ಶಂಕರ್ ನಾಗ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ನಟ, ನಿರ್ದೇಶಕನಾಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಶಂಕರ್ ನಾಗ್ ಕಾರು ಅಪಘಾತದಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದರು. ಅವರು ಸಾವನ್ನಪ್ಪಿ 31 ವರ್ಷಗಳೇ ಕಳೆದರೂ ಎಲ್ಲರ ಮನಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಇಂದಿನ ಪೀಳಿಗೆಯ ನಿರ್ದೇಶಕರಿಗೆ ಕೂಡ ಶಂಕರ್ ನಾಗ್ ಸ್ಫೂರ್ತಿಯಾಗಿ ಉಳಿದಿದ್ದಾರೆ ಎಂದರೆ ಅವರ ಸಿನಿಮಾ ಪ್ರೀತಿ ಮತ್ತು ಜ್ಞಾನ ಯಾವ ರೀತಿಯಲ್ಲಿತ್ತು ಎಂಬುದು ಅರ್ಥವಾಗುತ್ತದೆ.
ಶಂಕರ್ ನಾಗ್ ಜೊತೆ ಉತ್ಸವ ಎಂಬ ಸಿನಿಮಾದಲ್ಲಿ ನಟಿಸಿದ್ದ ನಟಿ ನೀನಾ ಗುಪ್ತ ಕೂಡ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಮೆಲುಕು ಹಾಕಿದ್ದಾರೆ. ದಶಕಗಳ ಹಿಂದಿನ ಫೋಟೋವೊಂದನ್ನು ಶೇರ್ ಮಾಡಿರುವ ನೀನಾ ಗುಪ್ತಾ, ನೀವು ಬಹಳ ಬೇಗ ನಮ್ಮನ್ನು ಬಿಟ್ಟುಹೋದಿರಿ ಎಂದು ಪೋಸ್ಟ್ ಮಾಡಿದ್ದಾರೆ.
ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದ ಉತ್ಸವ ಎಂಬ ಸಿನಿಮಾದಲ್ಲಿ ನೀನಾ ಗುಪ್ತಾ ಜೊತೆ ಸಹನಟನಾಗಿ ಶಂಕರ್ ನಾಗ್ ಕೂಡ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಟಿ ರೇಖಾ, ಶೇಖರ್ ಸುಮನ್, ಅಮ್ಜದ್ ಖಾನ್ ಮತ್ತು ಅನುರಾಧಾ ಪಟೇಲ್ ಕೂಡ ಅಭಿನಯಿಸಿದ್ದರು.
View this post on Instagram
ಇದನ್ನೂ ಓದಿ: KGF Chapter 2: ಬಿಡುಗಡೆಗೂ ಮೊದಲೇ ಹೊಸ ದಾಖಲೆ ಬರೆದ ಕೆಜಿಎಫ್ 2; ಈ ಸಿನಿಮಾದ ಹಾಡುಗಳಿಗೆ ಎಷ್ಟು ಕೋಟಿ ಗೊತ್ತಾ?
ಸಂಸ್ಕೃತ ಭಾಷೆಯ ಮೃಚ್ಛಕಟಿಕಾ ಎಂಬ ನಾಟಕವನ್ನು ಸಿನಿಮಾಗೆ ಅಳವಡಿಸಿ, ಉತ್ಸವ ಎಂಬ ಹೆಸರಿನಲ್ಲಿ ನಿರ್ಮಿಸಲಾಗಿತ್ತು. ಈ ಸಿನಿಮಾದಲ್ಲಿ ಶಂಕರ್ ನಾಗ್ ಕಳ್ಳನ ಪಾತ್ರ ನಿರ್ವಹಿಸಿದ್ದರು. ನೀನಾ ಗುಪ್ತಾ ಇತ್ತೀಚೆಗೆ ಬರೆದ ಆತ್ಮಚರಿತ್ರೆಯಲ್ಲಿ ಕೂಡ ಶಂಕರ್ ನಾಗ್ ಜೊತೆಗಿನ ತಮ್ಮ ಆತ್ಮೀಯ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದರು. ಶಂಕರ್ ನಾಗ್ ಎಂಥವರ ಬಳಿ ಬೇಕಾದರೂ ಸ್ನೇಹ ಮಾಡುವಂತಹ ವ್ಯಕ್ತಿತ್ವದವರು. ಒಮ್ಮೆ ಮಾತನಾಡಿದರೆ ಸಾಕು ಅವರು ನಮಗೆ ಬಹಳ ವರ್ಷಗಳಿಂದ ಪರಿಚಿತರೇನೋ ಎಂಬಂತೆ ಭಾಸವಾಗುತ್ತಿತ್ತು ಎಂದು ಶಂಕರ್ ನಾಗ್ ಜೊತೆಗಿನ ತಮ್ಮ ಶೂಟಿಂಗ್ ದಿನಗಳನ್ನು ನೀನಾ ಗುಪ್ತಾ ನೆನಪಿಸಿಕೊಂಡಿದ್ದರು.
ನಾನು ಕಂಡ ನಟರಲ್ಲಿ ಶಂಕರ್ ನಾಗ್ ಅವರ ವ್ಯಕ್ತಿತ್ವವೇ ವಿಶೇಷವಾದುದು. ಅವರು ಆಗ ಕನ್ನಡದಲ್ಲಿ ಬಹಳ ಫೇಮಸ್ ಆಗಿದ್ದರು. ಆದರೆ, ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಅವರು ಎಲ್ಲರಿಗೂ ಬಹಳ ಬೇಗ ಸ್ನೇಹಿತರಾಗುತ್ತಿದ್ದರು ಎಂದು ನೀನಾ ಗುಪ್ತಾ ನೆನಪಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ