ಭಾರತ - ಪಾಕ್ ನಡುವೆ ಯುದ್ಧ - ಭಿನ್ನಾಭಿಪ್ರಾಯಗಳಿಗೆ ಪ್ರಮುಖ ಕಾರಣಗಳಿಗೆ ಒಂದು ಗಡಿ ವಿವಾದ. ಬ್ರಿಟಿಷರು ಮಾಡಿದ ಗಡಿ ರೇಖೆ ಬಗ್ಗೆ ನೆರೆಯ ದೇಶಗಳಲ್ಲಿ ಭಿನ್ನಾಭಿಪ್ರಾಯವಿದೆ. ಇದು ದೇಶಗಳ ಕಿತ್ತಾಟವಾದರೆ ಬ್ರಿಟಿಷರು ಮಾಡಿದ ಗಡಿ ರೇಖೆಗಳ ಬಗ್ಗೆ ರಾಜ್ಯಗಳಲ್ಲೂ ಭಿನ್ನಾಭಿಪ್ರಾಯ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದೇ ರೀತಿ, ಈಗ ಅಸ್ಸಾಂ-ಮಿಜೋರಾಂ ರಾಜ್ಯಗಳ ನಡುವೆ ಮತ್ತೆ ಗಡಿ ವಿವಾದ ಭುಗಿಲೆದ್ದಿದೆ. 165 ಕಿ.ಮೀ ಅಸ್ಸಾಂ-ಮಿಜೋರಾಂ ಗಡಿಯ ವಿವಾದಕ್ಕೆ ಪ್ರಮುಖ ಕಾರಣ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಕಾಲದ ಎರಡು ಗಡಿರೇಖೆಗಳು. ಯಾವ ಗಡಿರೇಖೆಯನ್ನು ಅನುಸರಿಸಬೇಕೆಂಬುದರ ಬಗ್ಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಈಗಲೂ ಎರಡು ರಾಜ್ಯಗಳ ನಡುವೆ ಭಿನ್ನಾಭಿಪ್ರಾಯವಿದೆ.
19ನೇ ಶತಮಾನದ ಮಧ್ಯಭಾಗದಲ್ಲಿ ಕ್ಯಾಚರ್ ಪ್ಲೈನ್ ಪ್ರದೇಶದಲ್ಲಿರುವ ಬರಾಕ್ ಕಣಿವೆಯ ಬ್ರಿಟಿಷ್ ಚಹಾ ತೋಟಗಳು ಈಗ ಕ್ಯಾಚರ್, ಹೈಲಕಂಡಿ ಮತ್ತು ಕರೀಮ್ಗಂಜ್ ಜಿಲ್ಲೆಗಳನ್ನು ಒಳಗೊಂಡಿದೆ ಮತ್ತು ಈ ಜಿಲ್ಲೆಗಳ ವಿಸ್ತರಣೆಯು ಮಿಜೋರಾಂ ಜನರ ಸಮಸ್ಯೆಗಳಿಗೆ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣ ಮಿಜೋರಾಂ ಜನರು ವಾಸ ಮಾಡುತ್ತಿರುವ ಲುಶೈ ಬೆಟ್ಟಗಳ ಪ್ರದೇಶ.
ಆಗಸ್ಟ್ 1875ರಲ್ಲಿ, ಕ್ಯಾಚರ್ ಜಿಲ್ಲೆಯ ದಕ್ಷಿಣದ ಗಡಿಯನ್ನು ಅಸ್ಸಾಂ ಗೆಜೆಟ್ನಲ್ಲಿ ಗಡಿಯ ರೇಖೆಯಾಗಿ ದಾಖಲಾಗಿತ್ತು. ಲುಶೈ ಬೆಟ್ಟಗಳು ಮತ್ತು ಕ್ಯಾಚರ್ ಬಯಲುಗಳ ನಡುವಿನ ಗಡಿಯನ್ನು ಐದನೇ ಬಾರಿಗೆ ಬದಲಿಸಲಾಗಿದೆ ಎಂದು ಮಿಜೋ ಜನರು ಈ ಬಗ್ಗೆ ಹೇಳುತ್ತಾರೆ. ಮತ್ತು ಗಡಿ ವಿಚಾರದ ಬಗ್ಗೆ ಮಿಜೋ ಜನರ ಮುಕ್ಯಸ್ಥರೊಂದಿಗೆ ಸಮಾಲೋಚನೆ ಮಾಡಿರುವುದು ಸಹ ಐದನೇ ಬಾರಿ ಮಾತ್ರ ಅಂದರೆ 1873 ರಲ್ಲಿ. ಈ ಐದರ ಗಡಿ ರೇಖೆಯೇ ಎರಡು ವರ್ಷಗಳ ನಂತರ ಅಸ್ಸಾಂ ಗೆಜೆಟ್ನಲ್ಲಿ ದಾಖಲಾಗಿದ್ದು, ಇನ್ನರ್ ಲೈನ್ ರಿಸರ್ವ್ ಫಾರೆಸ್ಟ್ ಗಡಿರೇಖೆಗೆ ಇದು ಆಧಾರವಾಗಿತ್ತು ಎನ್ನಲಾಗಿದೆ.
ಆದರೆ, 1933ರಲ್ಲಿ ಲುಶಾಯ್ ಹಿಲ್ಸ್ ಮತ್ತು ಅಂದಿನ ರಾಜಮನೆತನದ ಮಣಿಪುರದ ನಡುವಿನ ಗಡಿಯನ್ನು ಗುರುತಿಸಿದಾಗ ಮಣಿಪುರದ ಗಡಿಯು ಲುಶಾಯ್ ಹಿಲ್ಸ್, ಅಸ್ಸಾಂನ ಕ್ಯಾಚರ್ ಜಿಲ್ಲೆ ಮತ್ತು ಮಣಿಪುರ ರಾಜ್ಯದ ಟ್ರಿಜಂಕ್ಷನ್ಗಳಿಂದ ಪ್ರಾರಂಭವಾಯಿತು ಎಂದು ಅದು ಹೇಳಿದೆ. ಆದರೆ, ಮಿಜೋರಾಂ ಜನತೆ ಈ ಗಡಿರೇಖೆಯನ್ನು ಒಪ್ಪುವುದಿಲ್ಲ. ಅಲ್ಲದೆ, ತಮ್ಮ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಗಡಿ ರೇಖೆಯನ್ನಾಗಿ ಗುರುತಿಸಿರುವ 1875 ರ ಗಡಿಯ ಬಗ್ಗೆಯೇ ಅವರು ಒಲವು ತೋರುತ್ತಾರೆ.
ಇನ್ನು, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ದಶಕಗಳಲ್ಲಿ, ಅಸ್ಸಾಂ ರಾಜ್ಯವನ್ನು ವಿಭಜಿಸಿ ಇತರೆ ರಾಜ್ಯಗಳನ್ನು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಘೋಷಿಸಲಾಯಿತು. ಅಸ್ಸಾಂ ರಾಜ್ಯ ಪ್ರದೇಶದಿಂದ ನಾಗಾಲ್ಯಾಂಡ್ ಅನ್ನು 1963 ರಲ್ಲಿ ರಚನೆ ಮಾಡಲಾಯಿತು. ಇದೇ ರೀತಿ, ನಾಗಾಲ್ಯಾಂಡ್ (1963), ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ ಅನ್ನು 1972ರಲ್ಲಿ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳನ್ನಾಗಿ ವಿಭಜನೆ ಮಾಡಲಾಯಿತು. ನಂತರ ಕೇಂದ್ರಾಡಳಿತ ಪ್ರದೇಶಗಳು ಸಹ ರಾಜ್ಯಗಳಾಗಿ ಬದಲಾದವು.
ಮಿಜೋರಾಂ ಮತ್ತು ಅಸ್ಸಾಂ ನಡುವಿನ ಒಪ್ಪಂದದ ಪ್ರಕಾರ, ಗಡಿ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಫೆಬ್ರವರಿ 2018 ರಲ್ಲಿ, MZP (ಮಿಜೋ ಜಿರ್ಲೈ ಪಾವ್ಲ್) ವಿದ್ಯಾರ್ಥಿಗಳ ಒಕ್ಕೂಟ ಆ ಗಡಿ ಪ್ರದೇಶದಲ್ಲಿ ರೈತರಿಗಾಗಿ ಮರದ ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದರು. ಆ ಜಾಗ ನಮಗೆ ಸೇರಿದೆ ಎಂದು ಅಸ್ಸಾಂ ಹಕ್ಕು ಪಡೆದಿದ್ದು, ನಂತರ ವಿವಾದವೆದ್ದ ಕಾರಣ ಅಸ್ಸಾಂ ಪೊಲೀಸರು ಆ ವಿಶ್ರಾಂತಿ ಗೃಹವನ್ನು ಕೆಡವಿದ್ದರು.
ಇದೇ ರೀತಿ, ಮತ್ತೆ 2020 ರ ಅಕ್ಟೋಬರ್ನಲ್ಲಿ, ಮಿಜೋರಾಂ ಹಕ್ಕು ಪಡೆದ ಭೂಮಿಯಲ್ಲಿ ಲೈಲಾಪುರ (ಅಸ್ಸಾಂ) ನಲ್ಲಿ ನಿರ್ಮಾಣದ ಬಗ್ಗೆ 2021 ರ ಜುಲೈನ ಇದೇ ವಾರದಲ್ಲಿ ಎರಡು ಬಾರಿ ಘರ್ಷಣೆಗಳು ಮತ್ತೆ ಭುಗಿಲೆದ್ದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ