ಆರು ಬಾರಿ ಶಾಸಕ (MLA).. ಸಚಿವ (Minister), ವಿಧಾನಸಭೆ ಸ್ಪೀಕರ್ (Speaker).. ವಿರೋಧ ಪಕ್ಷದ ನಾಯಕರಾಗಿ (Leader of the Opposition).. ರಾಜ್ಯದ ಮುಖ್ಯಮಂತ್ರಿಯಾಗಿಯೂ (CM) ಕೆಲಸ ಮಾಡಿರುವ ಜಗದೀಶ್ ಶೆಟ್ಟರ್ (Jagadish Shettar) ಅಪಾರ ಅನುಭವವುಳ್ಳವರು.. ಸೋಲಿಲ್ಲದ ಸರದಾರ.. ಬಿಜೆಪಿಯ ಕಟ್ಟಾಳು.. ಹಿರಿಯ ನಾಯಕ.. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ (Lingayat Community) ಪ್ರಬಲ ನಾಯಕ. 45 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್ (Congress) ಸೇರಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಸಿಡಿದಿರುವ ಶೆಟ್ಟರ್ ಬಿಜೆಪಿಗೆ ಗುಡ್ಬೈ ಹೇಳಿ, ಕೈ ಹಿಡಿದಿದ್ದಾರೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ತಮ್ಮದೇ ಹಿಡಿತ ಹೊಂದಿರುವ ಲಕ್ಷ್ಮಣ ಸವದಿ (Laxman) ಹಾಗೂ ಜಗದೀಶ್ ಶೆಟ್ಟರ್ ಇಬ್ಬರು ನಾಯಕರು ಕೂಡಾ ಕಾಂಗ್ರೆಸ್ ಮನೆ ಸೇರಿದ್ದು ಬಿಜೆಪಿಗೆ (BJP) ನುಂಗಲಾರದ ಬಿಸಿತುಪ್ಪವಾಗಿದೆ.
ಬಿಜೆಪಿಗೆ ಗುಡ್ ಬೈ ಹೇಳಿದ ಜಗದೀಶ್ ಶೆಟ್ಟರ್
ಈ ಬಾರಿಯೂ ವಿಧಾನಸಭೆ ಚುನಾವಣಾ ಅಖಾಡಕ್ಕೆ ಕಣಕ್ಕಿಳಿಯೋ ಉತ್ಸಾಹದಲ್ಲಿದ್ದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಕ್ಷೇತ್ರದ ಟಿಕೆಟ್ ಗಾಗಿ ಹಗಲಿರುಳೂ ಪ್ರಯತ್ನಿಸಿದ್ರು.. ಆದ್ರೆ ಬಿಜೆಪಿ ಹೈಕಮಾಂಡ್ ಶೆಟ್ಟರ್ ಆಸೆಗೆ ಮಣ್ಣೆರಚಿ ಬಿಗ್ ಶಾಕ್ ಕೊಟ್ಟಿತ್ತು. ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಬಯಸಿದ್ದ ಶೆಟ್ಟರ್ ಮನವಿಗೆ ಹೈಕಮಾಂಡ್ ಯಾವುದೇ ಸೊಪ್ಪು ಹಾಕಿರಲಿಲ್ಲ.. ಇದೇ ಕಾರಣಕ್ಕೆ ಬಂಡೆದ್ದ ಶೆಟ್ಟರ್ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಬೀಳುತ್ತಾ ಹೊಡೆತ?
ಇದಕ್ಕೂ ಮುನ್ನ ಉತ್ತರ ಕರ್ನಾಟಕ ಭಾಗದ ಮತ್ತೋರ್ವ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕೂಡ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ್ದರು. ಹೀಗೆ ಸವದಿ ಹಾಗೂ ಶೆಟ್ಟರ್ ಇಬ್ಬರು ಕೂಡಾ ಕಾಂಗ್ರೆಸ್ ಸೇರಿರೋದು ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಮುಳುವಾಗಲಿದೆ ಎಂದೇ ವಿಶ್ಲೇಶಿಸಲಾಗುತ್ತಿದೆ. ಶೆಟ್ಟರ್ ಅವರೇ ಹೇಳಿರುವಂತೆ ಉತ್ತರ ಕರ್ನಾಟಕದ ಸುಮಾರು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ ಜಗದೀಶ್ ಶೆಟ್ಟರ್ಗೆ ಟಿಕೆಟ್ ತಪ್ಪಲು ಕಾರಣ ಯಾರು?
ಲಿಂಗಾಯತ ಮತಗಳು ವಿಭಜಿಸುತ್ತವೆಯೇ?
ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಾಲಿಗೆ ಭದ್ರ ಮತಬುಟ್ಟಿ ಲಿಂಗಾಯತ ಸಮುದಾಯ. ಈಗ ಸವದಿ ಹಾಗೂ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಲಿಂಗಾಯತ ಸಮುುದಾಯದ ಮತಗಳು ಹಂಚಿಹೋಗುವ ಸಾಧ್ಯತೆ ಇದೆ. ಲಿಂಗಾಯತ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾದಂತಾಗಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆ.
ಲಿಂಗಾಯತ ಮತಬುಟ್ಟಿಗೆ ‘ಕೈ’!
ಲಕ್ಷ್ಮಣ ಸವದಿ ಜೊತೆಗೆ ಶೆಟ್ಟರ್ ಬಿಜೆಪಿ ತೊರೆದು ಕೈ ಹಿಡಿತಿದ್ದಂತೆ ಕಾಂಗ್ರೆಸ್ಗೆ ಆನೆಬಲ ಬಂದಂತಾಗಿದೆ. ಸವದಿ ಹಾಗೂ ಶೆಟ್ಟರ್ ಅವರನ್ನೇ ಮುಂದಿಟ್ಟು ಕೊಂಡು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮತ ಸೆಳೆಯುವ ಮಾಸ್ಟರ್ ಫ್ಲಾನ್ ಮಾಡಿದೆ. ಶೆಟ್ಟರ್ ಬಣಜಿಗ ಲಿಂಗಾಯತ ಸಮುದಾಯದ ನಾಯಕರಾಗಿದ್ದು ಹುಬ್ಬಳ್ಳಿ, ಧಾರವಾಡ ಅಷ್ಟೇ ಅಲ್ಲದೇ ಅಕ್ಕಪಕ್ಕದ ಕ್ಷೇತಗಳಲ್ಲೂ ಪ್ರಭಾವ ಬೀರಬಲ್ಲರು. ಜೊತೆಗೆ ಕುಂದಗೋಳ ಕ್ಷೇತ್ರದಲ್ಲೂ ಶೆಟ್ಟರ್ ಮೂಲಕ ಲಾಭ ಪಡೆಯಬಹುದು. ಹಾಗೇ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೂ ಟಫ್ ಫೈಟ್ ಕೊಡಬಹುದು ಎಂಬ ರಣತಂತ್ರದಲ್ಲಿರುವಂತಿದೆ ಕಾಂಗ್ರೆಸ್.
ಸವದಿ-ಶೆಟ್ಟರ್ V/S ಬಿಜೆಪಿ!
ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಬಿಜೆಪಿಯ ಆಳ- ಅಗಲವನ್ನ ಅರಿತಿದ್ದಾರೆ. ಪಕ್ಷಕ್ಕಾಗಿ ದುಡಿದ ನಮ್ಮನ್ನ ಪಕ್ಷ ಸೈಡ್ಲೈನ್ ಮಾಡಿದೆ ಎಂಬ ಬೇಸರದಲ್ಲಿರುವ ಇಬ್ಬರು ನಾಯಕರು ಕೂಡಾ ಬಿಜೆಪಿ ಸೋಲಿಸಲು ಪಣತೊಟ್ಟರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ ಲಿಂಗಾಯತ ಅಸ್ತ್ರ
2018ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೊಡೆತ ಕೊಟ್ಟಿದ್ದು ಇದೇ ಲಿಂಗಾಯತ ಸಮುದಾಯ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಂಬಲಿಸಿದ ಆಪಾದನೆಗೆ ಗುರಿಯಾಗಿದ್ದ ಕಾಂಗ್ರೆಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅದಕ್ಕೆ ಬೆಲೆ ತೆತ್ತಿತ್ತು.. ಜನಪರ ಯೋಜನೆಗಳನ್ನೂ ಕೊಟ್ಟರೂ ಲಿಂಗಾಯತ ಧರ್ಮ ಮಾಡಲು ಹೋಗಿ ಕಾಂಗ್ರೆಸ್ ಕೈ ಸುಟ್ಟುಕೊಂಡಿತ್ತು. ಧರ್ಮ ರಾಜಕಾರಣದಂತಹ ಸೂಕ್ಷ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ಜನರು ಸಹಿಸೋದಿಲ್ಲ ಅನ್ನೋದು ಆ ಚುನಾವಣೆಯಲ್ಲಿ ಸ್ಪಷ್ಟವಾಗಿತ್ತು.
ಕೈ ವಿರುದ್ಧ ಮುನಿಸಿಕೊಂಡಿದ್ದ ಲಿಂಗಾಯತರು
ಈ ಬಾರಿ ಎಚ್ಚರಿಕೆಯ ನಡೆ ಇಡಲು ಮುಂದಾಗಿರೋ ಕಾಂಗ್ರೆಸ್, ಬಿಜೆಪಿ ವಿರುದ್ಧ ಅದೇ ಲಿಂಗಾಯತ ಅಸ್ತ್ರ ಹೂಡುವ ಪ್ಲಾನ್ ಮಾಡಿದೆ ಅಂಥ ಹೇಳಲಾಗ್ತಿದೆ. 1989ರಲ್ಲಿ ವೀರೇಂದ್ರ ಪಾಟೀಲ್ರನ್ನ ಸಿಎಂ ಸ್ಥಾನದಿಂದ ಕಾಂಗ್ರೆಸ್ ಕೆಳಗಿಳಿಸಿತ್ತು.. ಅಂದಿನಿಂದಲೂ ಉತ್ತರ ಕರ್ನಾಟಕ ಭಾಗದ ಲಿಂಗಾಯತರು ಕಾಂಗ್ರೆಸ್ನಿಂದ ದೂರ ಉಳಿದಿದ್ರು..
ಇದನ್ನೂ ಓದಿ: Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್, ಸಾಹುಕಾರ್ಗೆ ಸ್ಕೆಚ್! ಕುಂದಾನಗರಿ ಕೊತ ಕೊತ!
ಬಿಜೆಪಿ ವಿರುದ್ಧ ಶೆಟ್ಟರ್, ಸವದಿ ‘ಕೈ’ ದಾಳ?
ಈಗ ಅದೇ ಲಿಂಗಾಯತ ಅಸ್ತ್ರದ ಮೂಲಕ ಕಾಂಗ್ರೆಸ್ ಈ ಬಾರಿ ಮತಬೇಟೆಗೆ ಸಜ್ದಾಗಿದೆ. ಅದಕ್ಕೆ ಶೆಟ್ಟರ್.. ಸವದಿ ಅವರನ್ನೇ ಮುಂದಿಟ್ಟುಕೊಂಡು ದಾಳ ಹೂಡಲು ತಂತ್ರ ಮಾಡ್ತಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು .. ಶೆಟ್ಟರ್ ಕಾಂಗ್ರೆಸ್ ಸೇರ್ತಿದ್ದಂತೆ ಇತ್ತ ಬಿಜೆಪಿ ವಲಯವೂ ಅಲರ್ಟ್ ಆಗಿದೆ. ಕಾಂಗ್ರೆಸ್ ಲಿಂಗಾಯತ ಅಸ್ತ್ರಕ್ಕೆ ಬಿಜೆಪಿ ಬತ್ತಳಿಕೆಯಲ್ಲಿರೋ ಪ್ರತ್ಯಸ್ತ್ರ ಏನೆಂಬುದನ್ನ ಕಾದುನೋಡಬೇಕು.
(ವರದಿ: ಹನುಮಂತ್ ಜೋಳದಾಳ, ನ್ಯೂಸ್ 18 ಕನ್ನಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ