ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಾಗಿದೆ. ಕಾಂತಾರ (Kantara Movie) ಸಿನಿಮಾ ಕನ್ನಡದ ಹೆಮ್ಮೆಯನ್ನ ಹೆಚ್ಚಿಸಿಯೂ ಆಗಿದೆ. ಇದರ ಮಧ್ಯ ಸ್ಯಾಂಡಲ್ವುಡ್ ಸ್ಟಾರ್ ಮಕ್ಕಳು 2022 ರ ಸಾಲಿನಲ್ಲಿ (Sandalwood Star Kids Entry) ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಈ ಮೂಲಕ ಕನ್ನಡ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಇನ್ನು ಕೆಲವರ ಸಿನಿಮಾ ಈಗಷ್ಟೆ ಸೆಟ್ಟೇರಿದೆ. ಇದಕ್ಕೂ ಹೆಚ್ಚಾಗಿ ಈ ವರ್ಷ ಒಂದೇ ಚಿತ್ರದಲ್ಲಿಯೇ ದಂಡಿಯಾಗಿಯೇ (Guru Shishyaru Cinema) ಸ್ಟಾರ್ ಮಕ್ಕಳು ರಂಗ ಪ್ರವೇಶ ಮಾಡಿದ್ದಾರೆ. ಇನ್ನುಳಿದಂತೆ ಬೇರೆ ಬೇರೆ ನಟರ ಮಕ್ಕಳು ಬೇರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಹಾಗೆ ಈ ವರ್ಷ (Kannada Film Industry) ಸಿನಿಮಾರಂಗಕ್ಕೆ ಕಾಲಿಟ್ಟವರು ಯಾರು? ಕಾಲಿಡ್ತಾರೆ ಅನ್ನೋ ಸುದ್ದಿಯಲ್ಲಿರೋರು ಮತ್ಯಾರು? ಈ ಮಾಹಿತಿ ಇಲ್ಲಿದೆ.
ಒಂದೇ ಚಿತ್ರದಲ್ಲಿ ಕನ್ನಡ ಸ್ಟಾರ್ ಮಕ್ಕಳ ಸಖತ್ ಎಂಟ್ರಿ
ಕನ್ನಡ ಚಿತ್ರರಂಗಕ್ಕೆ 2022 ರಲ್ಲಿ ಕನ್ನಡದ ಸ್ಟಾರ್ ಮಕ್ಕಳು ಪ್ರವೇಶ ಮಾಡಿದ್ದಾರೆ. ಆ ಲೆಕ್ಕದಲ್ಲಿ ದೊಡ್ಡಮಟ್ಟದಲ್ಲಿಯೇ ಒಂದೇ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಲಾವಿದರು ಮಕ್ಕಳು ಪ್ರವೇಶ ಪಡೆದಿದ್ದಾರೆ. ಆ ಚಿತ್ರದ ಹೆಸರು ಗುರು ಶಿಷ್ಯರು.
ಹೌದು, ಈ ಚಿತ್ರ ಒಂದು ರೀತಿ ಕಲಾವಿದರ ಮಕ್ಕಳಿಗೆ ಸಿನಿಮಾ ಪ್ರವೇಶಕ್ಕೆ ವೇದಿಕೆನೆ ಆಗಿತ್ತು. ಇದರಿಂದ ಹಾಸ್ಯ ನಾಯಕ ನಟ ಶರಣ್ ಪುತ್ರ ಹೃದಯ್, ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ನವೀನ್ ಕೃಷ್ಣ ಅವರ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈ ಚಿತ್ರದ ಮೂಲಕವೇ ಎಂಟ್ರಿ ಕೊಟ್ಟಿದ್ದಾರೆ.
ಸ್ಟಾರ್ ಮಕ್ಕಳ ಪ್ರವೇಶಕ್ಕೆ ವೇದಿಕೆಯಾದ ಗುರು ಶಿಷ್ಯರು ಸಿನಿಮಾ
ಗುರು ಶಿಷ್ಯರು ಸಿನಿಮಾ ನಿಜಕ್ಕೂ ವಿಶೇಷ ಸಿನಿಮಾನೇ ಆಗಿದೆ. ಈ ಚಿತ್ರದಲ್ಲಿ ಖೋ ಖೋ ಆಟವೇ ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಆಟಗಾರರಾಗಿಯೆ ಸ್ಟಾರ್ ಮಕ್ಕಳು ಚಿತ್ರರಂಗ ಪ್ರವೇಶಿಸಿದರು. ಆ ಲೆಕ್ಕದಲ್ಲಿ ಹಾಸ್ಯ ನಟ ರವಿಶಂಕರ್ ಗೌಡ ಅವರ ಪುತ್ರ ಸೂರ್ಯ ರವಿಶಂಕರ್ ಕೂಡ ಈ ಚಿತ್ರದ ಮೂಲಕವೇ ಕನ್ನಡಕ್ಕೆ ಕಾಲಿಟ್ಟರು.
ಕನ್ನಡ ಚಿತ್ರರಂಗದಲ್ಲಿ ಇನ್ನೂ ಒಂದು ಬೆಳವಣಿಗೆ ಈ ವರ್ಷ ಆಯಿತು. ನಟ ನೆನಪಿರಲಿ ಪ್ರೇಮ್ ಪುತ್ರಿ ಕೂಡ ಇದೇ ವರ್ಷ ಸಿನಿಮಾರಂಗಕ್ಕೆ ಕಾಲಿಟ್ಟೇ ಬಿಟ್ಟರು. ಗುರು ಶಿಷ್ಯರು ಚಿತ್ರದ ಮೂಲಕ ಪ್ರೇಮ್ ಪುತ್ರ ಏಕಾಂತ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅದಾದ್ಮೇಲೆ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಈಗ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದಾರೆ.
ಟಗರು ಪಲ್ಯ ಚಿತ್ರದ ಮೂಲಕ ಪ್ರೇಮ್ ಪುತ್ರಿಯ ಪ್ರವೇಶ
ನಾಯಕ ನಟ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಒಪ್ಪಿರೋ ಸಿನಿಮಾ ಸೆಟ್ಟೇರಿದೆ. ಟಗರು ಪಲ್ಯ ಹೆಸರಿನ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ವಿಶೇಷವಾಗಿ ಪ್ರೇಮ್ ಪುತ್ರಿಯನ್ನ ನಟ ಡಾಲಿ ಧನಂಜಯ್ ತಮ್ಮ ನಿರ್ಮಾಣ ಸಂಸ್ಥೆ ಮೂಲಕವೇ ಪರಿಚಯ ಮಾಡಿಸಿದ್ದಾರೆ.
ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿ ಮಕ್ಕಳ ಪ್ರವೇಶ
ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಕಾಂತಾರ ಚಿತ್ರದಲ್ಲೂ ಇನ್ನೂ ಒಂದು ವಿಶೇಷ ಇದೆ. ಸಿನಿಮಾ ಆರಂಭದಲ್ಲಿಯೇ ರಾಜಾ-ರಾಣಿ ಪಾತ್ರಗಳೂ ಇವೆ. ಈ ಪಾತ್ರದಲ್ಲಿ ರಾಣಿಯ ಪಾತ್ರವನ್ನ ರಿಷಬ್ ಪತ್ನಿ ಪ್ರಗತಿ ನಿರ್ವಹಿಸಿದ್ದಾರೆ.
ಈ ರಾಣಿಯ ಮಕ್ಕಳಾಗಿಯೇ ರಿಷಬ್ ಮತ್ತು ಪ್ರಗತಿಯ ಮಕ್ಕಳೆ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ರಿಷಬ್ ಶೆಟ್ರ ಮಕ್ಕಳೂ 2022 ರಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದಂತಾಗಿದೆ.
ಕನ್ನಡದ ಇಬ್ಬರು ಸ್ಟಾರ್ ಮಕ್ಕಳ ಎಂಟ್ರಿಯ ಸುದ್ದಿ ವೈರಲ್
ಕನ್ನಡ ಇಬ್ಬರು ಸ್ಟಾರ್ಗಳ ಹೆಣ್ಣುಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿಕೊಡ್ತಾರೆ ಅನ್ನೋ ಸುದ್ದಿ ಭಾರೀ ವೈರಲ್ ಆಗಿದೆ. ಆ ಹೆಸರಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯ ಹೆಸರು ಹೆಚ್ಚು ಕೇಳಿ ಬರ್ತಿದೆ.
ಇದನ್ನೂ ಓದಿ: Bhavana Ramanna: ಕನ್ನಡದ ಆ ಕಲಾವಿದರ ಜೊತೆಗೆ ಸ್ಕ್ರೀನ್ ಶೇರ್ ಮಾಡೋಕೆ ಆಗ್ತಾನೇ ಇಲ್ಲ! ಭಾವನಾ ರಾಮಣ್ಣ ಬೇಸರ
ದೊಡ್ಮನೆಯ ಯುವರಾಜಕುಮಾರ್ ಅಭಿನಯದ ಮೊಟ್ಟ ಮೊದಲ ಸಿನಿಮಾಕ್ಕೆ ಐಶ್ವರ್ಯ ಹೀರೋಯಿನ್ ಅನ್ನೋದೆ ಈಗೀನ ನ್ಯೂಸ್ ಆಗಿದೆ. ಇದರ ಹೊರತಾಗಿ ನಟಿ ಸುಧಾರಾಣಿ ಪುತ್ರಿ ನಿಧಿ ಕೂಡ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಿದ್ದಾರೆ.
ಇವರ ಈ ಪ್ರವೇಶಕ್ಕೆ ಯುವರಾಜ್ ಕುಮಾರ್ ಅಭಿನಯದ ಸಿನಿಮಾನೇ ವೇದಿಕೆ ಆಗಲಿದೆ ಅನ್ನೋ ಸುದ್ದಿನೂ ಇದೆ. ಇನ್ನುಳಿದಂತೆ ಸ್ಟಾರ್ ಮಕ್ಕಳ ಲೆಕ್ಕದಲ್ಲಿ ಗುರು ಶಿಷ್ಯರು ಚಿತ್ರದ ಮೂಲಕ ಕನ್ನಡದ ಹೆಸರಾಂತ ಕಲಾವಿದರ ಮಕ್ಕಳು ಚಿತ್ರರಂಗ ಪ್ರವೇಶ ಮಾಡಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ