ಭಾರತದ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ. ಈ ಸಿನಿಮಾದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದು ಗರುಡ ಪಾತ್ರಧಾರಿ ರಾಮಚಂದ್ರ ರಾಜು. ಈಗ ಅವರಿಗೆ ಸ್ಯಾಂಡಲ್ವುಡ್ ಮಾತ್ರವಲ್ಲದೆ ಬೇರೆ ಭಾಷೆಗಳಿಂದಲೂ ಆಫರ್ಗಳು ಬರುತ್ತಿವೆ. ‘ಕೆಜಿಎಫ್’ ನಂತರ ಈಗ ಅವರು ಕನ್ನಡದಲ್ಲಿ ಮತ್ತೊಂದು ಖಡಕ್ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ.
ಹಾಗಿದ್ದರೆ ಯಾವುದು ಆ ಚಿತ್ರ?
ಧನ್ವಿರ್ ನಟನೆಯ ‘ಬಂಪರ್’. ಸಿಂಪಲ್ ಸುನಿ ನಿರ್ದೇಶನದ ‘
ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಧನ್ವೀರ್ ಮುಂದಿನ ಸಿನಿಮಾ ‘ಬಂಪರ್’. ಹರಿ ಸಂತೋಷ್ ನಿರ್ದೇಶನದ ಈ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ರಾಮಚಂದ್ರ ರಾಜು ಜೀವ ತುಂಬಲಿದ್ದಾರೆ.
‘ಬಂಪರ್’ ಸಿನಿಮಾಗೆ ಒಂದೊಳ್ಳೆಯ ಖಡಕ್ ವಿಲನ್ ಹುಡುಕಾಟದಲ್ಲಿ ತೊಡಗಿದ್ದಾಗ ನಿರ್ದೇಶಕರಿಗೆ ಹೊಳೆದಿದ್ದು ರಾಮಚಂದ್ರ ರಾಜು ಹೆಸರು. ಈಗಾಗಲೇ ‘ಕೆಜಿಎಫ್’ ಮೂಲಕ ಮನೆ ಮಾತಾಗಿರುವ ರಾಮಚಂದ್ರ ‘ಬಂಪರ್’ ಕತೆ ಕೇಳಿದ್ದು, ಪಾತ್ರ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಬಜಾರ್ ಅಂಗಳದಲ್ಲಿ ಸಿಕ್ಕ ಧನ್ವೀರ್
‘ಕಾಲೇಜ್ ಕುಮಾರ್’ ಸಿನಿಮಾವನ್ನು ತಮಿಳು ಹಾಗೂ ತೆಲುಗಿಗೆ ರಿಮೇಕ್ ಮಾಡಿದ್ದರು ನಿರ್ದೇಶಕ ಹರಿ ಸಂತೋಷ್. ಇತ್ತೀಚೆಗೆ ತೆರೆಕಂಡ ‘ಬಿಚ್ಚುಗತ್ತಿ ಚಾಪ್ಟರ್ 1- ದಳವಾಯಿ ದಂಗೆ’ ಹೆಸರಿನ ಐತಿಹಾಸಿಕ ಸಿನಿಮಾ ಮಾಡುವ ಮೂಲಕ ಅವರು ಭರವಸೆ ಮೂಡಿಸಿದ್ದರು.
ಕೆಜಿಎಫ್ ತೆರೆಕಂಡ ನಂತರ ರಾಮಚಂದ್ರ ರಾಜು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿ ಅಭಿನಯದ ‘ಸುಲ್ತಾನ್’ ಸಿನಿಮಾದಲ್ಲಿ ರಾಮಚಂದ್ರ ವಿಲನ್. ಇನ್ನೂ ಕೆಲ ತಮಿಳು ಚಿತ್ರಗಳಿಗೆ ಅವರು ಸಹಿ ಹಾಕಿದ್ದಾರೆ. ಇದರ ಜೊತೆ ಜೊತೆಗೆ ಬಂಪರ್ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ