ಶಿರಸಿ (Sirsi) ಮೂಲದ ನಟೇಶ್ ಹೆಗಡೆ (Natesh Hegade) ಮಾಡಿದ ಕೆಲವು ಕಿರುಚಿತ್ರಗಳು (Short Films) ಜನಪ್ರಿಯವಾಗಿದೆ. ಇವರ ಒಂದು ಕಿರುಚಿತ್ರ ವೀಕ್ಷಿಸಿದ ರಾಜ್ ಬಿ ಶೆಟ್ಟಿ (Raj B Shetty), ನಟೇಶ್ ಅವರನ್ನು ಸಂಪರ್ಕಿಸುತ್ತಾರೆ. ನಟೇಶ್ ಅವರ ಪ್ರತಿಭೆ ಬಗ್ಗೆ ರಿಷಭ್ ಶೆಟ್ಟಿ (Rishabh Shetty) ಬಳಿ ಹೇಳಿದಾಗ, ರಿಷಭ್ ‘ಪೆದ್ರೊ’ (Pedro) ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಾರೆ. ಈ ಚಿತ್ರ ನಿರ್ಮಾಣವಾಗಿ ವಿವಿಧ ದೇಶಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(International Film Festival)ಗಳಲ್ಲಿ ಪ್ರದರ್ಶನಗೊಂಡಿದೆ. ಸದ್ಯದಲ್ಲೇ ಕರ್ನಾಟಕದ ಚಿತ್ರಮಂದಿರಗಳಲ್ಲೂ ‘ಪೆದ್ರೊ’ ಬಿಡುಗಡೆಯಾಗಲಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ (Trailer) ಅನ್ನು ಹೆಸರಾಂತ ನಿರ್ದೇಶಕ ಗಿರೀಶ್ ಕಾಸರವಳ್ಳಿ (Girish Kasaravalli) ಬಿಡುಗಡೆ ಮಾಡಿದರು.
ಸಿನಿಮಾ ನೋಡಿ ಬೆರಗಾದೆ ಎಂದ ಗಿರೀಶ್ ಕಾಸರವಳ್ಳಿ!
‘ನಾನು ‘ಪೆದ್ರೊ’ ಚಿತ್ರ ನೋಡಿ ಬೆರಗಾದೆ. ಇತ್ತೀಚೆಗೆ ದೂರವಾಗಿರುವ ಸಿನಿಮಾ ಭಾಷೆಯನ್ನು ಈ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಮಾಮೂಲಿ ತರಹ ಅಲ್ಲದೆ ಬೇರೆಯದೇ ರೀತಿಯ ಸಿನಿಮಾ ಮಾಡಬೇಕು. ಆ ರೀತಿ ಕನ್ನಡದಲ್ಲಿ ‘ತಿಥಿ’ ಹಾಗೂ ‘ಹರಿಕಥಾ ಪ್ರಸಂಗ’ ಚಿತ್ರಗಳು ನನಗೆ ಹಿಡಿಸಿದ್ದವು. ಈಗ ಆ ಸಾಲಿಗೆ ‘ಪೆದ್ರೊ’ ಸೇರಿದೆ. ರಿಷಭ್ ಶೆಟ್ಟಿ ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯ ದಾಗಲಿ’ ಎಂದು ಗಿರೀಶ್ ಕಾಸರವಳ್ಳಿ ಹಾರೈಸಿದರು.
ಮಗ ನಿರ್ದೇಶಕ, ಅಪ್ಪ ಹೀರೋ!
‘ನನ್ನ ಪ್ರಕಾರ ಕಮರ್ಷಿಯಲ್ ಸಿನಿಮಾ, ಅವಾರ್ಡ್ ಸಿನಿಮಾ ಎಂಬುದು ಇಲ್ಲ. ಸಿನಿಮಾ ಅಂದರೆ ಸಿನಿಮಾ ಅಷ್ಟೇ. ವಿಭಾಗಗಳನ್ನು ನಾವು ಮಾಡಿಕೊಂಡಿದ್ದೇವೆ. ನಾನು ಇಷ್ಟಪಡುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಟ್ರೇಲರ್ ಬಿಡುಗಡೆ ಮಾಡಿದ್ದು ಬಹಳ ಸಂತೋಷವಾಗಿದೆ. ಅವರ ಮಾರ್ಗದರ್ಶನ ನಮಗೆ ಮುಖ್ಯ. ನಟೇಶ್ ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ತಂದೆ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಮಗ , ತಂದೆಯನ್ನು ಚಿತ್ರರಂಗಕ್ಕೆ ಪ್ರವೇಶ ಮಾಡಿಸಿದ್ದಾರೆ. ನಟೇಶ್ ಹೆಗಡೆ ಅವರ ತಂದೆ ಗೋಪಾಲ್ ಹೆಗಡೆ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ’ ಎಂದು ರಿಷಭ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: ಅಂತೆ-ಕಂತೆಗಳನ್ನು ನಂಬಬೇಡಿ.. ನಾವೇ ಎಲ್ಲ ಮಾಹಿತಿ ನೀಡ್ತೇವೆ ಎಂದ ಜೇಮ್ಸ್ ನಿರ್ಮಾಪಕ!
ರಿಷಭ್, ರಾಜ್ ಬಿ ಶೆಟ್ಟಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ನಟೇಶ್!
‘ನಮ್ಮ ಚಿತ್ರ ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಆದರೆ ಇಲ್ಲಿನವರಿಗೆ ಈ ಚಿತ್ರ ತಲುಪಬೇಕು. ಅದರ ಮೊದಲ ಹೆಜ್ಜೆಯಾಗಿ ಟ್ರೇಲರ್ ಬಿಡುಗಡೆ ಮಾಡಿದ್ದೀವಿ. ನನ್ನ ಕಥೆ ಇಷ್ಟಪಟ್ಟು ಹಣ ಹಾಕಿದ ರಿಷಭ್ ಶೆಟ್ಟಿ ಅವರಿಗೆ, ರಿಷಭ್ ರನ್ನು ಪರಿಚಯಿಸಿದ ರಾಜ್ ಶೆಟ್ಟಿ ಅವರಿಗೆ, ಚಿತ್ರದಲ್ಲಿ ನಟಿಸಿರುವ ನನ್ನ ತಂದೆ ಗೋಪಾಲ್ ಹೆಗಡೆ ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಿರೀಶ್ ಕಾಸರವಳ್ಳಿ ಸರ್ ಅವರಿಗೆ ಅನಂತ ಧನ್ಯವಾದ’ ತಿಳಿಸಿದರು ನಿರ್ದೇಶಕ ನಟೇಶ್ ಹೆಗಡೆ.
ಇದನ್ನೂ ಓದಿ: ಸಂಬಂಧಿಕರ ಮದುವೆಯಲ್ಲಿ ‘ರಾಕಿ ಭಾಯ್’, ಮಕ್ಕಳ ಜೊತೆ ರಾಧಿಕಾ ಮಿಂಚಿಂಗ್
ಫೇಸ್ಬುಕ್ನಲ್ಲಿ ಕಿರುಚಿತ್ರ ನೋಡಿದ್ದ ರಾಜ್ ಬಿ ಶೆಟ್ಟಿ!
‘ಈ ಹುಡುಗನನ್ನು ಫೇಸ್ ಬುಕ್ ಮೂಲಕ ಹುಡುಕಿ, ನಿನ್ನ ಕಿರುಚಿತ್ರವೊಂದನ್ನು ಕಳುಹಿಸು ಎಂದೆ. ಆತನ ಕಿರುಚಿತ್ರ ನೋಡಿ ಸಂತೋಷ ಪಟ್ಟೆ. ರಿಷಭ್ಗೆ ಈತನನ್ನು ಪರಿಚಯಿಸಿದೆ. ಈಗ ಈ ಚಿತ್ರ ನಿರ್ಮಾಣವಾಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಈ ಹುಡುಗನಿಗೆ ಹಾಗೂ ತಂಡಕ್ಕೆ ನಿಮ್ಮ ಬೆಂಬಲವಿರಲಿ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು.
ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪೆದ್ರೋ ಕಡೆಗಣನೆ!
‘ಬೆಂಗಳೂರು ಸಿನಿಮೋತ್ಸವಕ್ಕೆ ಚಿತ್ರ ಕಳಿಸಿದ್ದೆವು. ಆದರೆ ಒಳ ರಾಜಕೀಯದಿಂದಾಗಿ ನಮ್ಮ ಚಿತ್ರವನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಲ್ಲ. ಬೂಸಾನ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಸೇರಿದಂತೆ ವಿದೇಶಿ ನೆಲದಲ್ಲಿ ಹಲವೆಡೆ ಪ್ರದರ್ಶನ ಕಂಡು ಪ್ರಶಸ್ತಿ ಪಡೆದ ಕನ್ನಡ ಚಿತ್ರಕ್ಕೆ ಕನ್ನಡ ನೆಲದಲ್ಲೇ ಅವಗಣನೆ ಮಾಡಲಾಗಿದೆ’ ಎಂದು ನಿರ್ಮಾಪಕ ರಿಷಭ್ ಶೆಟ್ಟಿ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ