news18-kannada Updated:October 15, 2020, 2:58 PM IST
ವಿವೇಕ್
ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜೈಲು ಪಾಲಾಗಿದ್ದಾರೆ. ಡ್ರಗ್ ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ತಲೆಮರಿಸಿಕೊಂಡಿದ್ದಾರೆ. ಇವರಿಗಾಗಿ ಹುಡುಕಾಟ ಮುಂದುವರಿದಿದ್ದರೂ ಈವರೆಗೆ ಪತ್ತೆ ಆಗಿಲ್ಲ. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ಆದಿತ್ಯ ಆಳ್ವ ಬಾಮೈದ ಹಾಗೂ ಬಹುಭಾಷಾ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದಾರೆ.
ಬಾಲಿವುಡ್ ಖ್ಯಾತ ನಟ ವಿವೇಕ್ ಒಬೆರಾಯ್ ಅವರ ಹೆಂಡತಿಯ ಸೋದರನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ 6ನೇ ಆರೋಪಿಯಾಗಿದ್ದಾರೆ. ರಾಗಿಣಿಯ ಬಂಧನವಾದ ಕೂಡಲೆ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಆತ ಪತ್ತೆಯಾಗಿರಲಿಲ್ಲ. ಹೀಗಾಗಿ ವಿವೇಕ್ ಮನೆಯಲ್ಲಿ ಆದಿತ್ಯ ಅಡಗಿರುವ ಶಂಕೆ ಇರುವ ಕಾರಣ ಸಿಸಿಬಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ.
ವಿವೇಕ್ ಮನೆಯಲ್ಲಿ ಆದಿತ್ಯಾ ಆಳ್ವಾ ಅಡಗಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ, ಕೋರ್ಟ್ನಿಂದ ಸರ್ಚ್ ವಾರೆಂಟ್ ತಂದು ಶೋಧ ಕಾರ್ಯ ನಡೆಸಲಾಗಿದೆ ಎನ್ನಲಾಗಿದೆ.
ಜನತಾ ಪರಿವಾರದ ಹಿರಿಯ ರಾಜಕಾರಣಿ ಜೀವರಾಜ್ ಆಳ್ವ ಕರ್ನಾಟಕದ ಸಚಿವರಾಗಿದ್ದವರು. ಅವರ ಹೆಂಡತಿ ನಂದಿನಿ ಆಳ್ವ ಖ್ಯಾತ ನೃತ್ಯಗಾರ್ತಿ. ಅವರ ಮಗಳು ಪ್ರಿಯಾಂಕಾ ಆಳ್ವ ಅವರನ್ನು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದಾರೆ. ಜೀವರಾಜ್ ಆಳ್ವ ಮತ್ತು ನಂದಿನಿ ಆಳ್ವ ಅವರ ಮಗನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಎ6 ಆರೋಪಿಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಆದಿತ್ಯ ಆಳ್ವ ಮಾತ್ರವಲ್ಲದೆ ಅವರ ಕುಟುಂಬಸ್ಥರೂ ನಾಪತ್ತೆಯಾಗಿದ್ದಾರೆ. ಇತ್ತೀಚೆಗೆ ಹೆಬ್ಬಾಳದಲ್ಲಿರುವ ಅವರ ಮನೆಯ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
Published by:
Rajesh Duggumane
First published:
October 15, 2020, 2:50 PM IST