ಕಾಂತಾರ (Kantara) ಸಿನಿಮಾದ ಜನಪ್ರಿಯ ಗೀತೆ ವರಾಹ ರೂಪಂ ಹಾಡಿನ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಸಿನಿಮಾ ತಂಡಕ್ಕೆ ಕೇರಳ ಜಿಲ್ಲಾ ನ್ಯಾಯಾಲಯ (District Court) ಶಾಕ್ ನೀಡಿದ್ದು, ವರಾಹ ರೂಪಂ (Varaha Roopam) ಹಾಡನ್ನು ಚಿತ್ರಮಂದಿರದಲ್ಲಾಗಲಿ, ಡಿಜಿಟಲ್ ಅಥವಾ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲೂ ಬಳಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ. ವರಾಹ ರೂಪಂ ಹಾಡು ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಆಗಿದೆ ಎನ್ನಲಾಗ್ತಿದೆ. ಅದೇ ಕಾರಣ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ವರಾಹ ರೂಪಂ ಹಾಡು ತಮ್ಮ ನವರಸಂ ಹಾಡಿನ ನಕಲು ಎಂದು ಥೈಕ್ಕುಡ್ಡಂ ಬ್ರಿಡ್ಜ್ ಹೆಸರಿನ ಸಂಗೀತ ತಂಡವೊಂದು ಪ್ರಕರಣ ದಾಖಲಿಸಿತ್ತು.
ನವರಸಂ ಹಾಡಿನಿಂದ ಪ್ರೇರಣೆ-ಅಜನೀಶ್ ಲೋಕನಾಥ್
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆಇ ಸಾಹಿಲ್, ಥೈಕ್ಕುಡ್ಡಂ ಬ್ರಿಡ್ಜ್ ಹಾಗೂ ಹಾಡಿನ ಮೂಲ ಹಕ್ಕನ್ನು ಮಾತ್ರಭೂಮಿ ಪ್ರಿಂಟಿಗ್ ಆಂಡ್ ಪಬ್ಲಿಕೇಶನ್ ಕಂಪನಿಯ ಹೊಂದಿದೆ. ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಬೇಕು ಎಂದ್ರು. ಅಷ್ಟೇ ಅಲ್ಲದೇ ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ತಾವು ನವರಸಂ ಹಾಡಿನಿಂದ ಪ್ರೇರಣೆ ಪಡೆದಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ವರಾಹ ರೂಪಂ ಹಾಡಿಗೆ ತಪ್ಪದ ಸಂಕಷ್ಟ
ಕೋಳಿಕ್ಕೋಡ್ ನ್ಯಾಯಾಲಯದ ನ್ಯಾಯಾಧೀಶ ಎಸ್ ಸೂರಜ್, ಹಕ್ಕುಸ್ವಾಮ್ಯ ಕಾಯ್ದೆಯಡಿ ವರಾಹ ರೂಪಂ ಹಾಡಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸೀಜ್ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೆ ಡಿಜಿಟಲ್ ಹಕ್ಕುಗಳು, ಹಾಡಿನ ಕಂಪೋಸ್ಗೆ ಬಳಸಿದ ನೋಟ್ಗಳನ್ನು ಸಂಗ್ರಹಿಸುವಂತೆ ಹೇಳಿದ್ದರು. ಮೇ 4 ರ ಒಳಗಾಗಿ ತನಿಖೆಯ ಕುರಿತು ವರದಿಗಳನ್ನು ಸಲ್ಲಿಸುವಂತೆ ಸಹ ಸೂಚಿಸಿದ್ದರು. ಫೆಬ್ರವರಿ 8 ರಂದು ಕೇರಳ ಹೈಕೋರ್ಟ್ ಸಹ ವರಾಹ ರೂಪಂ ಹಾಡು ನವರಸಂ ಹಾಡಿನ ಕೃತಿಚೌರ್ಯ ಎಂದಿತ್ತು.
ಕೋಝಿಕೋಡ್ ನ್ಯಾಯಾಲಯದಿಂದ ತಡೆ
ಈ ಹಿಂದೆ ಇದೇ ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ (Kozhikode court in Kerala), ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿತ್ತು. ಈ ವಿಚಾರವನ್ನು ‘ತೈಕ್ಕುಡಂ ಬ್ರಿಡ್ಜ್’ ಚಿತ್ರತಂಡವೇ ತನ್ನ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಹಂಚಿಕೊಂಡಿತ್ತು.
ಮಲಯಾಳಂ ಸಿನಿಮಾದಿಂದ ಕಾಪಿ ಮಾಡಿದ್ದ ಆರೋಪ
ಕಾಂತಾರಾ ಸಿನಿಮಾದ ವರಾಹ ರೂಪಂ ಎನ್ನುವ ಫೇಮಸ್ ಟ್ಯೂನ್ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಅಂತ ಚರ್ಚೆ ಶುರುವಾಗಿತ್ತು. ಈ ಹಾಡಿನ ಮೇಲೆ ಕೃತಿಚೌರ್ಯದ ಆರೋಪ ಕೇಳಿಬಂದಿತ್ತು . ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಹಾಗಾಗಿ ಈ ಹಾಡನ್ನು ಒಳಗೊಂಡಿದ್ದ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ ತಂಡದವರು ಕೇಸ್ ಹಾಕಲು ನಿರ್ಧರಿಸಿದ್ದರು.
ಇದನ್ನೂ ಓದಿ: Kantara Telugu: ತೆಲುಗಿನಲ್ಲಿ ಕಾಂತಾರ ಹವಾ! 13 ದಿನದಲ್ಲಿ 45 ಕೋಟಿ ಬಾಚಿದ ಸಿನಿಮಾ
ಇದು ಕಾಪಿ ಅಲ್ಲ, ಸ್ಫೂರ್ತಿ ಎಂದಿದ್ದ ಕಾಂತಾರ ತಂಡ
‘ಕಾಂತಾರ’ ಚಿತ್ರ ಬಿಡುಗಡೆ ಆದಾಗಲೇ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ