ಒಡಿಶಾದ ಖ್ಯಾತ ಕಿರುತೆರೆ ನಟಿ (Odia TV actor) ರಶ್ಮಿರೇಖಾ ಓಜಾ(Rashmirekha Ojha) ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ (Bhuvneshwara) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಇಲ್ಲಿನ ನಯಪಲ್ಲಿಯಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನಟಿಯ ಶವ ಪತ್ತೆಯಾಗಿದ್ದು, ಸಾವಿಗೆ ಸರಿಯಾದ ಕಾರಣ ಈವರೆಗೂ ತಿಳಿದುಬಂದಿಲ್ಲ. ಇದರ ನಡುವೆ ರಶ್ಮಿ ಸಾವಿನ ಬಗ್ಗೆ ಅನೇಕ ಅನುಮಾನ ವ್ಯಕ್ತವಾಗಿದೆ. ಜೊತೆಗೆ ರಶ್ಮಿರೇಖಾ ಸಾವಿನ ಹಿಂದೆ ಬಾಯ್ಫ್ರೆಂಡ್ ಸಂತೋಷ್ ಕೈವಾಡವಿದೆ ಎಂದು ನಟಿಯ ತಂದೆ ಆರೋಪಿಸಿದ್ದಾರೆ. ಆದರೆ ಸಾವಿಗೆ ಪ್ರೇಮ ವೈಫಲ್ಯ ಕಾರಣ ಎನ್ನಲಾಗುತ್ತಿದ್ದು, ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನೇಣು ಬಿಗಿದುಕೊಂಡು ಆತ್ಮಹತ್ಯೆ:
ಇನ್ನು, ನಟಿ ರಶ್ಮಿರೇಖಾ ವರು ನೇಣು ಬಿಗಿದ ಸ್ಥಿತಿಯಲ್ಲಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರ ಸಾವಿನ ಸುತ್ತ ಅನುಮಾನಗಳ ಹುತ್ತ ಹುಟ್ಟಿಕೊಂಡಿದ್ದು, ನಟಿಯ ತಂದೆ ರಶ್ಮಿರೇಖಾ ಅವರ ಬಾಯ್ಪ್ರೆಂಡ್ ಕಾರಣದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪಿಸಿದ್ದಾರೆ. ಸದ್ಯ ತನಿಖೆ ಆರಂಭಿಸಿರುವ ಪೊಲೀಸರು ಸ್ಥಳದಲ್ಲಿ ದೊರಕಿರುವ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಸೂಸೈಡ್ ನೋಟ್ನಲ್ಲಿ ‘ಮಿಸ್ ಯು ಬಾಬಾ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ತುಂಬಾ ಕೆಟ್ಟ ಮಗಳು‘ ಎಂದು ಬರೆಯಲಾಗಿದೆ. 24 ವರ್ಷದ ರಶ್ಮಿರೇಖಾ ಓಜಾ ಸಾವಿಗೆ ಶರಣಾದ ಕಿರುತೆರೆ ನಟಿಯಾಗಿದ್ದಾರೆ. ಇನ್ನು ಕೆಲ ಮೂಲಗಳ ಮಾಹಿತಿ ಪ್ರಕಾರ ರಶ್ಮಿರೇಖಾ ನಯಾಪಲ್ಲಿ ತಮ್ಮ ಮನೆಯಲ್ಲಿ ಸ್ನೇಹಿತ ಸಂತೋಷ್ನೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು ಎನ್ನಲಾಗಿದೆ.
ಕಿರುತೆರೆ ನಟನೆಯಿಂದ ಖ್ಯಾತಿ ಪಡೆದಿದ್ದ ನಟಿ:
ಒಡಿಶಾದ ಕಿರುತೆರೆಯಲ್ಲಿ ನಟಿಸುತ್ತಿದ್ದ ರಶ್ಮಿರೇಖಾ ಓಜಾ ಅವರು ಉತ್ತಮ ಜನಮನ್ನಣೆ ಪಡೆದುಕೊಂಡಿದ್ದರು. ರಶ್ಮಿ ಒಡಿಶಾದ ಜಗತ್ಸಿಂಗ್ಪುರ್ ಜಿಲ್ಲೆಯವರು. ಇವರು ಒಡಿಶಾದ ಕೆಮಿತಿ ಕಹಿಬಿ ಕಹಾ ಧಾರಾವಾಹಿ ಕಿರುತೆರೆ ಲೋಕದಲ್ಲಿ ಪ್ರಸಿದ್ಧರಾಗಿದ್ದರು. ಅಲ್ಲದೇ ತಮ್ಮ ಅದ್ಭುತ ನಟನೆಯ ಮೂಲಕ ರಶ್ಮಿ ಅವರು ಒಡಿಶಾದ ಮನೆಮಾತಾಗಿದ್ದರು. ಇದೀಗ ಅವರ ಸಾವು ಕಿರಿತೆರೆ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿದೆ.
ಇದನ್ನೂ ಓದಿ: Virat Kohli: ಸ್ಯಾಂಡಲ್ವುಡ್ಗೆ ಕಾಲಿಟ್ರಾ ಕಿಂಗ್ ಕೊಹ್ಲಿ? ಕನ್ನಡ ಸಿನಿಮಾದ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್
ಇನ್ನು, ಮಗಳ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ತಂದೆ, ‘ಮಗಳ ಸಾವಿಗೆ ಸ್ನೇಹಿತ ಸಂತೋಷ್ ಅವರೇ ಕಾರಣ ಎಂದು ಆರೋಪಿದ್ದಾರೆ. ಶನಿವಾರ ನಾವು ಆಕೆಗೆ ಕರೆ ಮಾಡಿದರು ಉತ್ತರಿಸಿಲ್ಲ. ನಂತರ ಸಂತೋಷ್ ನಮಗೆ ಮಾಹಿತಿ ತಿಳಿಸಿದರು. ರಶ್ಮಿ ಮತ್ತು ಸಂತೋಷ್ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು ಎನ್ನುವ ಮಾಹಿತಿ ಮನೆ ಮಾಲಿಕರಿಂದ ತಿಳಿಯಿತು. ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ' ಎಂದು ಹೇಳಿದ್ದಾರೆ.
ತನಿಖೆ ಆರಂಭಿಸಿರುವ ಪೊಲೀಸರು:
ಇನ್ನು, ನಟಿ ರಶ್ಮಿರೇಖಾ ಅವರ ಸಾವಿನ ತನಿಖೆಯನ್ನು ಪೊಲೀಸರು ಆರಮಭಿಸಿರುವುದಾಗಿ ತಿಳಿದುಬಂದಿದೆ. ಇದರ ಭಾಗವಾಗಿ ರಶ್ಮಿಋಏಖಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರದಲ್ಲಿ ನಟಿಯ ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬರಲಿದೆ. ಆದರೆ ಪ್ರಾಥಮಿಕ ತನಿಖೆ ಆಧರಿಸಿ ಇದೊಂದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಪೊಲೀಸರಿಗೆ ಸಿಕ್ಕ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ನಟಿ ಬರೆದಿಟ್ಟಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಪೊಲೀಸರು ಇದೊಂದು ಸೂಸೈಡ್ ಎಂದು ಪರಿಗಣಿಸಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ದೊರಕಲಿದೆ ಎಂದು ಭುವನೇಶ್ವರದ ಡಿಸಿಪಿ ಅವರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ