• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಚುನಾಯಿತರಾದ ಶಾಸಕರಲ್ಲಿ ರಾಜಕೀಯ ಕುಟುಂಬದಿಂದ ಬಂದವರೆಷ್ಟು ಮಂದಿ? ಬಯಲಾಯ್ತು ಅಚ್ಚರಿಯ ಮಾಹಿತಿ!

Explained: ಚುನಾಯಿತರಾದ ಶಾಸಕರಲ್ಲಿ ರಾಜಕೀಯ ಕುಟುಂಬದಿಂದ ಬಂದವರೆಷ್ಟು ಮಂದಿ? ಬಯಲಾಯ್ತು ಅಚ್ಚರಿಯ ಮಾಹಿತಿ!

ಕರ್ನಾಟಕ ಚುನಾವಣೆ ಫಲಿತಾಂಶ

ಕರ್ನಾಟಕ ಚುನಾವಣೆ ಫಲಿತಾಂಶ

ಈಗ ವಿಷಯ ಏನೆಂದರೆ ಹೊಸದಾಗಿ ಚುನಾಯಿತರಾದ ಶಾಸಕರ ಹಿನ್ನೆಲೆಯನ್ನು ನೋಡಿದರೆ, ಇದರಲ್ಲಿ ಐದನೇ ಒಂದು ಭಾಗದಷ್ಟು ಸದಸ್ಯರು ರಾಜಕೀಯ ಸ್ಥಾನ ಅಥವಾ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸಿದ ಕುಟುಂಬಗಳ ಸದಸ್ಯರಾಗಿದ್ದಾರೆ ಎಂದು ತೋರಿಸುತ್ತದೆ.

  • Trending Desk
  • 4-MIN READ
  • Last Updated :
  • Bangalore [Bangalore], India
  • Share this:

ಈ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷದವರು (Political Parties) ಬರೀ ಅವರ ಮನೆಯವರಿಗೆ, ಸಂಬಂಧಿಕರಿಗೆ ಟಿಕೆಟ್ ಕೊಡುತ್ತಾರೆ ಅಂತೆಲ್ಲಾ ಆಪಾದನೆಗಳನ್ನು ಮಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಈಗಂತೂ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elerctions) ಮುಗಿದು ರಾಜ್ಯದ ಜನರು ತೀರ್ಪು ಸಹ ಕೊಟ್ಟಾಗಿದೆ. ಈ ಬಾರಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ (Congress Party) ಮಣೆ ಹಾಕಿದ್ದನ್ನು ನಾವೆಲ್ಲಾ ನೋಡಿದ್ದೇವೆ. ಅಲ್ಲದೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ.  


ಈಗ ವಿಷಯ ಏನೆಂದರೆ ಹೊಸದಾಗಿ ಚುನಾಯಿತರಾದ ಶಾಸಕರ ಹಿನ್ನೆಲೆಯನ್ನು ನೋಡಿದರೆ, ಇದರಲ್ಲಿ ಐದನೇ ಒಂದು ಭಾಗದಷ್ಟು ಸದಸ್ಯರು ರಾಜಕೀಯ ಸ್ಥಾನ ಅಥವಾ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸಿದ ಕುಟುಂಬಗಳ ಸದಸ್ಯರಾಗಿದ್ದಾರೆ ಎಂದು ತೋರಿಸುತ್ತದೆ.


ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ 61 ಅಭ್ಯರ್ಥಿಗಳು ರಾಜಕೀಯ ಕುಟುಂಬದಿಂದ ಬಂದವರಂತೆ..!


ಮೂವರು ತಂದೆ-ಮಗ ಮತ್ತು ಇಬ್ಬರು ತಂದೆ-ಮಗಳು ಮತ್ತು ಐದು ಜೋಡಿ ಸಹೋದರರು ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾದಳದ ಕನಿಷ್ಠ 61 ಅಭ್ಯರ್ಥಿಗಳು ರಾಜಕೀಯ ಕುಟುಂಬಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಪೈಕಿ 224 ಸದಸ್ಯ ಬಲದ ವಿಧಾನಸಭೆಗೆ 43 ಮಂದಿ ಆಯ್ಕೆಯಾಗಿದ್ದಾರೆ. ಇಬ್ಬರು ಸ್ವತಂತ್ರವಾಗಿ ನಿಂತ ಅಭ್ಯರ್ಥಿಗಳು ಸಹ ರಾಜಕೀಯ ಕುಟುಂಬಗಳಿಂದ ಬಂದವರೇ ಆಗಿದ್ದಾರೆ.


ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿ ಸೋತರೆ, ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.


ಇದನ್ನೂ ಓದಿ: Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?


ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್​ನಿಂದ ಸ್ಪರ್ಧಿಸಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಸೋದರಳಿಯ ರಕ್ಷಿತ್ ಶಿವರಾಂ ಸಹ ಸೋಲನುಭವಿಸಿದರು. ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರ ಸೊಸೆ ಮಂಜುಳಾ ಅಮರೇಶ್ ಅವರು ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ್ ಸಿಂಗ್ ಸಹ ಸ್ಪರ್ಧಿಸಿ ಸೋತರು.


ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಪ್ಪ-ಮಗನ ಜೋಡಿಗಳು ಇವು..


ಇನ್ನೂ ಅಪ್ಪ-ಮಗನ ಜೋಡಿಗಳ ಬಗ್ಗೆ ಹೇಳಬೇಕೆಂದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆ ಉತ್ತರ ಮತ್ತು ದಾವಣಗೆರೆ ದಕ್ಷಿಣದಿಂದ ಗೆಲುವು ಸಾಧಿಸಿದರೆ, ಇತ್ತ ಜೆಡಿಎಸ್ ನಿಂದ ಜಿ.ಟಿ. ದೇವೇಗೌಡ, ಹರೀಶ್ ಗೌಡ ಸಹ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಮತ್ತು ಹುಣಸೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.


ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಕಾಂಗ್ರೆಸ್ ನ ರೂಪಕಲಾ ಎಂ ಅವರು ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) ಮತ್ತು ಕೋಲಾರ ಗೋಲ್ಡ್ ಫೀಲ್ಡ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನೂ ಮೂವರು ಜಾರಕಿಹೊಳಿ ಸಹೋದರರ ಬಗ್ಗೆ ಮಾತಾಡುವುದಾದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಾಲ್ಕನೇ ಬಾರಿಗೆ ಯಮಕನಮರಡಿಯಿಂದ ಗೆಲುವು ಸಾಧಿಸಿದ್ದಾರೆ.


ಇನ್ನೂ ಬಿಜೆಪಿ ಟಿಕೆಟ್ ನಿಂದ ಅವರ ಸಹೋದರರಾದ ರಮೇಶ್ ಅವರು ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಿ ಏಳನೇ ಬಾರಿ ಗೆದ್ದರೆ, ಇತ್ತ ಬಾಲಚಂದ್ರ ಆರನೇ ಬಾರಿಗೆ ಅರಭಾವಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.


ಬಳ್ಳಾರಿಯ ಪ್ರಭಾವಿ ಗಣಿ ಉದ್ಯಮಿಗಳಿಗೆ ಇದು ಒಳ್ಳೆಯ ಚುನಾವಣೆ ಆಗಿರಲಿಲ್ಲ..


ಬಳ್ಳಾರಿಯ ಸುತ್ತಮುತ್ತ, ಪ್ರಭಾವಿ ಗಣಿ ಉದ್ಯಮಿಗಳಾದ ರೆಡ್ಡಿ ಸಹೋದರರಿಗೆ ಇದು ಒಳ್ಳೆಯ ಚುನಾವಣೆ ಆಗಿರಲಿಲ್ಲ. ಏಕೆಂದರೆ ಅವರಲ್ಲಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ. ಮಾಜಿ ಬಿಜೆಪಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೆ, ಅವರ ಸಹೋದರರು ಮತ್ತು ಮಾಜಿ ಶಾಸಕರಾದ ಸೋಮಶೇಖರ್ ಮತ್ತು ಕರುಣಾಕರ ರೆಡ್ಡಿ ಇಬ್ಬರೂ ಚುನಾವಣೆಯಲ್ಲಿ ಸೋತರು.


ಸೋಮಶೇಖರ್ ಅವರು ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ನ ನಾರಾ ಭರತ್ ರೆಡ್ಡಿ ವಿರುದ್ಧ ಸೋತರು. ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಸಹ ಈ ಬಾರಿ ಕಣದಲ್ಲಿದ್ದರು, ಆದರೆ ಇವರು ಸಹ ಸೋತರು. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಶಿಗ್ಗಾಂವ್ ಕ್ಷೇತ್ರದಿಂದ ಗೆದ್ದರೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಗೆದ್ದಿದ್ದಾರೆ.


ಇನ್ನೂ ಮಾಜಿ ಸಿಎಂ ಧರಂ ಸಿಂಗ್ ಅವರ ಇಬ್ಬರು ಪುತ್ರರಾದ ಅಜಯ್ ಸಿಂಗ್ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿಯಿಂದ ಗೆದ್ದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ವಿಜಯ್ ಸಿಂಗ್ ಸೋತಿದ್ದಾರೆ. ಈ ಇಬ್ಬರೂ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು.


ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರರಾದ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದ ಮಧು ವಿರುದ್ಧ ಸೋತರು.




ಮಾಜಿ ಸಚಿವೆ ಸಿ ಮೋಟಮ್ಮ ಅವರ ಪುತ್ರಿ ನಯನಾ ಜಾವರ್ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿಯಾಗಿರುವ 43 ವರ್ಷದ ಅವರು ಮೂಡಿಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ 722 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.


ರಾಜಕೀಯ ಕುಟುಂಬಗಳಿಂದ ಬಂದ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಪಟ್ಟಿ ಹೀಗಿದೆ:


ಕಾಂಗ್ರೆಸ್ ಪಕ್ಷ




    • ಮಾಜಿ ಸಿಎಂ ಆರ್ ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್ ಅವರು ಗಾಂಧಿ ನಗರ (ಬೆಂಗಳೂರು ನಗರ) ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

    • ಚಿಕ್ಕೋಡಿ ಸದಲಗಾ (ಬೆಳಗಾವಿ) ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ ಗೆಲುವು ಸಾಧಿಸಿದ್ದಾರೆ.

    • ಬೈಲಹೊಂಗಲ (ಬೆಳಗಾವಿ) ಕ್ಷೇತ್ರದಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ ಪುತ್ರ ಮಹಾಂತೇಶ ಕೌಜಲಗಿ ಗೆಲುವು ಸಾಧಿಸಿದ್ದಾರೆ.

    • ಹುನಗುಂದ (ಬಾಗಲಕೋಟೆ) ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಆರ್. ಕಾಶಪ್ಪನವರ್ ಅವರ ಪುತ್ರ ವಿಜಯಾನಂದ ಕಾಶಪ್ಪನವರ್ ಗೆಲುವು ಸಾಧಿಸಿದ್ದಾರೆ.

    • ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಪತ್ನಿ ಕನೀಜ್ ಫಾತಿಮಾ ಗುಲ್ಬರ್ಗಾ ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

    • ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಪುತ್ರ ಈಶ್ವರ ಖಂಡ್ರೆ ಅವರು ಭಾಲ್ಕಿ (ಬೀದರ್) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

    • ಮಾಜಿ ಸಚಿವ ಸಿ. ಭೈರೇಗೌಡ ಅವರ ಪುತ್ರ ಕೃಷ್ಣ ಭೈರೇಗೌಡ ಬ್ಯಾಟರಾಯನಪುರ (ಬೆಂಗಳೂರು ನಗರ) ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

    • ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರು ಹೊಸಕೋಟೆ (ಬೆಂಗಳೂರು ಗ್ರಾಮಾಂತರ) ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

    • ಮಂಗಳೂರಿನಲ್ಲಿ ಮಾಜಿ ಶಾಸಕ ಯು.ಟಿ. ಫರೀದ್ ಪುತ್ರ ಯು.ಟಿ. ಖಾದರ್ ಗೆಲುವು ಸಾಧಿಸಿದ್ದಾರೆ.

    • ಮಾಜಿ ಎಂಎಲ್‌ಸಿ ಎ.ಕೆ. ಸುಬ್ಬಯ್ಯ ಅವರ ಪುತ್ರ ಎ.ಎಸ್. ಪೊನ್ನಣ್ಣ ವಿರಾಜಪೇಟೆ (ಕೊಡಗು) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

    • ನಂಜನಗೂಡಿನಲ್ಲಿ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಗೆಲುವು ಸಾಧಿಸಿದ್ದಾರೆ.

    • ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರ ಪುತ್ರ ಎಚ್.ಎಂ. ಗಣೇಶ್ ಪ್ರಸಾದ್ ಗುಂಡ್ಲುಪೇಟೆ (ಚಾಮರಾಜನಗರ) ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

    • ಬಬಲೇಶ್ವರ (ಬಿಜಾಪುರ) ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಎಂ. ಪಾಟೀಲ್ ಪುತ್ರ ಎಂ.ಬಿ. ಪಾಟೀಲ್ ಗೆಲುವು ಸಾಧಿಸಿದ್ದಾರೆ.

    • ಗದಗದಲ್ಲಿ ಮಾಜಿ ಸಚಿವ ಕೆ.ಎಚ್. ಪಾಟೀಲ್ ಪುತ್ರ ಎಚ್.ಕೆ. ಪಾಟೀಲ್ ಗೆಲುವು ಸಾಧಿಸಿದ್ದಾರೆ.

    • ಮಾಜಿ ಶಾಸಕ ಚಿಕ್ಕಮಾದು ಅವರ ಪುತ್ರ ಅನಿಲ್ ಕುಮಾರ್ ಸಿ ಅವರು ಎಚ್.ಡಿ. ಕೋಟೆಯಲ್ಲಿ ಗೆಲುವು ಸಾಧಿಸಿದ್ದಾರೆ.

    • ಮಾಜಿ ಸಚಿವ ಅಜೀಜ್ ಸೇಠ್ ಅವರ ಪುತ್ರ ತನ್ವೀರ್ ಸೇಠ್ ನರಸಿಂಹರಾಜ (ಮೈಸೂರು) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.




ಇದನ್ನೂ ಓದಿ:  Congress Guarantee: ದಾರಿಯಲ್ಲಿ ಹೋಗುವವರು ಕನ್ನಡಿಗರೇ ಅಲ್ಲವೇ? ಬಿಜೆಪಿ ಪ್ರಶ್ನೆ


ಬಿಜೆಪಿ ಪಕ್ಷ


  • ಶಿಕಾರಿಪುರ (ಶಿವಮೊಗ್ಗ) ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ.

  • ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರ ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ (ಬೆಳಗಾವಿ) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • ಮಾಜಿ ಸಚಿವ ಉಮೇಶ್ ಕತ್ತಿ ಅವರ ಪುತ್ರ ನಿಖಿಲ್ ಕತ್ತಿ ಅವರು ಹುಕ್ಕೇರಿ (ಬೆಳಗಾವಿ) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • ಚಿಂಚೋಳಿಯಲ್ಲಿ ಸಂಸದ ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಗೆಲುವು ಸಾಧಿಸಿದ್ದಾರೆ.

  • ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ ಬೆಲ್ಲದ್ ಅವರು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ಎಲ್.ಎ. ರವಿಸುಬ್ರಹ್ಮಣ್ಯ ಅವರು ಬಸವನಗುಡಿ (ಬೆಂಗಳೂರು ನಗರ) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರ ಪತ್ನಿ ಹಾಗೂ ಶಾಸಕ ಎಸ್. ರಘು ಅವರ ಸಹೋದರಿ ಮಂಜುಳಾ ಎಸ್. ಮಹದೇವಪುರ (ಬೆಂಗಳೂರು ನಗರ) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಅವರ ಪುತ್ರ ಜಿ.ಬಿ. ಜ್ಯೋತಿ ಗಣೇಶ್ ಅವರು ತುಮಕೂರು ನಗರದಲ್ಲಿ ಗೆಲುವು ಸಾಧಿಸಿದ್ದಾರೆ.

First published: