ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜ್ಕುಮಾರ್ ಸಕ್ರಿಯವಾಗಿದ್ದಾರೆ. ಆಗಾಗ ಪುನೀತ್ ಅಭಿಮಾನಿಗಳೊಂದಿಗೆ ತಮ್ಮ ಹಳೇ ನೆನೆಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ಬಾಲ್ಯ, ಸಿನಿಮಾ ಹಾಗೂ ದಿನ ನಿತ್ಯದ ಚಟುವಟಿಕೆಗಳ ಕುರಿತಾಗಿ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ಹಿಂದೆ ಲಾಕ್ಡೌನ್ ಆರಂಭವಾದಾಗ ಪುನೀತ್ ತಮ್ಮ ಸಖತ್ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ಜೊತೆಗೆ ಲಾಕ್ಡೌನ್ ಸಮಯವನ್ನು ಹೇಗೆ ಕಳೆಯಬಹುದು ಎಂದು ತಿಳಿಸಿಕೊಟ್ಟಿದ್ದರು. ಈಗ ಪುನೀತ್ ತಮ್ಮ ಬಹಳ ಹಳೇ ನೆನಪನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಹೌದು, ಕನ್ನಡ ಭಾಷೆಗಾಗಿ ನಡೆದ ಗೋಕಾಕ್ ಚಳುವಳಿ ಒಂದು ಕ್ರಾಂತಿಯನ್ನೇ ತಂದಿತ್ತು. ಸಾಹಿತಿಗಳು, ಕನ್ನಡದ ಅಭಿಮಾನಿಗಳು ರಸ್ತೆಗಿಳಿದು ಕನ್ನಡ ಭಾಷೆಗಳು ಹೋರಾಟ ನಡೆಸಿದ್ದರು. ಈ ಚಳುವಳಿಯಲ್ಲಿ ಪುನೀತ್ ಸಹ ಭಾಗಿಯಾಗಿದ್ದರು.
ಹೌದು, ಪುನೀತ್ ರಾಜ್ಕುಮಾರ್ ತಮ್ಮ ಟ್ವಿಟರ್ನಲ್ಲಿ ಗೋಕಾಕ್ ಚಳುವಳಿ ಸಮಯದಲ್ಲಿ ತೆಗೆದ ಹಳೇ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜ್ಕುಮಾರ್ ಅವರೊಂದಿಗೆ ಶಿವಣ್ಣ, ರಾಘೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ಸಹ ಇದ್ದಾರೆ.
ಸುಮ್ಮನೆ ಸರ್ಫ್ ಮಾಡುವಾಗ ಈ ಫೋಟೋ ಸಿಕ್ಕಿತು. ಇದರಲ್ಲಿ ಶಿವಣ್ಣ, ರಾಘಣ್ಣ ಹಾಗೂ ನಾನು ಅಪ್ಪಾಜಿ ಜೊತೆಗಿದ್ದೇವೆ ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ. ಗೋಕಾಕ್ ಚಳುವಳಿ ಸಮಯದಲ್ಲಿ ಪುನೀತ್ ಇನ್ನೂ ಪುಟ್ಟ ಬಾಲಕ.
ಕನ್ನಡಕ್ಕಾಗಿ ನಡೆದ ಈ ಚಳುವಳಿ ಇಡಿಹಾಸದಲ್ಲಿ ಕ್ರಾಂತಿಯನ್ನೇ ಮಾಡಿತು. ಈ ಚಳುವಳಿಗೆ ರಾಜ್ಕುಮಾರ್ ಅವರು ಎಂಟ್ರಿ ಕೊಟ್ಟ ನಂತರ ಅದರ ಸ್ವರೂಪವೇ ಬದಲಾಗಿತ್ತು. ಇನ್ನು ಈ ಚಳುವಳಿಯಲ್ಲಿ ರಾಜ್ಕುಮಾರ್ ಅವರೊಂದಿಗೆ ಅವರ ಮಕ್ಕಳು ಭಾಗಿಯಾಗಿದ್ದ ಫೋಟೋ ಇಲ್ಲಿಯವರೆಗೂ ಎಲ್ಲೂ ಬಹಿರಂಗವಾಗಿರಲಿಲ್ಲ. ಈ ಕಾರಣದಿಂದಾಗಿಯೇ ಅಭಿಮಾನಿಗಳಿಗೆ ಇದು ನಿಜಕ್ಕೂ ಸರ್ಪ್ರೈಸ್ ಆಗಿದೆ.
ಪುನೀತ್ ರಾಜ್ಕುಮಾರ್ ಯುವರತ್ನ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಜೇಮ್ಸ್ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ಯುವರತ್ನ ಸಿನಿಮಾದ ಡಬ್ಬಿಂಗ್ ಸಹ ಮುಗಿದಿದ್ದು, ತೆರೆಗಪ್ಪಳಿಸಲು ಸಿದ್ಧವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ