ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಅವರ ಮೆದುಳಿಗೆ ತೀವ್ರವಾದ ಪೆಟ್ಟಾಗಿದ್ದು, ಅವರ ಬ್ರೈನ್ ಸ್ಟೆಮ್ ಡೆಡ್ ಆಗಿದೆ. ಇದು ಹೀಗೆ ಮುಂದುವರೆದರೆ ಮೆದುಳು ನಿಷ್ಕ್ರಿಯಗೊಳ್ಳುತ್ತದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮೆದುಳು ನಿಷ್ಕ್ರಿಯಗೊಂಡರೆ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಆಸ್ಪತ್ರೆಗೆ ಬಂದಾಗಲೇ ವಿಜಯ್ ತಲೆ ಬುರುಡೆಗೂ ಪೆಟ್ಟಾಗಿತ್ತು. ಮೆದುಳಿನ ಎಡ ಹಾಗೂ ಬಲ ಭಾಗಕ್ಕೆ ಪೆಟ್ಟಾಗಿದೆ. ಅವರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡುತ್ತಿದ್ದರೂ ಅವರು ಸ್ಪಂದಿಸುತ್ತಿಲ್ಲ. ಒಂದು ವೇಳೆ ಮೆದುಳು ನಿಷ್ಕ್ರಿಯಗೊಂಡರೆ ಹೃದಯಕ್ಕೆ ಸಿಗ್ನಲ್ ಹೋಗುವುದಿಲ್ಲ. ರಕ್ತದೊತ್ತಡದಲ್ಲೂ ಸಾಕಷ್ಟು ಏರಿಳಿತವಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಬೆಳಗ್ಗೆ 4.30ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ದೇಹದಲ್ಲಿ ಇತರೆ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಮೆದುಳಿನ ಚಟುವಟಿಕೆ ನಡೆಯುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ವಿಜಯ್ ಅವರ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ವೈದ್ಯರು ಹೇಳುತ್ತಿರುವುದನ್ನು ನೋಡಿದರೆ ಚೇತರಿಕೆ ಕಷ್ಟ ಎಂದೆನಿಸುತ್ತಿದೆ. ಸದಾ ಸಮಾಜದ ಒಳಿತಾಗಿ ಶ್ರಮಿಸುತ್ತಿದ್ದ ಅಣ್ಣನ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.
ನಟ ಸಂಚಾರಿ ವಿಜಯ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಛ ಸ್ವತಃ ತಾವೇ ಭರಿಸುವುದಾಗಿ ತಿಳಿಸಿರುವ ಡಿಸಿಎಂ ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ. ಅಪೋಲೋ ಆಸ್ಪತ್ರೆಯ ಆಡಳಿತ ವರ್ಗದ ಮುಖ್ಯಸ್ಥರಿಗೆ ಖುದ್ದಾಗಿ ಕರೆ ಮಾಡಿ ತಿಳಿಸಿದ್ದಾರಂತೆ. ಸಂಚಾರಿ ವಿಜಯ್ ಅವರ ಸಂಬಂಧಿಗಳಿಂದಾಗಲೀ ಅಥವಾ ಬೇರೆ ಯಾರಿಂದಲೂ ಹಣ ಪಾವತಿಸಿಕೊಳ್ಳದಂತೆ ಹೇಳಿದ್ದಾರಂತೆ.
ಇದನ್ನೂ ಓದಿ: Sanchari Vijay: ನಟ ಸಂಚಾರಿ ವಿಜಯ್ ಸ್ಥಿತಿ ಮತ್ತಷ್ಟು ಗಂಭೀರ: ಕೆಲವೇ ನಿಮಿಷಗಳಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆ..!
ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕೋಮದಲ್ಲಿರೋ ಸಂಚಾರಿ ವಿಜಯ್ ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಬೈಕ್ ಓಡಿಸುತ್ತಿದ್ದ ನವೀನ್ ಅವರ ಸ್ಥಿತಿಯೂ ಗಂಭೀರವಾಗಿದೆಯಂತೆ. ಸದ್ಯ ಇಬ್ಬರಿಗೂ ಚಿಕಿತ್ಸೆ ಮುಂದುವರೆಯುತ್ತಿದೆ. ಇಂದು ಬೆಳಿಗ್ಗೆ 11 ಘಂಟೆಗೆ ಮತ್ತೊಂದು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಿರುವ ಆಸ್ಪತ್ರೆಯ ವೈದ್ಯರು, ಸುದ್ದಿಗೋಷ್ಠಿ ಸಹ ಮಾಡಲಿದ್ದಾರೆ. ನ್ಯೂರೋ ಸರ್ಜನ್ ಡಾ. ಅರುಣ್ ನಾಯಕ್ ಸುದ್ದಿಗೋಷ್ಠಿಯಲ್ಲಿ ವಿಜಯ್ ಅವರ ಆರೋಗ್ಯ ಸ್ಥಿತಿ ಕುರಿತಾಗಿ ಮಾಹಿತಿ ನೀಡಲಿದ್ದಾರೆ.
ಗೆಳೆಯ ನವೀನ್ ಜೊತೆ ಸಂಚಾರಿ ವಿಜಯ್ ಶನಿವಾರ ರಾತ್ರಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಜೆಪಿ ನಗರ 7ನೇ ಹಂತದಲ್ಲಿ ಅಪಘಾತ ಸಂಭವಿಸಿದೆ. ಗೆಳೆಯ ನವೀನ್ಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊನ್ನೆ ರಾತ್ರಿ 11 ಗಂಟೆಗೆ ಈ ಅವಘಡ ಸಂಭವಿಸಿದೆ. ಮಳೆ ಜೋರಾಗಿದ್ದ ಕಾರಣ ವೇಗವಾಗಿ ಬೈಕ್ ಓಡಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ ಹೆಲ್ಮೆಟ್ ಹಾಕದ ಕಾರಣಕ್ಕೆ ತಲೆಗೆ ತೀವ್ರವಾಗಿ ಪೆಟ್ಟಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇನ್ನು ನಿನ್ನೆ ನಿರ್ದೇಶಕ ಮನ್ಸೊರೆ ಅವರು ಸಹ ವಿಜಯ್ ಅವರ ಆರೋಗ್ಯ ಸ್ಥಿತಿ ಕುರಿತಾಗಿ ಪೋಸ್ಟ್ ಮಾಡಿದ್ದರು. ಅಲ್ಲದೆ ಅಭಿಮಾನಿಗಳು ಹಾಗೂ ಸಿನಿ ರಂಗದ ಸಹ ಕಲಾವಿದರು ವಿಜಯ್ ಬೇಗ ಗುಣಮುಖರಾಗಿ ಬರಲೆಂದು ಪ್ರಾರ್ಥಿಸುತ್ತಿದ್ದಾರೆ.
ಸದ್ಯಕ್ಕೆ ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ಸಂಚಾರಿ ವಿಜಯ್, ಒಗ್ಗರಣೆ, ಕೃಷ್ಣ ತುಳಸಿ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Raj Kundra: ಮೊದಲ ಹೆಂಡತಿಗೆ ನನ್ನ ತಂಗಿಯ ಗಂಡನ ಜೊತೆ ಸಂಬಂಧವಿತ್ತು: ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ
ಕನ್ನಡ ಮಾತ್ರವಲ್ಲದೆ ಹಲವು ತಮಿಳು ಸಿನಿಮಾಗಳಲ್ಲೂ ಸಂಚಾರಿ ವಿಜಯ್ ನಟಿಸಿದ್ದಾರೆ. ಮೊದಲ ಅಲೆಯಿಂದಾಗಿ ಆಗಿದ್ದ ಲಾಕ್ಡೌನ್ ತೆರೆವುಗೊಂಡ ನಂತರ ರಿಲೀಸ್ ಆಗಿದ್ದ ಸಿನಿಮಾ ಆಕ್ಟ್ 1978 ಚಿತ್ರದಲ್ಲೂ ನಟಿಸಿದ್ದಾರೆ. 2011ರಲ್ಲಿ ತೆರೆಕಂಡ ರಂಗಪ್ಪ ಹೋಗ್ಬಿಟ್ನಾ ಚಿತ್ರದ ಮೂಲಕ ಸಂಚಾರಿ ವಿಜಯ್ ಸಿನಿರಂಗಕ್ಕೆ ಕಾಲಿಟ್ಟರು.
ನ್ಯೂಸ್18 ಕನ್ನಡ ಕಳಕಳಿ
ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ