ಈ ಹೃದಯಾಘಾತವೆನ್ನುವುದು (Heart attack) ಸಾಕಷ್ಟು ಅಪಾಯಕಾರಿ. ಯಾವಾಗ, ಎಲ್ಲಿ, ಹೇಗೆ ಸಂಭವಿಸುತ್ತದೆ ಎಂದು ಊಹಿಸಲು ಸಾಧ್ಯವೇ ಇಲ್ಲ. ಅದೆಷ್ಟೋ ವ್ಯಕ್ತಿಗಳು ಏನಾದರೊಂದು ಕೆಲಸ ಮಾಡುತ್ತಿರುವಾಗ ಒಮ್ಮೆಲೆ ಹೃದಯಾಘಾತ ಉಂಟಾಗಿ ಸತ್ತು ಹೋದ ಉದಾಹರಣೆಗಳಿವೆ. ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಇತ್ತೀಚಿಗಷ್ಟೇ ಚಿತ್ರಮಂದಿರಗಳಲ್ಲಿ (Theaters) ತೆರೆಕಂಡು ಅದ್ದೂರಿಯಾಗಿ ನಡೆಯುತ್ತಿರುವ ಹಾಲಿವುಡ್ ಚಿತ್ರ ಅವತಾರ್ 2 (Avatar) ಅನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲೇ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ನಗರದಲ್ಲಿ ವ್ಯಕ್ತಿಯೊಬ್ಬರು ಅವತಾರ್ 2 ಚಿತ್ರವನ್ನು ವೀಕ್ಷಿಸುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಲಕ್ಷ್ಮಿರೆಡ್ಡಿ ಸ್ರೀನು ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿರೆಡ್ಡಿ ಅವರು ಇತ್ತೀಚಿಗಷ್ಟೇ ತೆರೆಕಂಡಿರುವ ಅವತಾರ್ ಚಿತ್ರವನ್ನು ವೀಕ್ಷಿಸಲೆಂದು ಪೆದ್ದಾಪುರಂನಲ್ಲಿ ತಮ್ಮ ಸಹೋದರ ರಾಜು ಎಂಬುವವರೊಂದಿಗೆ ಇಲ್ಲಿನ ಚಿತ್ರಮಂದಿರಕ್ಕೆ ತೆರಳಿದ್ದರೆನ್ನಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಚಿತ್ರದ ಮಧ್ಯ ಭಾಗದಲ್ಲಿ ಚಿತ್ರ ವೀಕ್ಷಿಸುತ್ತಿರುವ ಸಂದರ್ಭದಲ್ಲೇ ಸ್ರೀನು ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆನ್ನಲಾಗಿದೆ.
ಇದನ್ನು ಗಮನಿಸಿದ ಅವರ ಸಹೋದರ ರಾಜು ಅವರು ತ್ವರಿತವಾಗಿ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದರಾದರೂ ಅಲ್ಲಿನ ವೈದ್ಯರು ಸ್ರೀನು ಅವರನ್ನು ಪರೀಕ್ಷಿಸಿ ಅವರು ಈಗಾಗಲೇ ಮರಣಿಸಿದ್ದಾರೆಂದು ತಿಳಿಸಿ ಮರಣಿಸಿದ ನಂತರ ತರಲಾಗಿದೆ ಎಂದು ಘೋಷಿಸಿದ್ದಾರೆ.
ಲಕ್ಷ್ಮಿರೆಡ್ಡಿ ಅವರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು ಕುಟುಂಬವು ದುಖದ ಮಡುವಿನಲ್ಲಿ ಮುಳುಗಿದೆ. ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆಯಾಗಿದ್ದು ಸಾವು ಎಂಬುದು ಯಾವಾಗ ಹೇಗೆ ಬರುತ್ತದೆ ಎಂಬುದು ತಿಳಿಯದು ಎಂಬ ವಿಷಯವನ್ನು ಮತ್ತಷ್ಟು ಗಟ್ಟಿ ಮಾಡಿಸಿದೆ.
ಇದನ್ನೂ ಓದಿ: Avatar 2 Twitter Review: ಅವತಾರ್ 2 ಹೇಗಿದೆ? ಸೀಕ್ವೆಲ್ ಅಂದ್ರೆ ಇದಪ್ಪಾ ಅಂದ್ರು ಜನ
ಈ ನಡುವೆ ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ರೋಚಕ ಘಟನೆ ನೆನಪಿಗೆ ಬರುವಂತಿದೆ. 2010 ರಲ್ಲಿ ಅವತಾರ್ ಚಿತ್ರದ ಮೊದಲನೇ ಭಾಗವು ತೆರೆಕಂಡಿದ್ದಂತಹ ಸಂದರ್ಭದಲ್ಲಿ ಆ ಚಿತ್ರವನ್ನು ವೀಕ್ಷಿಸುತ್ತಿರುವಾಗ ಹೃದಯಾಘಾತದಿಂದಲೇ 42ರ ಪ್ರಾಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.
ಈ ಘಟನೆಯು ತೈವಾನ್ ದೇಶದಲ್ಲಿ ನಡೆದಿತ್ತು. ಆ ವ್ಯಕ್ತಿಗೆ ತೀವ್ರವಾದ ರಕ್ತದೊತ್ತಡವಿತ್ತೆಂದು ತದನಂತರ ತಿಳಿದುಬಂದಿತ್ತು. ಅವರ ಶರೀರವನ್ನು ಈ ಸಂದರ್ಭದಲ್ಲಿ ವಿವರವಾಗಿ ಪರೀಕ್ಷಿಸಿದ್ದ ವೈದ್ಯರು ಚಿತ್ರದ ಎಕ್ಸೈಟ್ಮೆಂಟ್ ನಿಂದಾಗಿ ಅವರಿಗೆ ಹೃದಯಾಘಾತವಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು.
ಇದೀಗ ಆ ಚಿತ್ರದ ಎರಡನೇ ಭಾಗವನ್ನು ವೀಕ್ಷಿಸುತ್ತಿರುವಾಗ ವ್ಯಕ್ತಿಯೊಬ್ಬ ಅದೇ ರೀತಿ ಹೃದಯಾಘಾತದಿಂದ ಮರಣಿಸಿರುವ ಘಟನೆ ಈಗ ಭಾರತದಲ್ಲಿ ನಡೆದಿರುವುದು ಒಂದು ರೀತಿಯ ಸೋಜಿಗದ ವಿಷಯವೇ ಆಗಿದೆ ಎನ್ನಬಹುದು. ಇವೆರಡು ಘಟನೆಗಳು ನಡೆದಿದ್ದು ಕಾಕತಾಳೀಯವೇ ಆಗಿದ್ದರೂ ಹೀಗೆ ಒಂದೇ ಚಿತ್ರದ ಎರಡು ವಿವಿಧ ಭಾಗಗಳು ತೆರೆಕಂಡಾಗ ಒಂದೇ ರೀತಿಯಲ್ಲಿ ಚಿತ್ರ ವೀಕ್ಷಣೆಯ ಸಂದರ್ಭದಲ್ಲೇ ಸಾವು ಬಂದಿರುವುದು ಅಚ್ಚರಿ ಮೂಡಿಸುವಂತಿದೆ.
ಒಟ್ಟಿನಲ್ಲಿ, ಹೃದಯಾಘಾತ ಎಂಬುದು ಇತ್ತೀಚಿನ ಕೆಲ ವರ್ಷಗಳಲ್ಲಿ ಎಲ್ಲೆಡೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ವಿಶೇಷವಾಗಿ ವಯಸ್ಕರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿರುವುದು ಒಂದೆಡೆ ಆತಂಕ ಉಂಟು ಮಾಡಿದೆ ಎನ್ನಬಹುದು. ವೈದ್ಯರ ಪ್ರಕಾರ ಇಂದಿನ ರಭಸದ ಹಾಗೂ ಒತ್ತಡ ಜೀವನದಿಂದಾಗಿ, ಕಳಪೆ ಜೀವನಶೈಲಿಯಿಂದಾಗಿ ಜನರಲ್ಲಿ ಹೃದಯಾಘಾತ ಹೆಚ್ಚುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ಇಂದು ಹಿಂದೆಂದಿಗಿಂತಲೂ ಜನರು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸುತ್ತಿದ್ದಾರೆನ್ನಬಹುದು.
ಕಳೆದ ಕೆಲ ಸಮಯದಲ್ಲಿ ಪುನಿತ್ ರಾಜಕುಮಾರ್ ಅವರಿಂದ ಹಿಡಿದು ಹಿಂದಿಯ ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ತ್ ಶುಕ್ಲಾದವರೆಗೆ ಹಲವು ಖ್ಯಾತನಾಮರು ಸಣ್ಣ ವಯಸ್ಸಿನಲ್ಲೇ ಈ ಹೃದಯಾಘಾತದಿಂದ ನಮ್ಮನ್ನೆಲ್ಲ ಅಗಲಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ