ಭಾರತದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep ) ಅವರ ಕಾಮೆಂಟ್ಗೆ ಅಜಯ್ ದೇವಗನ್ (ajay devgan) ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ, ಹಾಗಾದರೆ ಹಿಂದಿ ಭಾಷೆಯಲ್ಲೇಕೆ ನಿಮ್ಮ ಚಿತ್ರಗಳನ್ನು ಡಬ್ (Dub) ಮಾಡುತ್ತೀರಿ ಎಂದು ಸಂಪೂರ್ಣ ಹಿಂದಿಯಲ್ಲಿಯೇ ಬರೆದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಆದರೆ, ಅಜಯ್ ದೇವಗನ್ ಅವರ ಟ್ವೀಟ್ ಗೆ (Tweet) ಸುದೀಪ್ ಕೂಡ ತಕ್ಕ ಉತ್ತರ ನೀಡಿದ್ದರು. ಇದೀಗ ಕಿಚ್ಚನಿಗೆ ಕೇವಲ ಸಿನಿಮಾ ರಂಗದವರಷ್ಟೇ ಅಲ್ಲದೇ ರಾಜಕಾರಣಿಗಳು ಕೂಡ ಸಾಥ್ ನೀಡಿದ್ದಾರೆ. ನಿನ್ನೆ ಅಜಯ್ ದೇವಗನ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದರು, ಇದೀಗ ದಳಪತಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಜಯ್ ದೇವಗನ್ ವಿರುದ್ಧ ಕುಮಾರಸ್ವಾಮಿ ಗರಂ!
ಹಿಂದಿ ಎಂದೂ ನಮ್ಮ ರಾಷ್ಟ್ರಭಾಷೆ ಆಗಿರಲಿಲ್ಲ, ಆಗುವುದೂ ಇಲ್ಲ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಅಜಯ್ ದೇವಗನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಬಾಲಿವುಡ್ ನಟನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಜಯ್ ದೇವಗನ್ಗೆ ಅವರದ್ದೇ ಮೊದಲ ಸಿನಿಮಾವನ್ನು ನೆನಪಿಸಿ ಸಹಭಾಳ್ವೆ, ವಿವಿಧತೆಯಲ್ಲಿ ಏಕತೆಯ ಪಾಠವನ್ನು ಕುಮಾರಸ್ವಾಮಿ ಮಾಡಿದ್ದಾರೆ.
ಸುದೀಪ್ ಹೇಳಿದ್ದು ಕರೆಕ್ಟ್ ಇದೆ ಎಂದ ಹೆಚ್.ಡಿ.ಕುಮಾರಸ್ವಾಮಿ!
''ಚಿತ್ರನಟ ಕಿಚ್ಚ ಸುದೀಪ್ ಅವರು ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ತಿರೇಖದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ'' ಎಂದಿದ್ದಾರೆ ಹೆಚ್ಡಿ ಕುಮಾರಸ್ವಾಮಿ. ''ದೇಶ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ'' ಎಂದು ದಳಪತಿ ಅಜಯ್ ದೇವಗನ್ಗೆ ಪಾಠ ಮಾಡಿದ್ದಾರೆ.
ಚಿತ್ರನಟ @KicchaSudeep ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ @ajaydevgn ಅಜಯ್ ದೇವಗನ್ ಅತಿರೇಖದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ.1/7
— H D Kumaraswamy (@hd_kumaraswamy) April 27, 2022
ನಿಮ್ಮ ಮಾತು ಎಷ್ಟು ಸರಿ ಎಂದು ಪ್ರಶ್ನಿಸಿದ 'ದಳಪತಿ'!
''ಹೆಚ್ಚು ಜನ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೇವಲ 9ಕ್ಕಿಂತ ಕಡಿಮೆ ರಾಜ್ಯಗಳಲ್ಲಿ ಹಿಂದಿ 2ನೇ ಭಾಷೆ, ಇಲ್ಲವೇ 3ನೇ ಭಾಷೆ ಅಥವಾ ಅದೂ ಆಗಿಲ್ಲ. ಹೀಗಿದ್ದ ಮೇಲೆ ಅಜಯ್ ದೇವಗನ್ ಮಾತುಗಳು ಎಷ್ಟು ಸರಿ. ಡಬ್ ಮಾಡಬೇಡಿ ಎಂದರೆ ಏನರ್ಥ?'' ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Ajay Devgan ವಿರುದ್ಧ ಸಿಡಿದೆದ್ದ ಕನ್ನಡಿಗರು; ಬಾಲಿವುಡ್ ನಟನಿಗೆ ಸಿದ್ದರಾಮಯ್ಯ ತಿರುಗೇಟು
"ದೇವಗನ್ ಅರ್ಥ ಮಾಡಿಕೊಳ್ಳಬೇಕು. ಕನ್ನಡ ಚಿತ್ರರಂಗ ಇವತ್ತು ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಕನ್ನಡಿಗರು ಕೂಡ ಪ್ರೋತ್ಸಾಹಿಸಿದ ಪರಿಣಾಮ ಹಿಂದಿ ಚಿತ್ರರಂಗ ಬೆಳೆದಿದೆ. ಅವರ 'ಫೂಲ್ ಔರ್ ಕಾಂಟೆ' ಸಿನಿಮಾ ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಆಗಿದ್ದನ್ನು ದೇವಗನ್ ಮರೆಯಬಾರದು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದ ಕಿಚ್ಚನ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಏನಿದು ಹೊಸ ವಿವಾದ?
ಸಿಡಿದೆದ್ದ ಕನ್ನಡಿಗರು
ಬಾಲಿವುಡ್ ನಟನ ಈ ಮಾತಿಗೆ ಅನೇಕ ಕನ್ನಡಿಗರು ಕೂಡ ಸಿಡಿದೆದ್ದಿದ್ದಾರೆ. ಹಿಂದಿ ರಾಜ್ಯಗಳ ಜನರು ಇಲ್ಲಿ ಕೆಲಸ ಅರಸಿ ಬರುತ್ತಾರೆ. ನಾವು ಎಂದಿಗೂ ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಅವರ ಮೇಲೆ ಹೇರುವುದಿಲ್ಲ. ಅವರ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿ ರಾಜ್ಯಗಳ ಈ ಜನರು ನಾವು ಅವರ ಭಾಷೆಯಲ್ಲಿ ಮಾತನಾಡಬೇಕೆಂದು ನಿರೀಕ್ಷಿಸುತ್ತಾರೆ. ಅವರು ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ