ಸ್ಯಾಂಡಲ್ವುಡ್ನ (Sandalwood) ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಉದ್ಘಾಟನೆ ಮೈಸೂರಿನಲ್ಲಿ ಭಾನುವಾರ ಜನವರಿ 29ರಂದು ನಡೆಯುತ್ತಿದೆ. ವಿಷ್ಣುದಾದಾ ಅವರ ಅಭಿಮಾನಿಗಳು (Fans) ಬಹಳ ವರ್ಷಗಳಿಂದ ಕಾಯುತ್ತಿದ್ದ ಈ ಒಂದು ಕೆಲಸ ಇಂದು ಪೂರ್ಣಗೊಂಡಿದೆ. ರಾಜ್ಯಾದ್ಯಂತ ಇರುವ ವಿಷ್ಣು ಅಭಿಮಾನಿಗಳು ಅರಮನೆ ನಗರಿಯಲ್ಲಿ ಸೇರಿದ್ದಾರೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದ್ದು ಅಭಿಮಾನಿಗಳು ದಂಡು ದಂಡಾಗಿ ಸ್ಥಳಕ್ಕೆ ಭೇಟಿಕೊಡುತ್ತಿದ್ದಾರೆ. ಈ ಸಂದರ್ಭ ಅಲ್ಲಿ ಅಭಿಮಾನಿಗಳು ನಡೆಸಿಕೊಡಲು ಬಯಸಿದ್ದ ಅನ್ನದಾನ ಸೇವೆಗೆ ಪೊಲೀಸರು (Police) ಅನುಮತಿ ನಿರಾಕರಿಸಿದ್ದಾರೆ.
ಬಿಗಿ ಭದ್ರತೆಗೆ ನಿಯೋಜನೆಗೆ ಬಂದಿರುವ ಪೊಲೀಸರಿಗೆ ಅರೋಗ್ಯ ತಪಾಸಣೆ ಮಾಡಲಾಗಿದೆ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹಿನ್ನೆಲೆ ಕಾರ್ಯಕ್ರಮದಲ್ಲಿ ವಿಷ್ಣು ಅಭಿಮಾನಿಗಳಿಗೆ ಕಿರುಕುಳ ಅರೋಪ ಸಹ ಕೇಳಿ ಬಂದಿದೆ.
ಅನ್ನದಾನ ಸೇವೆಗೆ ಅವಕಾಶವಿಲ್ಲ
ವಿಷ್ಣುವರ್ಧನ್ ಹೆಸರಿನಲ್ಲಿ ಅಭಿಮಾನಿಗಳು ಅನ್ನದಾನ ಸೇವೆ ನಡೆಸಲು ಬಯಸಿದ್ದರು. ಆದರೆ ಇದಕ್ಕೆ ಅನುಮತಿ ಕೊಡದೆ ಪೊಲೀಸರು ತೊಂದರೆ ಕೊಡುತ್ತಿರುವುದಾಗಿ ವಿಷ್ಣು ಅಭಿಮಾನಿಗಳು ಆರೋಪಿಸಿದ್ದಾರೆ. ಮೈಸೂರು ಪೊಲೀಸರ ನಡೆಗೆ ಅಕ್ರೋಶ ವ್ಯಕ್ತ ಪಡಿಪಡಿಸ್ತಿರುವ ವಿಷ್ಣು ಅಭಿಮಾನಿಗಳು ಈ ಬಗ್ಗೆ ಬೇಸರಗೊಂಡಿದ್ದಾರೆ.
ವಿಷ್ಣುವರ್ಧನ್ ಅವರು ಬದುಕಿದ್ದಾಗ ಅವರಿಗೆ ತೊಂದರೆ ಕೊಟ್ಟರು. ಅದೇ ರೀತಿ ಈಗಲೂ ತೊಂದರೆ ಕೊಡುತ್ತಿದ್ದಾರೆ. ವಿಷ್ಣು ಸರ್ ಅವರ ಹೆಸರಲ್ಲಿ ಸೇವೆ ಮಾಡಲು ಬಂದಿದ್ದೆವು. ಆದರೆ ಪೊಲೀಸರು ಸಡನ್ನಾಗಿ ರಾತ್ರಿ 9 ಗಂಟೆಗ ಇಲ್ಲಿ ಅಡುಗೆ ಮಾಡಬೇಡಿ ಅಂದರು. ಪೊಲೀಸರ ಭಯಕ್ಕೆ ನಾವು ಕರೆದುಕೊಂಡು ಬಂದಿದ್ದ ಅಡುಗೆ ಭಟ್ಟರು ಕೂಡಾ ಓಡಿಹೋಗಿದ್ದಾರೆ ಎಂದಿದ್ದಾರೆ. ನಮ್ಮ ಮನೆ ದುಡ್ಡು ಹಾಕಿ ನಾವು ಅನ್ನದಾನ ಮಾಡುತ್ತೇವೆ ಎಂದರೂ ಅನುಮತಿ ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಸ್ಥಳದಲ್ಲಿ ಬಿಗಿ ಭದ್ರತೆ
ಸಾಹಸಿಂಹ ವಿಷ್ಣು ವರ್ಧನ್ ಸ್ಮಾರಕ ಲೋಕಾರ್ಪಣೆ ಹಿನ್ನೆಲೆ ರಾಜ್ಯದ ಮೂಲೆ ಮೂಲೆಗಳಿಂದ ವಿಷ್ಣು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಮಾರಕದ ಸುತ್ತಮುತ್ತ ಪೊಲೀಸರ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 550ಕ್ಕೂ ಹೆಚ್ಚು ಪೊಲೀಸರನ್ನು ಕಾರ್ಯಕ್ರಮಕ್ಕೆ ಭದ್ರತೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ: Vishnuvardhan: ವಿಷ್ಣು ಸ್ಮಾರಕದಲ್ಲಿ ಏನೇನಿದೆ ಗೊತ್ತಾ? ವಿಶೇಷತೆಗಳೇನು?
ಬೆಂಗಳೂರಿನಿಂದ ಮೈಸೂರಿಗೆ ಹೊರಟ ಅಭಿಮಾನಿಗಳು
ಮೈಸೂರಿನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಸಾವಿರಾರು ಅಭಿಮಾನಿಗಳು ಬೃಹತ್ ಮೆರವಣಿಗೆ ಮೂಲಕ ಪ್ರಯಾಣ ಬೆಳೆಸಿದರು. ಅಭಿಮಾನ್ ಸ್ಟೂಡಿಯೋದಲ್ಲಿ ವಿಷ್ಣು ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮೈಸೂರಿನತ್ತ ಸುಮಾರು ಒಂದು ಸಾವಿರಕ್ಕೂ ಅಧಿಕ ವಾಹನಗಳಲ್ಲಿ ಸಾವಿರಾರು ಡಾ. ವಿಷ್ಣು ಅಭಿಮಾನಿಗಳು ತೆರಳಿದ್ದಾರೆ.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ವಿರುದ್ಧ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಾರಕ ಉದ್ಘಾಟನೆಯನ್ನು ರಾಜ್ಯ ಸರ್ಕಾರ ಕಾಟಚಾರಕ್ಕೆ ಮಾಡುತ್ತಿದೆ. ಬೇರೆ ಕಾರ್ಯಕ್ರಮಗಳಿಗೆ ರಾಜ್ಯದಾದ್ಯಂತ ಹೆಚ್ಚಿನ ಪ್ರಚಾರ ಮಾಡುವ ಸರ್ಕಾರ ಈ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ. ಕೇವಲ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಮುಗಿಸಿ ಸುಮ್ಮನಾಗುತ್ತಿದ್ದಾರೆ. ಸರ್ಕಾರ, ಚಲನಚಿತ್ರ ಮಂಡಳಿ, ಕನ್ನಡ ನಟರು ಯಾರು ಕೂಡ ಈ ಬಗ್ಗೆ ಸರಿಯಾದ ಗಮನ ಹರಿಸಿಲ್ಲ.
ರಾಜ್ಯ ಸರ್ಕಾರ ಇತರೆ ಕಾರ್ಯಕ್ರಮಗಳಿಗೆ ಖಾಸಗಿ ಜೆಟ್ ಮೂಲಕ ಬೇರೆ ಭಾಷೆಗಳ ನಟರನ್ನು ಕರೆತಂದು ಅದ್ದೂರಿ ಕಾರ್ಯಕ್ರಮ ಮಾಡುತ್ತಾರೆ. ವಿಷ್ಣುವರ್ಧನ್ ವಿಚಾರದಲ್ಲಿ ಮಾತ್ರ ಯಾಕಿಷ್ಟು ನಿರ್ಲಕ್ಷ್ಯ? 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರಿಗೆ ಈ ರೀತಿ ಮಾಡೋದು ಸರಿಯಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರದ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ