'ಪಿಚ್ಚರಲ್ಲಿ ಅವರಿಗೂ ಇವರಿಗೂ ಲವ್ ಆದಂಗೆ..': ಸಖತ್ತಾಗಿದೆ ನವೀನ್ ಸಜ್ಜು ಹಾಡಿರುವ ಹೊಸ ಹಾಡು
ಈ ಕಾತುರತೆಯ ಕಾಯುವಿಕೆಗೆ ಕಿಚ್ಚು ಹಚ್ಚುವಂತೆ ವಿಜಿ ಟೀಂ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಮಾರ್ಚ್ 27 ರಂದು ರಾಜ್ಯಾದ್ಯಂತ ಸಲಗನ ದರ್ಬಾರ್ ಶುರುವಾಗಲಿದೆ ಎಂದು ತಿಳಿಸಿದ್ದರು.
ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದಾಗಿಂದಲೇ ಸಖತ್ ಸೌಂಡ್ ಮಾಡುತ್ತಿರುವ 'ಸಲಗ' ಚಿತ್ರದ ಸಣ್ಣದೊಂದು ಪ್ರೊಮೊ ವಿಡಿಯೋ ಬಿಡುಗಡೆಯಾಗಿದೆ. ಈ ಬಾರಿ ಬಿಡುಗಡೆಯಾದ ವಿಡಿಯೋ ತುಣುಕು ಗಾನ ಬಜಾನದಿಂದ ಕೂಡಿರುವುದು ವಿಶೇಷ. ಹೌದು, ಸ್ಯಾಂಡಲ್ವುಡ್ನ ಮಸ್ತ್ ಗಾಯಕ ನವೀನ್ ಸಜ್ಜು ಹಾಡಿರುವ ಸಂಜನಾ ಐ ಲವ್ ಯೂ ಸಂಜನಾ.. ಗೀತೆಯ ಸಣ್ಣ ಝಲಕ್ನ್ನು ಸಲಗ ತಂಡ ರಿಲೀಸ್ ಮಾಡಿದೆ.
ಸಖತ್ ಫನ್ನಿಯಾಗಿರುವ ಸಾಹಿತ್ಯದಿಂದ ಕೂಡಿರುವ ಈ ಗೀತೆಗೆ ಕಿಕ್ಕೇರಿಸುವ ಕಂಠ ನೀಡಿದ್ದು ನವೀನ್ ಸಜ್ಜು. ಎಣ್ಣೆ ಬುಟ್ಬುಡ್ತೀನಿ...ಎಣ್ಣೆ ನಂದು ಊಟ ನಿಂದು... ಏನ್ ಚಂದನಾ ತಕೋ...ದಂತಹ ವಿಭಿನ್ನ ಗೀತೆಗಳನ್ನು ಹಾಡಿರುವ ನವೀನ್ ಅವರ ಈ ಗೀತೆ ಈ ಸಾಲಿನ ಹಿಟ್ ಲೀಸ್ಟ್ಗೆ ಸೇರ್ಪಡೆಯಾಗುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.
ಈಗಾಗಲೇ ಸೂರಿಯಣ್ಣ ಸಾಂಗ್ ಮೂಲಕ ಕಮಾಲ್ ಮಾಡಿರುವ ಸಲಗ ತಂಡದ ಹೊಸ ಹಾಡು ಮತ್ತಷ್ಟು ಕಿಕ್ಕೇರಿಸುತ್ತಿದೆ. ಬಹದ್ದೂರ್ ಚೇತನ್ ಅವರು ಬರೆದಿರುವ ನಿಮ್ ಅಮ್ಮನ್ ಕೈಯಲಿ ತಲೆ ಬಾಚಿಸಿಕೊಂಡು, ನಿಮ್ ಅಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು, ಬರ್ಬರ್ತಾ ದಾರೀಲಿ ನಿನ್ ಫ್ರೆಂಡ್ ಕರ್ಕೊಂಡು, ನೀ ನಡ್ಕೊಂಡ್ ಬರ್ತಿದ್ರೆ ಅದೇ ಕಣೇ ಟ್ರೆಂಡು...8.30 ಕ್ಕೆ ನೀನು ಬಂದ್ರೆ ಹಿಂಗೆ..ಶೆಟ್ರ ಅಂಗಡಿ ಮುಂದೆ ಕಾಯ್ತಿರ್ತೀನಿ ನಿಂಗೆ..ಪಿಚ್ಚರಲ್ಲಿ ಅವರಿಗೂ ಇವರಿಗೂ ಲವ್ ಆದಂಗೆ...ಎಂಬ ಸಾಹಿತ್ಯವಂತೂ ಬಿಸಿ ದೋಸೆ ಮೇಲೆ ತುಪ್ಪ ಬಿದ್ದಂತೆ ಸಲೀಸಾಗಿ ಬಾಯಲ್ಲಿ ಗುನುಗುವಂತೆ ಮಾಡುತ್ತದೆ.
ಇಂತಹದೊಂದು ಸಖತ್ ಕ್ಯಾಚಿ ಸಾಂಗ್ಗೆ ರಾಗ ಸಂಯೋಜಿಸಿರುವುದು ನವೀನ್ ಸಜ್ಜು ಎಂಬುದೇ ಮತ್ತೊಂದು ವಿಶೇಷ. ಇದಲ್ಲದೆ ಇನ್ನೊಂದು ಗೀತೆಗೂ ನವೀನ್ ಮ್ಯೂಸಿಕ್ ನೀಡಿದ್ದು, ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ಇನ್ನು ಈಗಾಗಲೇ ಮೋಡಿ ಮಾಡಿರುವ ಸೂರಿ ಅಣ್ಣಾ...ಸಾಂಗ್ ಮ್ಯೂಸಿಕ್ನಲ್ಲೂ ಚರಣ್ ರಾಜ್ ಜೊತೆ ಸಜ್ಜು ಕೈಜೋಡಿಸಿದ್ದರು.
ಇನ್ನು ಈಗಾಗಲೇ ಬಿಡುಗಡೆಯಾಗಿರುವ ಸಲಗ ಟೀಸರ್ ಈಗಾಗಲೇ ಸಿನಿಪ್ರಿಯರನ್ನು ಸೆಳೆದಿದ್ದು, ಅದರಲ್ಲೂ ವರ್ಲ್ಡ್ ಯಾವುದೇ ಕಲರಲ್ಲಿದ್ದರೂ...ಈ ಅಂಡರ್ವರ್ಲ್ಡ್ ಮಾತ್ರ ಕೆಂಪು ಕಲರಲ್ಲಿರುತ್ತೆ...ಎಂಬ ರಕ್ತಪಾತದ ಮುನ್ಸೂಚೆನೆಯ ಖಡಕ್ ಡೈಲಾಗ್ಗೆ ವಿಜಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ಚಿತ್ರದಲ್ಲಿ ದುನಿಯಾ ವಿಜಿ ಆನೆ ನಡೆದಿದ್ದೇ ದಾರಿ ಎಂಬಂತಹ ಖತರ್ನಾಕ್ ರೌಡಿ ಪಾತ್ರದಲ್ಲಿ ಅಭಿನಯಿಸಿದರೆ, ಬ್ಲ್ಯಾಕ್ ಕೋಬ್ರಾಗೆ ಟಕ್ಕರ್ ಕೊಡುವ ಅವತಾರದಲ್ಲಿ ಡಾಲಿ ಧನಂಜಯ್ ಕಾಣಿಸುತ್ತಿದ್ದಾರೆ. 'ಟಗರು', 'ಯಜಮಾನ' ಸಿನಿಮಾದಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ 'ಮಿಠಾಯಿ ಸೂರಿ' ಧನಂಜಯ್ ಈ ಬಾರಿ ಮಾತ್ರ ಖಾಕಿಧಾರಿಯಾಗಿ ಕಾಣಿಕೊಳ್ಳಲಿದ್ದಾರೆ.
ದುನಿಯಾ ವಿಜಯ್ ಅವರ ಚೊಚ್ಚಲ ಆ್ಯಕ್ಷನ್ ಕಟ್ಗೆ ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಇನ್ನು ಟಗರು ಚಿತ್ರಕ್ಕಾಗಿ ದುಡಿದ ತಂಡವೇ ಇಲ್ಲೂ ಜೊತೆಗೂಡಿದ್ದು, ಈ ಮೂಲಕ ಮತ್ತೊಂದು ಭರ್ಜರಿ ಹಿಟ್ ಹುಡಕಾಟದಲ್ಲಿ ಚಿತ್ರತಂಡ.
ಹಾಗೆಯೇ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಕೊಕ್ರೋಚ್ ಸುಧಿ, ಅಚ್ಯುತ್ ಕುಮಾರ್ ಅವರಂತಹ ಪ್ರತಿಭಾವಂತ ನಟರ ದಂಡೇ ಚಿತ್ರದಲ್ಲಿದೆ. ಟೀಸರ್ ಮೂಲಕವೇ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಸಲಗದ ಅಸಲಿ ಘರ್ಜನೆ ವೀಕ್ಷಿಸಲು ಈ ತಿಂಗಳಾಂತ್ಯದವರೆಗೂ ಕಾಯಬೇಕಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ