• ಹೋಂ
  • »
  • ನ್ಯೂಸ್
  • »
  • Explained
  • »
  • Melukote: ತಂದೆಯ ಹಾದಿಯಲ್ಲಿ ಮಗ, ಅಮೆರಿಕದಲ್ಲಿ ಸಾಫ್ಟ್​ವೇರ್​ ಉದ್ಯಮಿಯಾಗಿದ್ದ ಯುವಕ ಈಗ ಕರ್ನಾಟಕದ ಶಾಸಕ!

Melukote: ತಂದೆಯ ಹಾದಿಯಲ್ಲಿ ಮಗ, ಅಮೆರಿಕದಲ್ಲಿ ಸಾಫ್ಟ್​ವೇರ್​ ಉದ್ಯಮಿಯಾಗಿದ್ದ ಯುವಕ ಈಗ ಕರ್ನಾಟಕದ ಶಾಸಕ!

ದರ್ಶನ್ ಪುಟ್ಟಣ್ಣಯ್ಯ

ದರ್ಶನ್ ಪುಟ್ಟಣ್ಣಯ್ಯ

ಸದ್ಯಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದಿಂದ ಆಯ್ಕೆಯಾಗಿರುವ ನೂತನ ಶಾಸಕ. ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಯುಎಸ್ಎ ನಲ್ಲಿ ಉದ್ಯಮಿಯಾಗಿದ್ದ ದರ್ಶನ್ ರಾಜಕಾರಣಕ್ಕೆ ಬಂದಿದ್ದೇ ಅಚಾನಕ್ಕಾಗಿ.

  • Trending Desk
  • 5-MIN READ
  • Last Updated :
  • Mandya, India
  • Share this:

ಯುಎಸ್ಎನಲ್ಲಿ ಸಾಫ್ಟ್ ವೇರ್ ಕಂಪನಿ (Software Company) ತೆರೆದು ಸಾಕಷ್ಟು ಜನರಿಗೆ ಉದ್ಯೋಗ ನೀಡಿದ್ದ ಯುವಕನೊಬ್ಬ ಈಗ ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರ ಶಾಸಕರಾಗಿದ್ದಾರೆ. ಹೌದು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಮಂಡ್ಯದ (Mandya) ಅನುಭವಿ ರಾಜಕಾರಣಿ ವಿರುದ್ಧ ಗೆದ್ದು ಬೀಗಿರುವ ಇವರ ಬಗ್ಗೆ ನಿಮ್ಮಲ್ಲಿ ಕೆಲವರಿಗೆ ಪರಿಚಯವಿರಬಹುದು, ಇನ್ನು ಕೆಲವರು ಇವರ್ಯಾರು ಎಂದು ಈಗಾಗಲೇ ಊಹಿಸಿರಬಹುದು.


ಹೌದು, ಇವರೇ ದರ್ಶನ್ ಪುಟ್ಟಣ್ಣಯ್ಯ (Darshan Puttannaiah). ಸದ್ಯಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ (Melukote Assembly Constituency) ಸರ್ವೋದಯ ಕರ್ನಾಟಕ ಪಕ್ಷದಿಂದ ಆಯ್ಕೆಯಾಗಿರುವ ನೂತನ ಶಾಸಕ. ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಯುಎಸ್ಎ ನಲ್ಲಿ ಉದ್ಯಮಿಯಾಗಿದ್ದ ದರ್ಶನ್ ರಾಜಕಾರಣಕ್ಕೆ ಬಂದಿದ್ದೇ ಅಚಾನಕ್ಕಾಗಿ.


ಕಳೆದ 15 ವರ್ಷಗಳಿಂದ ಅಮೆರಿಕಾದಲ್ಲಿ ವಾಸಿಸುತ್ತಿದ್ದ ದರ್ಶನ್, ಡೆನ್ವರ್ ಮೂಲದ ಅಪ್ಲಿಕೇಶನ್ ಅಭಿವೃದ್ಧಿ ಮತ್ತು ಕೋಸ್ಟಾ ರಿಕಾ, ದುಬೈ ಮತ್ತು ಭಾರತದಲ್ಲಿನ IT ಸೇವೆಗಳ ಪೂರೈಕೆದಾರರಾದ Qwinix ಟೆಕ್ನಾಲಜೀಸ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು (CEO) .




ರಾಜಕೀಯ ಕ್ಷೇತ್ರಕ್ಕೆ ಬರುವ ಯಾವುದೇ ಆಲೋಚನೆಯಿಲ್ಲದೆ, ಬ್ಯುಸಿನೆಸ್ ಮಾಡುತ್ತಿದ್ದ ದರ್ಶನ್ ಪುಟ್ಟಣ್ಣಯ್ಯ ಇಲ್ಲಿಗೆ ಬರಲು ಕಾರಣವಾಗಿದ್ದು, ಅವರ ತಂದೆಯ ಸಾವು!


ತಂದೆಯ ಸಾವಿನ ನಂತರ ರಾಜಕೀಯಕ್ಕೆ!


ದರ್ಶನ್ ಪುಟ್ಟಣ್ಣಯ್ಯ, ರೈತ ಚಳವಳಿ ಮೂಲಕವೇ ಮಂಡ್ಯ-ಮೈಸೂರು ಭಾಗದಲ್ಲಿ ಗುರುತಿಸಿಕೊಂಡಿದ್ದ ಕೆ.ಎಸ್.ಪುಟ್ಟಣ್ಣಯ್ಯ (KS Puttanaiah) ಅವರ ಪುತ್ರ. 1994ನೇ ಇಸವಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರರಾಗಿ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿ ಚೊಚ್ಚಲ ಅಧಿವೇಶನದಲ್ಲಿಯೇ ವಿಜೃಂಭಿಸಿದ್ದ ಕೆ.ಎಸ್.ಪುಟ್ಟಣ್ಣಯ್ಯ, ರೈತನಾಯಕರೆಂದೇ ಪ್ರಸಿದ್ಧಿ ಗಳಿಸಿದವರು.


ಇದನ್ನೂ ಓದಿ: BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?


ಇವರು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದರು. ಆದರೆ, 2018ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ತೀರಿಹೋದಾಗ, ಸರ್ವೋದಯ ಕರ್ನಾಟಕ ಪಕ್ಷವನ್ನು ಮುನ್ನಡೆಸುವ ಸಲುವಾಗಿ ಕಾರ್ಯಕರ್ತರ ಒತ್ತಾಯದ ಮೇರೆಗೆ ದರ್ಶನ್ ಪುಟ್ಟಣ್ಣಯ್ಯ ಅನಿವಾರ್ಯವಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಡಬೇಕಾಯಿತು.




ಮೊದಲ ಚುನಾವಣೆಯಲ್ಲಿ ಸೋಲು


ಯಾವುದೇ ರಾಜಕೀಯ ಅನುಭವ ಇಲ್ಲದ ದರ್ಶನ್ ಪುಟ್ಟಣ್ಣಗೆ 2018 ವಿಧಾನಸಭಾ ಚುನಾವಣೆ ಸುಲಭದ್ದೇನೂ ಆಗಿರಲಿಲ್ಲ. ಅನುಭವಿ ರಾಜಕಾರಣಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕರಾಗಿದ್ದ ಸಿ.ಎಸ್. ಪುಟ್ಟರಾಜು ಅವರ ವಿರುದ್ಧ ಸ್ಪರ್ಧಿಸಿದ್ದ ದರ್ಶನ್ ರಿಗೆ ಎದುರಾಗಿದ್ದು ಸೋಲು.


ಛಲಬಿಡದೆ ಪ್ರಯತ್ನ


2018 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ದರ್ಶನ್ ಛಲ ಬಿಡಲಿಲ್ಲ. "ನನ್ನ ತಂದೆ ಜನರಿಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಅವರ ಪರಂಪರೆಯನ್ನು ಮುಂದುವರಿಸಲು ನಾನು ಆಶಿಸುತ್ತೇನೆ" ಎಂಬುದು ಅವರ ನಿಲುವಾಗಿತ್ತು.


ಇದೇ ಉದ್ದೇಶದಿಂದ 2023 ರಲ್ಲಿ ಛಲಬಿಡದೆ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದರು. ಅಕ್ಷರಶಃ ಪ್ರತಿ ಹಳ್ಳಿಗಳಿಗೆ ಭೇಟಿ ಜನರೊಂದಿಗೆ ಸಂಪರ್ಕ ಬೆಳೆಸಿಕೊಂಡರು. ತಾನು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸದೇ ಇರಬಹುದು. ಆದರೆ, ಜನರ ಸಮಸ್ಯೆಗಳ ಅರಿವಿದೆ. ಒಂದು ಬಾರಿ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.




ಕಳೆದ ಚುನಾವಣೆಯ ಸೋಲಿನ ನಂತರ ದರ್ಶನ್ ಯುಎಸ್ ಗೆ ಹಿಂದಿರುಗಿ ತಮ್ಮ ಕಂಪೆನಿಯನ್ನು ಮಾರಿ ಬಂದಿದ್ದರು. ಈಗ ಮತ್ತೆ ಜನರಲ್ಲಿ ವಿಶ್ವಾಸ ಮೂಡಿಸಲು ಇವರಿಗೆ ಬೆಂಬಲವಾಗಿ ನಿಂತಿದ್ದು, ಕಾಂಗ್ರೆಸ್. ಇದೀಗ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಗೆದ್ದು ನೂತನ ಶಾಸಕನಾಗಿ ಆಯ್ಕೆಯಾಗಿ ಬಂದಿದ್ದಾರೆ.


ಇದನ್ನೂ ಓದಿ: Congress ಗೆಲುವಿಗೆ ಕಾರಣ ಸಿದ್ದು-ಡಿಕೆಶಿಯೂ ಅಲ್ಲ, ರಾಹುಲ್-ಖರ್ಗೆಯೂ ಅಲ್ಲ! ರಣತಂತ್ರದ ಹಿಂದಿರೋದು ಇವರೇ!


ರೈತರ ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ


“ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಜನರ ಮಧ್ಯೆ ನಿಂತು ಕೆಲಸ ಮಾಡುವೆ. ನನಗೆ ರಾಜಕೀಯ ಅನುಭವ ಇಲ್ಲ. ಆದರೆ ಕಲಿಯುವ ಆಸಕ್ತಿ ಇದೆ. ಹಂತಹಂತವಾಗಿ ಅನುಭವ ಪಡೆದುಕೊಳ್ಳುವೆ. ಜನರು, ರೈತರ ಬಗ್ಗೆ ಕಾಳಜಿ ಇದೆ” ಎನ್ನುತ್ತಾರೆ ದರ್ಶನ್.




“ಅನುಭವಿ ಹಾಗೂ ಬಲಿಷ್ಠ ರಾಜಕಾರಣಿ ಸಿ.ಎಸ್.ಪುಟ್ಟರಾಜು ಅವರ ವಿರುದ್ದ ಗೆಲ್ಲುವುದು ಸವಾಲಾಗಿತ್ತು. ಆದರೆ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ದುಡಿದಿದ್ದರಿಂದ ಗೆಲುವು ಸಾಧ್ಯವಾಯಿತು.

top videos


    ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ ಕ್ಷೇತ್ರದ ಜನತೆಯ ನಂಬಿಕೆಯನ್ನು ಉಳಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಗೆಲುವಿಗೆ ದುಡಿದ ಎಲ್ಲಾ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ” ಎಂದು ಹೇಳುತ್ತಾರೆ ದರ್ಶನ್.

    First published: