ಕರ್ನಾಟಕದಲ್ಲಿ (Karnataka) ನಡೆದಿರುವ ಪಿಎಸ್ಐ ಪರೀಕ್ಷೆ ಹಗರಣ (PSI Exam Scam) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪಿಎಸ್ಐ ಪರೀಕ್ಷೆ ಹೆಸರಲ್ಲಿ ಕೋಟಿ ಕೋಟಿ ರೂಪಾಯಿಗಳ (Crore Rupees) ಹಗರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಿಜೆಪಿ ನಾಯಕಿ (BJP Leader), ಕಾಂಗ್ರೆಸ್ (Congress) ಪ್ರಭಾವಿಗಳ ಆಪ್ತರು ಸೇರಿದಂತೆ ರಾಜಕೀಯವಾಗಿ (Politically) ಪ್ರಬಲರಾಗಿರುವವರೇ ಇದರಲ್ಲಿ ಶಾಮೀಲಾಗಿರುವ (Involved) ಶಂಕೆ ಇದೆ. ಅಕ್ಟೋಬರ್ 2021 ರಲ್ಲಿ ನಡೆದ ಲಿಖಿತ ಪರೀಕ್ಷೆಗಳಲ್ಲಿ (Written Test) ಅಕ್ರಮ ನಡೆದಿದೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ತನಿಖಾ ಇಲಾಖೆ (CID) ತನಿಖೆ ನಡೆಸುತ್ತಿದೆ. ಇದುವರೆಗೂ ಅನೇಕರನ್ನು ಬಂಧನ (Arrest) ಮಾಡಲಾಗಿದ್ದು, ತನಿಖೆ ಮುಂದುವರೆದಿದೆ. ಹಾಗಿದ್ರೆ ಏನಿದು ಹಗರಣ? ಇದರ ಆಳ, ಅಗಲವೇನು? ಈ ಕೇಸ್ನಲ್ಲಿ ಈವರೆಗೆ ಏನೇನಾಗಿದೆ ಎನ್ನುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…
ಪಿಎಸ್ಐ ಪರೀಕ್ಷೆ ನಡೆದಿದ್ದು ಯಾವಾಗ?
ಅಕ್ಟೋಬರ್ 2021 ರಲ್ಲಿ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿಗಾಗಿ ರಾಜ್ಯಾದ್ಯಂತ ಹಲವು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸುಮಾರು 54,041 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆಯಲ್ಲಿ ಕೋಟಿ ಕೋಟಿ ಪಡೆದು, ಕೆಲವೊಂದು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪರೀಕ್ಷಾ ಹಗರಣ ಬಯಲಾಗಿದ್ದು ಹೇಗೆ?
ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಪ್ರಾರಂಭದಿಂದಲೂ ಕೇಳಿ ಬಂದಿತ್ತು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಆರಂಭವಾಯಿತು. ಕಲಬುರಗಿಯ ಪರೀಕ್ಷಾ ಕೇಂದ್ರದ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಇನ್ವಿಜಿಲೇಟರ್ಗಳನ್ನು ಮೊದಲು ಪೊಲೀಸರು ವಶಕ್ಕೆ ಪಡೆದರು. ಬಂಧಿತ ಅಭ್ಯರ್ಥಿಗಳಲ್ಲಿ ಕಲಬುರಗಿಯ ಸೇಡಂ ಪಟ್ಟಣದ ವೀರೇಶ್ ಎಂಬ ವಿದ್ಯಾರ್ಥಿಯನ್ನು ಏಪ್ರಿಲ್ 11 ರಂದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಬಹುಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.
ವೀರೇಶ್ನಿಂದಲೇ ಬಯಲಾಯ್ತು ಅಕ್ರಮ
ಖುದ್ದು ವೀರೇಶ್ ಸ್ನೇಹಿತನಿಂದಲೇ ಅಕ್ರಮ ಬಯಲಾಗಿದ್ದು, ಜ್ಞಾನ ಜ್ಯೋತಿ ಶಾಲೆ ಸೆಂಟರ್ನಲ್ಲಿ ಪರೀಕ್ಷೆ ನಿಗದಿಯಾಗಿತ್ತು. PSI ಎಕ್ಸಾಂನಲ್ಲಿ ಹಣ ಕೊಟ್ರೆ ನೌಕರಿ ಸಿಗುತ್ತೆ ಅಂತಾ ಸ್ನೇಹಿತ ಹೇಳಿದ್ದ. ಹಣ ಕೊಡ್ತೀನಿ ನನ್ನನ್ನೂ ಆಯ್ಕೆ ಮಾಡಿಸು ಅಂತ ವೀರೇಶ್ ಹೇಳಿದ್ದ. ಕಿಂಗ್ಪಿನ್ ಜತೆ ಸೇರಿ 80 ಲಕ್ಷಕ್ಕೆ ಡೀಲ್ ಖುದುರಿಸಿದ್ದ ಮಾಹಿತಿ ಇದ್ದು, ಪರೀಕ್ಷೆಗೂ ಮುನ್ನವೇ ವೀರೇಶ್ 35 ಲಕ್ಷ ಹಣ ಕೊಟ್ಟಿದ್ದ. ಬಳಿಕ ಎಕ್ಸಾಂನಲ್ಲಿ ಕೇವಲ 20 ಮಾರ್ಕ್ಸ್ ಗೆ ವೀರೇಶ್ ಉತ್ತರ ಬರೆದಿದ್ದ.
ಇದನ್ನೂ ಓದಿ: Explained: ಡಿಜಿಟಲ್ ಬ್ಯಾಂಕಿಂಗ್ ಘಟಕ ಎಂದರೇನು? ಅದರ ಕಾರ್ಯ ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ
ಯಾರು ಈ ಆರೋಪಿ ವೀರೇಶ್?
ವೀರೇಶ್ ಪರೀಕ್ಷೆ ಪಾಸ್ ಮಾಡಲು ಲಂಚ ಕೊಟ್ಟಿದ್ದ ಅಭ್ಯರ್ಥಿ. ಅವರ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದರು. ವಿರೇಶ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಪರೀಕ್ಷೆಗೆ ಮೂರು ಬಾರಿ ಪ್ರಯತ್ನಿಸಿದ್ದರು ಆದರೆ ಅದನ್ನು ಪಾಸ್ ಮಾಡುವಲ್ಲಿ ವಿಫಲರಾಗಿದ್ದ. ಹೀಗಾಗಿ ಅಕ್ರಮವಾಗಿ ನೇಮಕಾತಿ ಮಾಡಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ. ಪರೀಕ್ಷೆಯಲ್ಲಿ ವೀರೇಶ್ಗೆ 121 ಮಾರ್ಕ್ಸ್ ಬಂದಿದ್ದವು, ಆನಂತರ 5 ಲಕ್ಷ ಹಣ ಕೊಡುವಂತೆ ಸ್ನೇಹಿತ ಬೇಡಿಕೆ ಇಟ್ಟಿದ್ದ
20 ಮಾರ್ಕ್ಸ್ಗೆ ಉತ್ತರಿಸಿದವನಿಗೆ 121 ಮಾರ್ಕ್ಸ್!
2021ರಲ್ಲಿ ವಿರೇಶ್ ಜಿಡಿಎ ಲೇಔಟ್ನಲ್ಲಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದರು. ಕೇವಲ 20 ಪ್ರಶ್ನೆಗಳಿಗೆ ಉತ್ತರಿಸಿದ್ದ ಅವರು 121 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ವಂಚನೆಯ ಮಾಸ್ಟರ್ಮೈಂಡ್ಗಳನ್ನು ಪರಿಚಯಿಸಿದ ವಿರೇಶ್ ತನ್ನ ಸ್ನೇಹಿತನಿಗೆ ಐದು ಲಕ್ಷ ರೂಪಾಯಿಯನ್ನು ಪಾವತಿಸಲು ನಿರಾಕರಿಸಿದಾಗ ವಿಷಯ ಬೆಳಕಿಗೆ ಬಂದಿತು.
ಮರು ಮೌಲ್ಯಮಾಪನಕ್ಕೆ ಒತ್ತಾಯಿಸಿದ್ದ ವಿದ್ಯಾರ್ಥಿಗಳು
ತಾತ್ಕಾಲಿಕ ಪಟ್ಟಿಯಲ್ಲಿ ತನ್ನ ಹೆಸರು ಕಾಣಿಸುತ್ತದೆ ಎಂದು ಭರವಸೆ ನೀಡಿದ್ದನು. ಸ್ನೇಹಿತ ಕೂಡ ಅದೇ ಪರೀಕ್ಷೆ ಬರೆದಿದ್ದ ಆದರೆ ಫೇಲ್ ಆಗಿದ್ದ. ವಿರೇಶ್ ಪಾವತಿಸಲು ನಿರಾಕರಿಸಿದಾಗ, ಸ್ನೇಹಿತ ತನ್ನ OMR ಶೀಟ್ನ ಚಿತ್ರವನ್ನು ತೆಗೆದುಕೊಂಡು ಅದನ್ನು ಪ್ರಸಾರ ಮಾಡಿದ ನಂತರ ಹಲವಾರು ಅಭ್ಯರ್ಥಿಗಳು ದುಷ್ಕೃತ್ಯದ ಬಗ್ಗೆ ಸರ್ಕಾರಕ್ಕೆ ದೂರು ನೀಡಿ ಮರುಮೌಲ್ಯಮಾಪನಕ್ಕೆ ಒತ್ತಾಯಿಸಿದರು.
ವೀರೇಶ್ ಅಕ್ರಮ ಬಯಲು ಮಾಡಿದ್ದ ಸ್ನೇಹಿತ
ಹಣ ಕೊಡದೇ ಇದ್ದಾಗ ಸ್ನೇಹಿತನೇ ವೀರೇಶ್ OMR ಶೀಟ್ ಬಯಲು ಮಾಡಿದ್ದ, ಬೇರೆ ಅಭ್ಯರ್ಥಿಗಳಿಗೆ ಶೇರ್ ಮಾಡಿ ಅಕ್ರಮದ ಬಗ್ಗೆ ಬಾಯಿ ಬಿಟ್ಟಿದ್ದ. ಕೂಡಲೇ ಸಿಎಂ ಮತ್ತು ಗೃಹ ಸಚಿವರಿಗೆ ಅಭ್ಯರ್ಥಿಗಳು ದೂರು ನೀಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಸರ್ಕಾರ ಒಪ್ಪಿಸಿದ್ದು, ಕಲಬುರಗಿಯ ಚೌಕ್ ಠಾಣೆಯಲ್ಲಿ ಸಿಐಡಿ FIR ದಾಖಲು ಮಾಡಿದ್ದರು. ವೀರೇಶ್ ಬಂಧಿಸಿ ವಿಚಾರಣೆ ನಡೆಸಿದಾಗ ಡೀಲ್ ಬಯಲಾಗಿದ್ದು, ಕಿಂಗ್ ಪಿನ್ ಕೋಟಿ-ಕೋಟಿ ಹಣ ಸಂಗ್ರಹ ಮಾಡಿರೋದು ಬಯಲಾಗಿದೆ.
ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮ
ಸಿಐಡಿಯಿಂದ ಮತ್ತೊಂದು ರೀತಿಯಿಂದ ಅಕ್ರಮ ಪರೀಕ್ಷೆ ಬರೆದ ಗ್ಯಾಂಗ್ ಪತ್ತೆ ಹಚ್ಚಲಾಗಿದೆ. ‘ಮುನ್ನಾಬಾಯಿ ಎಂಬಿಬಿಎಸ್’ ಸ್ಟೈಲ್ನಲ್ಲಿ ಅನೇಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಲೆಕ್ಟ್ರಾನಿಕ್ ಡಿವೈಸಿ ಬಳಸಿ ಉತ್ತರವನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್ ಗನ್ಮ್ಯಾನ್ ಹಯ್ಯಾಳಿ ದೇಸಾಯಿ ಕೂಡ ಮುನ್ನಾಬಾಯಿ ಎಂಬಿಬಿಎಸ್ ಸ್ಟ್ರೈಲ್ನಲ್ಲಿ ಹೊರಗಿನವರ ನೆರವು ಪಡೆದುಕೊಂಡು ಪರೀಕ್ಷೆ ಬರೆದಿದ್ದ. ಪರೀಕ್ಷಾ ಕೇಂದ್ರದ ಹೊರಗಿನವರ ನೆರವು ಪಡೆದು ಇದೇ ರೀತಿ ಅನೇಕರು ಪರೀಕ್ಷೆ ಬರೆದಿರುವ ಶಂಕೆ ವ್ಯಕ್ತವಾಗಿದೆ.
ಸತ್ತವರ ಮೊಬೈಲ್ ಬಳಸಿ ಪರೀಕ್ಷೆ
ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಕೋವಿಡ್ನಿಂದ ಮೃತಪಟ್ಟ ನೌಕರನ ಮೊಬೈಲ್ನನ್ನು ಕಿಂಗ್ಪಿನ್ ಆರ್.ಡಿ. ಪಾಟೀಲ್ ಬಳಸುತ್ತಿದ್ದ ಎನ್ನುವ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಸೊನ್ನ ಗ್ರಾಮದ ಲಕ್ಷ್ಮೀಪುತ್ರ ಎಂಬವರು ಆರ್ಡಿ ಪಾಟೀಲ್ ಬಳಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಕ್ಷ್ಮಿಪುತ್ರ ಕೋವಿಡ್ನಿಂದ ಮೃತಪಟ್ಟಿದ್ದರು. ಇವರು ಮೃತಪಟ್ಟ ಬಳಿಕ ಇವರ ಬಳಿ ಇದ್ದ ಎರಡು ಮೊಬೈಲ್ಗಳಲ್ಲಿ ಒಂದನ್ನು ಆರ್ಡಿ ಪಾಟೀಲ್ ಇಟ್ಟುಕೊಂಡಿದ್ದ. ಅದೇ ಮೊಬೈಲ್ನಿಂದ ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ.
ಬಿಜೆಪಿ ನಾಯಕಿಯಿಂದಲೇ ಅಕ್ರಮ
ಈ ಅಕ್ರಮದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಂಬಾಕೆ ಶಾಮೀಲಾಗಿರೋ ಆರೋಪ ಕೇಳಿ ಬಂದಿದೆ. ಈಕೆ ಕಲಬುರಗಿ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಒಡತಿ, ದಿವ್ಯಾ ಹಾಗರಗಿ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್ಪಿನ್ ಎಂಬುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಇದೀಗ ದಿವ್ಯಾ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಅವರ ಪತಿಯನ್ನು ಈಗಾಗಲೇ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ದಿವ್ಯಾ ಹಾಗರಗಿ ಪತಿ ಬಂಧನ
ದಿವ್ಯಾ ಒಡೆತನಕ್ಕೆ ಸೇರಿದ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ಎಸಗಿದ್ದರು. ಈ ಸಂಬಂಧ ವೀರೇಶ್ ಎಂಬಾತ ಸಿಕ್ಕಿಬಿದ್ದಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಜ್ಞಾನ ಜ್ಯೋತಿ ಶಾಲೆಯ ಮೂವರು ಸಿಬ್ಬಂದಿ ಹಾಗೂ ಮೂವರು ಪಿಎಸ್ಐ ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.ಇದರ ಬೆನ್ನಲ್ಲೇ ದಿವ್ಯಾ ಹಾಗರಗಿ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದ್ದರು.
ದಿವ್ಯಾ ತಲೆ ಮರೆಸಿಕೊಂಡಿದ್ದು, ಅವರ ಪತಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಇದೀಗ ನಿರೀಕ್ಷಣಾ ಜಾಮೀನು ಕೋರಿ ದಿವ್ಯಾ ಅಜ್ಙಾತ ಸ್ಥಳದಿಂದಲೇ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇದುವರೆಗೆ ಎಷ್ಟು ಜನರನ್ನು ಬಂಧಿಸಲಾಗಿದೆ?
ಸಿಐಡಿ ತನಿಖೆಯನ್ನು ಕೈಗೆತ್ತಿಕೊಂಡ ನಂತರ, ಎಲ್ಲಾ ಅಭ್ಯರ್ಥಿಗಳು ತಮ್ಮ OMR ಶೀಟ್ಗಳನ್ನು ಹಾಜರುಪಡಿಸುವಂತೆ ನೋಟಿಸ್ ನೀಡಿತು. ತನಿಖೆಯ ಭಾಗವಾಗಿ ಪೊಲೀಸರು ಆರೋಪಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ವೀರೇಶ್ ಪರೀಕ್ಷೆಗೆ ಹಾಜರಾಗಿದ್ದ ಜ್ಞಾನಜ್ಯೋತಿ ಸಂಸ್ಥೆ ನಡೆಸುತ್ತಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ಸೇರಿದಂತೆ ಎಂಟು ಮಂದಿಯನ್ನು ಸಿಐಡಿ ಬಂಧಿಸಿದೆ.
ಬಂಧಿತರಲ್ಲಿ ಇಬ್ಬರು ಅಭ್ಯರ್ಥಿಗಳು, ಜೈಲು ವಾರ್ಡನ್ ಮತ್ತು ಮೂವರು ಮೇಲ್ವಿಚಾರಕರು ಸೇರಿದ್ದಾರೆ. ದಿವ್ಯಾ ತಲೆಮರೆಸಿಕೊಂಡಿದ್ದಾಳೆ ಆದರೆ ಆಕೆಯ ರಾಜೇಶ್ ಹಾಗರಗಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಇದುವರೆಗೂ 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Explained: ಜಗತ್ತಿನ ಯಾವುದೇ ಮೂಲೆಗೂ ಅಪ್ಪಳಿಸಬಲ್ಲದು ರಷ್ಯಾದ ಹೊಸ ಪರಮಾಣು ಕ್ಷಿಪಣಿ ‘ಸರ್ಮತ್’!
ಸಿಐಡಿ ಅಧಿಕಾರಿಗಳಿಂದ ಮುಂದುವರೆದ ತನಿಖೆ
ಪರೀಕ್ಷೆಯಲ್ಲಿ ಪಾಸ್ ಆದ ಎಲ್ಲಾ ಅಭ್ಯರ್ಥಿಗಳನ್ನು ತನಿಖೆಗೆ ಒಳಪಡಿಸಲು ಸಿಐಡಿ ನಿರ್ಧರಿಸಿದೆ. ಈಗಾಗಲೇ ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದು, ಎಲ್ಲರನ್ನೂ ವಿಚಾರಣೆಗೆ ಒಳಪಡಿಸುವ ಕೆಲಸ ನಡೆಯುತ್ತಿದೆ.
ಮತ್ತೆ ನಡೆಯುತ್ತಾ ಪರೀಕ್ಷೆ?
ಈ ಬಗ್ಗೆ ಇನ್ನೂ ಖಚಿತವಾಗಿಲ್ಲ. ತನಿಖೆ ನಡೆಯುತ್ತಿರುವುದರಿಂದ ಈಗ ಪರೀಕ್ಷೆ ನಡೆಯೋ ಸಾಧ್ಯತೆ ಇಲ್ಲ. ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ