Seema.RSeema.R
|
news18-kannada Updated:September 17, 2020, 4:58 PM IST
ರಾಜ್ ಕುಮಾರ್ ಅವರಿಗೆ ಸಲ್ಲಿಸಿರುವ ಪೂಜೆ
ಪಿತೃಪಕ್ಷ ಎಂದರೆ ವರ್ಷದಲ್ಲಿ ಒಮ್ಮೆ ತಮ್ಮ ಕುಟುಂಬದ ಹಿರಿಯರಿಗೆ ತರ್ಪಣ ನೀಡುವ ಮೂಲಕ ಅವರನ್ನು ನೆನೆಯುವ ವಿಧಾನವಾಗಿದೆ. ಆದರೆ, ರಾಜ್ಕುಮಾರ್ ಅಭಿಮಾನಿಗಳ ವಿಷಯದಲ್ಲಿ ಈ ವಿಚಾರ ಕೊಂಚ ವಿಭಿನ್ನ ಹಾಗೂ ವಿಶಿಷ್ಟ. ಅಭಿಮಾನಿಗಳೇ ದೇವರು ಎನ್ನುತ್ತಿದ್ದ ವರನಟ ಡಾ.ರಾಜ್ಕುಮಾರ್ ಅವರು ಕೂಡ ನಮ್ಮ ಕುಟುಂಬದ ಹಿರಿಯರೇ. ಅವರಿಗೂ ಕೂಡ ನಮ್ಮ ಕಡೆಯಿಂದ ಪಿಂಡ ಪ್ರದಾನ ಕಾರ್ಯ ನಡೆಸಬೇಕು ಎಂದು ಉದ್ದೇಶಿಸಿ ಅವರ ಅಭಿಮಾನಿಗಳು ಮಹಾಲಯ ಅಮಾವಸ್ಯೆಯ ವಿಶೇಷ ಪೂಜೆ ಮಾಡಿದ್ದಾರೆ. ಇದೇ ಮೊದಲಬಾರಿಗೆ ಅವರ ಅಭಿಮಾನಿಗಳಿಂದ ಈ ಕಾರ್ಯ ನಡೆದಿದೆ. ಬೆಂಗಳೂರಿನ ಜಿಟಿ ಮಾಲ್ ಎದುರಿಗಿನ ಅಣ್ಣಾವ್ರ ಪ್ರತಿಮೆ ಬಳಿ ಅಭಿಮಾನಿಗಳು ಪಿತೃಪಕ್ಷ ಪೂಜೆ ಮಾಡಿದ್ದಾರೆ. ಈ ವೇಳೆ ಅವರಿಗಿಷ್ಟವಾದ ನಾಟಿಕೋಳಿ ಸಾರು ಸೇರಿದಂತೆ ಅನೇಕ ತಿನಿಸಿಟ್ಟು ಸಂತುಷ್ಟಗೊಳಿಸಲು ಯತ್ನಿಸಿದ್ದಾರೆ.
ರಾಜ್ಕುಮಾರ್ ಎಂದರೆ, ಕೇವಲ ನಟರಲ್ಲ. ಅವರು ಕನ್ನಡ ಸಂಸ್ಕೃತಿಯ ಪ್ರತೀಕ. ಅಭಿಮಾನಕ್ಕೆ ಮಾದರಿಯಾಗಿದ್ದವರು. ಅಂತಹ ನಟರನ್ನು ನೆನೆಯದೇ ಇರಲು ಸಾಧ್ಯವಿಲ್ಲ. ಅವರು ನಮಗೆ ಅಪ್ಪಾಜಿಯ ಸಮಾನ. ಅವರಿಗೆ ಕಾರ್ಯಮಾಡುವುದು ನಮ್ಮ ಹೊಣೆ ಎನ್ನುತ್ತಾರೆ ಅವರ ಅಭಿಮಾನಿಗಳು.
ಇದೇ ಮೊದಲ ಬಾರಿಗೆ ಅಣ್ಣಾವ್ರಿಗೆ ಮೊದಲಬಾರಿಗೆ ಪಿತೃಪಕ್ಷದ ಪೂಜೆ ಸಲ್ಲಿಸಲಾಗಿದೆ. ಮಂಗಳವಾರ (ಸೆ.15)ರಂದು ಈ ಪೂಜೆ ಸಲ್ಲಿಕೆಯಾಗಿದೆ. ರಾಜ್ ಕುಮಾರ್ ಕುಟುಂಬದ ಕುಡಿ ರಾಘವೇಂದ್ರ ರಾಜ್ಕುಮಾರ್ ಅವರ ಮಗ ಯುವ ರಾಜ್ಕುಮಾರ್ ಕೂಡ ಈ ಪೂಜೆಯಲ್ಲಿ ಭಾಗಿಯಾಗಿದ್ದು, ಅಭಿಮಾನಿಗಳ ಅಭಿಮಾನಕ್ಕೆ ಮೂಕರಾದರು. ಕೊರೋನಾ ಹಿನ್ನಲೆ ಸರಳವಾಗಿಯೇ ಈ ಕಾರ್ಯ ನಡೆಸಲಾಗಿದ್ದು, ಅಭಿಮಾನಿಗಳು ಹಾಗೂ ಸ್ಥಳೀಯರು ಭಾಗಿಯಾಗಿದ್ದಾರೆ.
ಪೂಜೆವೇಳೆ ರಾಜ್ಕುಮಾರ್ ಅವರಿಗೆ ಇಷ್ಟವಾದ ತಿಳಿಸು, ನಾಟಿಕೋಳಿ ಸಾರನ್ನು ಇಡಲಾಗಿದೆ. ಪೂಜೆಯಲ್ಲಿ ಭಾಗಿಯಾದ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಸಿನಿಮಾ ತಾರೆಯರ ಮೇಲಿನ ಅಭಿಮಾನಕ್ಕಾಗಿ ಅವರಿಗಾಗಿ ರಕ್ತದಾನ ಶಿಬಿರ, ದೇವಸ್ಥಾನಗಳನ್ನು ಕಟ್ಟಿರುವುದು ಸಾಮಾನ್ಯವಾಗಿದೆ. ಆದರೆ, ಇದೇ ಮೊದಲಬಾರಿ ಪಿತೃಪಕ್ಷ ಪೂಜೆ ಮಾಡಿರುವುದು ವಿಶೇಷ. ನಟನೆ ಮಾತ್ರವಲ್ಲದೇ ಕನ್ನಡ, ಸಂಸ್ಕೃತಿ, ವಿನಯ-ವಿಧೇಯತೆಗೆ ಹೆಸರಾದವರು ರಾಜ್ಕುಮಾರ್ ಇದೇ ಕಾರಣಕ್ಕೆ ಈ ಏಕೈಕ ನಟರಿಗೆ ಈ ರೀತಿಯ ಆಚರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಭಿಮಾನಿಗಳು
Published by:
Seema R
First published:
September 17, 2020, 4:54 PM IST