ಕಿರುತೆರೆಗೆ ಮತ್ತೆ ಬರುತ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh). ಹೌದು ತಮ್ಮ ಜೀವನವನ್ನೇ ಬದಲಾಯಿಸಿದ ಕಿರುತೆರೆಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಎಂದಿಗೂ ಮರೆತವರಲ್ಲ. ಗಣೇಶ್ ಅವರಿಗೆ ಹೆಸರು ಮತ್ತು ಖ್ಯಾತಿ ದೊರಕಿಸಿಕೊಟ್ಟಿದೆ ಕಾಮಿಡಿ ಟೈಮ್ (Comedy Time) ಎಂಬ ಶೋ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಮಿನಿಟ್ (Super Minute) ಕಾರ್ಯಕ್ರಮವನ್ನು ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಇದೀಗ ಮತ್ತೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಕಾಲಿಟ್ಟು ಇಸ್ಮಾರ್ಟ್ ಜೋಡಿ (Ismart Jodi) ಎಂಬ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈಗಾಗಲೇ ವಾಹಿನಿಯು ಇದರ ಪ್ರೋಮೊವನ್ನು ಬಿಟ್ಟಿದ್ದು ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ಹೊಸ ರಿಯಾಲಿಟಿ ಶೋ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ಎಂಬ ಹೊಸ ಶೋ ಆರಂಭವಾಗುತ್ತಿದ್ದು ಈ ಕಾರ್ಯಕ್ರಮದ ಸಾರಥ್ಯವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ವಹಿಸಿಕೊಳ್ಳಲಿದ್ದಾರೆ. 10 ಸೆಲೆಬ್ರಿಟಿ ರೋಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಹಬ್ಬ ನೀಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಈಗಾಗಲೇ ವಾಹಿನಿಯು ಇದರ ಪ್ರೋಮೊವನ್ನು ಹರಿ ಬಿಟ್ಟಿದ್ದು ಅದರಲ್ಲಿ ಗಣೇಶ್ ಕೂಡ ಕಾಣಿಸಿಕೊಂಡಿದ್ದಾರೆ.
ಮೊದಲು ನಿಮ್ಮ ಗಣಪಂಗೆ ಪ್ರೀತಿ ಸಿಕ್ಕಿದ್ದು ಟಿವಿಲಿ ನಮಸ್ಕಾರ ಅಂದಾಗ.... ಆಮೇಲೆ ಪ್ರೀತಿ ಮಾಡಿದಾಗ ಪ್ರೀತಿ ಕೈಕೊಟ್ಟಾಗ ಪ್ರೀತಿ ಸಿಕ್ಕಾಗ ಶಿಳ್ಳೆ ಚಪ್ಪಾಳೆ ಹೊಡೆದು ಮರೆಸಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದಿರಾ... ಅಂತಹ ಪ್ರೀತಿನ ಮತ್ತೆ ಸೆಲೆಬ್ರೇಟ್ ಮಾಡೋಕೆ ರೋಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಮೂಡಿ ಮಾಡೋಕೆ ನಿಮ್ಮ ಮುಂದೆ ತರ್ತಿದ್ದೀನಿ ISMART ಜೋಡಿ ಎಂದು ಪ್ರೋಮದಲ್ಲಿ ಹೇಳಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.
ಈ ರಿಯಾಲಿಟಿ ಶೋ ಯಾವಾಗ ಆರಂಭವಾಗುತ್ತದೆ ಎನ್ನುವ ಬಗ್ಗೆ ಇನ್ನೂ ವಾಹಿನಿ ತಿಳಿಸಲಿಲ್ಲ. ಅದೇ ರೀತಿ ಶೋನಲ್ಲಿ ಭಾಗವಹಿಸುವ 10 ಸೆಲೆಬ್ರಿಟಿ ಜೋಡಿಗಳ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿಲ್ಲ. ಆದರೆ ಸದ್ಯದಲ್ಲೇ ಈ ಕಾರ್ಯಕ್ರಮ ಆರಂಭವಾಗುವುದಂತು ಹೌದು. ಇದು ಒಂದು ರೋಮ್ಯಾಂಟಿಕ್ ಸೆಲೆಬ್ರಿಟಿ ಕಪಲ್ ಶೋ ಎನ್ನುವ ಬಗ್ಗೆ ವಾಹಿನಿಯು ಹೇಳಿಕೊಂಡಿದೆ.
ಜುಲೈ 2 ನೇ ತಾರೀಖಿನಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ
ಅಂದ ಹಾಗೆ ಜುಲೈ 2 ನೇ ತಾರೀಖಿನಂದು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬದಂದು ಮನೆಗೆ ಯಾರು ಬರಬೇಡಿ ಎಂದು ಕಳಕಳಿಯಿಂದ ಪತ್ರ ಬರೆದಿದ್ದಾರೆ.
ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯತನಕ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ ನನ್ನನ್ನು ನಿಮ್ಮದೇ ಯಶಸ್ವಿಯನ್ನು ಸಂಭ್ರಮಿಸಿ ನೀವೆಲ್ಲರೂ ಖುಷಿ ಪಟ್ಟಿದ್ದೀರಿ. 'ಪ್ರತಿ ವರ್ಷವೂ ನನ್ನ ಜನ್ಮದಿನದಂದು ರಾಜ್ಯದ ಮೂಲೆಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಿಸಿದ್ದೀರಿ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದ ನಾನು ನನ್ನ ಜನ್ಮದಿನದಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ. ಅಭಿಮಾನದಿಂದ ನನಗಾಗಿ ತರುವ ಹಾರ, ತುರಾಯಿ, ಕೇಕ್ ಇತ್ಯಾದಿಗಳ ಬದಲಿಗೆ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿ' ಎಂದು ಗಣೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ