಿಯಲ್ಲಿ ಪಾಪಾಸು ಕಳ್ಳಿಗಳನ್ನು ನೆಟ್ಟಿದ್ದಾರೆ. ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳ ಮೂಲಕ ಸುದ್ದಿ ಹರಡುತ್ತಿದ್ದಂತೆ, ರಾಜ್ಯದ ವಿವಿಧ ಭಾಗಗಳಿಂದ ರೈತರು ಅವರನ್ನು ಭೇಟಿ ಮಾಡಿ ಜೈವಿಕ ಫೆನ್ಸಿಂಗ್ ಬಗ್ಗೆ ಕಲಿಯಲು ಬರುತ್ತಿದ್ದಾರೆ.
ಈ ಜೈವಿಕ ಬೇಲಿ ಹೇಗೆ ಬಹುಪಯೋಗಿ ಆಗಿದೆ?
ಪಂಜಾಬ್ರಾವ್ ದೇಶಮುಖದ ಜೈವಿಕ ಮಿಷನ್ನ ತಾಲೂಕಾ ಅಧ್ಯಕ್ಷರಾಗಿದ್ದ ಜಗನ್ ಬಾಗಡೆ ಅವರು ಜೈವಿಕ ಕೀಟನಾಶಕಗಳ ಉತ್ಪಾದನೆ, ಆಧುನಿಕ ಉಪಕರಣಗಳ ಬಳಕೆ ಮತ್ತು ಜಲಸಂರಕ್ಷಣಾ ಚಟುವಟಿಕೆಗಳಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಳ್ಳುತ್ತಿದ್ದರು. ಸ್ಥಳೀಯ ಕೃಷಿ ಇಲಾಖೆಯ ನೆರವಿನಿಂದ ಎಕರೆಗಟ್ಟಲೆ ಪಾಳು ಬಿದ್ದ ಭೂಮಿಯನ್ನು ಕೃಷಿಗೆ ಸಿದ್ಧಗೊಳಿಸಲಾಗಿದೆ. ಕಾಂಟೂರ್ ಬಂಡಿಂಗ್, ಕಂಪಾರ್ಟ್ಮೆಂಟ್ ಬಂಡಿಂಗ್, ಇಳಿಜಾರುಗಳಲ್ಲಿ ಅಡ್ಡ ಬಿತ್ತನೆ ಇತ್ಯಾದಿ ಕಾರ್ಯಗಳಲ್ಲಿ ರೈತರು ಪರಿಣತಿ ಹೊಂದಿದ್ದಾರೆ.
2007 ರಲ್ಲಿ 35 ಕಿಮೀ ದೂರದಲ್ಲಿರುವ ವಾರಿ ಹನುಮಾನ್ ಅಣೆಕಟ್ಟಿನಿಂದ ಕುಡಿಯುವ ನೀರು ಲಭ್ಯವಾಗುತ್ತಿತ್ತು. ಇದರಿಂದ ಆಗಾಗ ಗ್ರಾಮಸ್ಥರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದರು. ಆದರೆ,ಮೇ 2018 ರಲ್ಲಿ, ಗ್ರಾಮಸ್ಥರು 19 ಕೃಷಿ ಹೊಂಡಗಳನ್ನು ಅಗೆದಿದ್ದರಿಂದ ಇದರ ಕಾರಣವಾಗಿ ಅಂತರ್ಜಲ ಮಟ್ಟವು ಹಿಂದಿನ 30 ಅಡಿಗಳಿಂದ 10 ಅಡಿಗಳಿಗೆ ಏರಿಕೆಯಾಗಿದೆ. ಅತ್ಯಂತ ಗಮನಾರ್ಹವಾಗಿ ಉಪ್ಪುನೀರು ಸಿಹಿ ನೀರಾಗಿ ಕುಡಿಯಲು ಯೋಗ್ಯವಾದ ನೀರಾಗಿ ಬದಲಾಗಿದೆ.
ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳು
ಈಗ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಜಗನ್ ಬಾಗಡೆಯಂತಹ ರೈತರು ವರ್ಷಗಟ್ಟಲೆ ಕಾಡುಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು ಮತ್ತು ಪಟಾಕಿ ಅಥವಾ ಏರ್ ಗನ್ಗಳಿಂದ ಅವುಗಳನ್ನು ಹೆದರಿಸುತ್ತಿದ್ದರು. ಆದರೆ, ಜಗನ್ ಬಗಾಡೆ ಅವರು ಬೆಳೆಯುತ್ತಿರುವ ಪಾಪಾಸು ಕಳ್ಳಿ ಎಂಬ ಜೈವಿಕ ಬೇಲಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ನೋಡುವವರೆಗೂ ಇದೆಲ್ಲ ನಡೆಯುತ್ತಿತ್ತು. ಆದರೆ ಈಗ ಆದಷ್ಟು ಕಡಿಮೆ ಆಗಿದೆ ಎಂಬುದು ಇಲ್ಲಿನ ಜನರ ಅಭಿಪ್ರಾಯ.
ಇದನ್ನೂ ಓದಿ: Aloe Vera Farming: ಲಕ್ಷ ಲಕ್ಷ ಆದಾಯ ಕೊಡುವ ಕೃಷಿ ಇದು, ಟೀ ಮಾರುತ್ತಿದ್ದವ ಇದನ್ನು ನಂಬಿ ಲಕ್ಷಾಧಿಪತಿಯಾದ!
ಬಾಗಡೆ ವಿವರಿಸುತ್ತಾರೆ, "ನಾನು ಪ್ರತಿ ಸಸ್ಯದ ನಡುವೆ ಒಂದು ಅಡಿ ಅಂತರವನ್ನು ಇರಿಸಿ ಮತ್ತೊಂದು ಸಸ್ಯವನ್ನು ನೆಡುತ್ತೇನೆ. ಈ ಕಳ್ಳಿನ ಸಸ್ಯಕ್ಕೆ ಮುಳ್ಳು ಹೆಚ್ಚು ಇರುವುದರಿಂದ ಯಾವುದೇ ಕಾಡು ಪ್ರಾಣಿಗಳು ಹೊಲಗಳಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಈಗ ಈ ಸಸ್ಯಗಳು ಅನೇಕ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಆವಾಸಸ್ಥಾನವಾಗಿ ಕಾರ್ಯನಿರ್ವಹಿಸುತ್ತದೆ.
ಜೈವಿಕ ಬೇಲಿಗಳ ಪ್ರಯೋಜನಗಳು
“ಜೈವಿಕ ಬೇಲಿಗಳು ಮೇವು, ರಸಗೊಬ್ಬರ ಮತ್ತು ವಿಂಡ್ ಬ್ರೇಕರ್ಗಳನ್ನು ಒದಗಿಸುತ್ತದೆ. ಜೀವವೈವಿಧ್ಯತೆಯನ್ನು ಸಂರಕ್ಷಿಸುವುದರ ಜೊತೆಗೆ ಮತ್ತು ಕಾರ್ಬನ್ ಡೈಆಕ್ಸೈಡ್ನಂತಹ ಹವಾಮಾನ-ಪ್ರಚೋದಕ ಅನಿಲಗಳನ್ನು ಹೀರಿಕೊಳ್ಳುವಂತಹ ಬಹು ಉದ್ದೇಶಗಳನ್ನು ಕೂಡ ಇದು ಪೂರೈಸುತ್ತದೆ.
ಜೈವಿಕ ಬೇಲಿಗಳು ವಿಂಡ್ ಬ್ರೇಕರ್ ಆಗಿಯೂ ಕೆಲಸ ಮಾಡುತ್ತವೆ. ಹಾಗೆಯೇ, ಬಿದ್ದ ಎಲೆಗಳು ಉತ್ತಮ ಪೋಷಕಾಂಶಗಳಾಗಿ ಕಾರ್ಯನಿರ್ವಹಿಸುತ್ತವೆ, ಮಣ್ಣಿನ ತೇವಾಂಶವನ್ನು ಸಂರಕ್ಷಿಸುತ್ತವೆ” ಎಂದು ಜಗನ್ ಬಾಗಡೆ ಅವರು ಹೇಳುತ್ತಾರೆ. "ಆರಂಭದಲ್ಲಿ, ನಾನು ಒಂದು ಎಕರೆಯಲ್ಲಿ ಮುಳ್ಳುತಂತಿಯ ಬೇಲಿಯನ್ನು ನಿರ್ಮಿಸಿದೆ, ಅದು ನನಗೆ 40,000 ರೂ ವೆಚ್ಚವಾಯಿತು ಆದರೆ, ನನ್ನ ಸಂಪೂರ್ಣ ಕೃಷಿ ಭೂಮಿಗೆ ಬೇಲಿ ಹಾಕಲು ಬಯಸಿದರೆ ನಾನು ಹೊಲವನ್ನೇ ಮಾರಾಟ ಮಾಡಬೇಕಾಗುತ್ತದೆ ಎಂದು ತಿಳಿದುಕೊಂಡೆ. ಆದ್ದರಿಂದ ಜೈವಿಕ ಬೇಲಿಗೆ ಮೊರೆ ಹೋದೆ” ಎನ್ನುತ್ತಾರೆ ಬಾಗಡೆ.
ಕೆಲ ವರ್ಷಗಳಿಂದ ಬಾಗಡೆ ಅವರ ಬೆಳೆ ಉತ್ಪಾದನೆಯು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಕೃಷಿಕರಾಗಿ ಅವರ ಯಶಸ್ಸಿಗೆ ಮತ್ತು ದಾಖಲೆಗೆ ಜೈವಿಕ ಬೇಲಿಯೇ ಕಾರಣವೆಂದು ಹೇಳುತ್ತಾರೆ. ಕಳೆದ ವರ್ಷ 8 ಕ್ವಿಂಟಾಲ್ ಸೋಯಾಬೀನ್ ಒಂದು ಎಕರೆಗೆ ಮತ್ತು 12 ಕ್ವಿಂಟಾಲ್ ಹತ್ತಿ ಒಂದು ಎಕರೆಗೆ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆಗಾಗಿ ಜಿಲ್ಲಾ ಅಧಿಕಾರಿಗಳು ಅವರನ್ನು ಸನ್ಮಾನಿಸಿದರು.
“ಆಕೋಟ್ ತಾಲೂಕಿನ ಕೃಷಿಭೂಮಿಗಳು ಹೆಚ್ಚಾಗಿ ಕಾಡು ಹಂದಿಗಳು, ನೀಲಗಾಯ್, ಜಿಂಕೆ ಮತ್ತು ಮಂಗಗಳು ಜಮೀನಿಗೆ ದಾಳಿ ಮಾಡಿ ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿವೆ. ವರ್ಷಗಳಿಂದ ಜಿಂಕೆಗಳ ಸಂಖ್ಯೆ ಹೆಚ್ಚುತ್ತಿದೆ. ಅವು ದೊಡ್ಡ ಗುಂಪುಗಳಲ್ಲಿ 25 ರಿಂದ 30 ಬಾರಿ ಹೊಲಗಳ ಮೇಲೆ ದಾಳಿ ಮಾಡುತ್ತವೆ ” ಎಂದು ಬಾಗಡೆ ಹೇಳುತ್ತಾರೆ.
ಕಳ್ಳಿ ಬೇಲಿಯನ್ನು ಬೆಳೆಸುವುದು ಹೇಗೆ
"ಆದರೆ ಈಗ ಅಂತಹ ಘಟನೆಗಳು ನಡೆಯುತ್ತಿಲ್ಲ. ಏಕೆಂದರೆ ಜೈವಿಕ ಬೇಲಿಯಿಂದ ಕಾಡುಪ್ರಾಣಿಗಳಿಗೆ ಹೊಲಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಜಗನ್ ಬಾಗಡೆ. ಕಳ್ಳಿ ಬೇಲಿಯನ್ನು ಬೆಳೆಸುವ ಬಗ್ಗೆ, ಬಾಗಡೆ ಅವರು “ಕನಿಷ್ಠ 2 ಅಡಿ ಎತ್ತರದ ಕತ್ತರಿಸಿದ ಗಿಡಗಳನ್ನು ನೆಡಬೇಕು ಮತ್ತು ಒಂದು ಅಥವಾ ಎರಡು ವರ್ಷಗಳಲ್ಲಿ ಸರಿಯಾಗಿ ಗೊಬ್ಬರ ಹಾಕಿದರೆ 5 ಅಡಿ ಎತ್ತರಕ್ಕೆ ಅವು ಬೆಳೆಯುತ್ತವೆ” ಎಂದು ಸಲಹೆ ನೀಡುತ್ತಾರೆ.
ಮಣ್ಣಿನ ಸಂರಕ್ಷಣೆ, ಅಂತರ್ಜಲ ಮರುಪೂರಣ, ಮಣ್ಣಿನ ಸಂರಕ್ಷಣೆಯಂತಹ ಚಟುವಟಿಕೆಗಳಲ್ಲಿ ಮುಂದಾಳತ್ವ ವಹಿಸಿರುವ ಪ್ರಗತಿಪರ ರೈತ ಬಾಗಡೆ ಅವರ ಜೈವಿಕ ಬೇಲಿ ಯಶಸ್ಸು ತಾಲೂಕಿನ ಇತರ ರೈತರಿಗೂ ಪ್ರೇರಣೆಯಾಗಿದೆ ಎನ್ನುತ್ತಾರೆ ಆಕೋಟ್ ತಾಲೂಕು ಕೃಷಿ ಅಧಿಕಾರಿ ಸುಶಾಂತ ಶಿಂಧೆ.
ಇದನ್ನೂ ಓದಿ: Organic Arrowroot: 7 ವರ್ಷ ಹಾಸಿಗೆಯಲ್ಲೇ ಮಲಗಿದ್ದ ಮಹಿಳೆ, ಈಗ ಕೋಟಿ ಕೋಟಿ ಒಡತಿ!
"ನಾನು ಹಾಗಲಕಾಯಿ, ಹಾವಿನ ಸೋರೆಕಾಯಿ ಮತ್ತು ವಿವಿಧ ಬೀನ್ಸ್ನಂತಹ ತರಕಾರಿಗಳನ್ನು ಬೆಳೆಯಬಲ್ಲೆ, ಇದಕ್ಕೂ ಪಾಪಸುಕಳ್ಳಿಯ ಅಗತ್ಯ ಖಂಡಿತ ನನಗೆ ಇದೆ. ಇಷ್ಟು ದಿನ ಪಾಪಸುಕಳ್ಳಿ ನೀಡಿದ ಬೆಂಬಲಕ್ಕೆ ಧನ್ಯವಾದಗಳು” ಎಂದು ಹೇಳುತ್ತಾ ಜೈವಿಕ ಬೇಲಿಯ ಅನಪೇಕ್ಷಿತ ಪ್ರಯೋಜನದಿಂದ ಬಾಗಡೆ ಸಂತಸಗೊಂಡಿದ್ದೇನೆ ಎಂದು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ