ಇಂದು ರೆಬೆಲ್ ಸ್ಟಾರ್ ಅಂಬರೀಷ್ ಅವರ 69ನೇ ಹುಟ್ಟುಹಬ್ಬ. ನಟನ ಹುಟ್ಟುಹಬ್ಬದಂದು ಕೊಂಚ ಫ್ಲ್ಯಾಶ್ಬ್ಯಾಕ್ಗೆ ಹೋಗಿ ಬರೋಣ. ಅಂಬರೀಷ್ ಹಾಗೂ ಅಶ್ವತ್ಥ್ ಅವರ ನಡೆದಿದ್ದ ಘಟನೆಯೊಂದರ ಬಗ್ಗೆ ಕೊಂಚ ಮಾಹಿತಿ ತಿಳಿದುಕೊಳ್ಳೋಣ. ಅಂಬಿಗೆ ಸುಮ್ಮನೆ ರೆಬೆಲ್ ಅನ್ನೋ ಪಟ್ಟ ಸಿಕ್ಕಿಲ್ಲ. ಯಾರ ಮಾತೂ ಕೇಳದ ಅವರ ವರ್ತನೆ ಹಾಗೂ ಏನೇ ಆದರೂ ತಿರುಗಿ ಬೀಳುತ್ತಿದ್ದ ಅವರ ವ್ಯಕ್ತಿತ್ವವೇ ಇದಕ್ಕೆಲ್ಲ ಕಾರಣ. ಇದರಿಂದಾಗಿಯೇ ಯಾರೇ ಆದರೂ ಅವರ ಬಳಿ ಮಾತನಾಡಲೂ ನೂರು ಬಾರಿ ಯೋಚಿಸುತ್ತಿದ್ದರು. ಅವರ ಈ ರೆಬೆಲ್ ಸ್ವಭಾವ ಕೇವಲ ಮಾತಿನಲ್ಲಿ ಮಾತ್ರವಲ್ಲ, ಅವರ ಕೃತಿಯಲ್ಲೂ ಇತ್ತು. ಅವರಿಗೆ ಕಾರಿನ ಕ್ರೇಜ್ ತುಂಬಾ ಇತ್ತಂತೆ. ಅದರಲ್ಲೂ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕಾರಿನ ಸ್ಟೇರಿಂಗ್ ಹಿಡಿದರೆ ಸಾಕು ಅದು ಮೈಸೂರಿನಲ್ಲೇ ನಿಲ್ಲುತ್ತಿತ್ತು. ಹೀಗೆ ಅಂಬಿ ಬಗ್ಗೆ ತಿಳಿದೋ -ತಿಳಿಯದೆಯೋ ಹಿರಿಯ ನಟ ಅಶ್ವತ್ಥ್ ಅವರು ಒಮ್ಮೆ ಅಂಬರೀಷ ಅವರ ಜತೆ ಕಾರಿನಲ್ಲಿ ಕುಳಿತು ಬಿಡುತ್ತಾರೆ. ಆಗ ಅವರಿಗಾದ ಅನುಭವವನ್ನು ಅವರೇ ಒಮ್ಮೆ ಹಂಚಿಕೊಂಡಿದ್ದರಂತೆ. ಅದರ ವಿವರ ಇಲ್ಲಿದೆ ಓದಿ...
ಹಿರಿಯ ನಟ ಕೆ.ಎಸ್.ಅಶ್ವತ್ಥ್ ಮೈಸೂರು ನಿವಾಸಿ. ಆರಂಭದಲ್ಲಿ ನಟ ಅಂಬರೀಷ ಕೂಡ ಮೈಸೂರಿನಲ್ಲೇ ನೆಲೆಸಿದ್ದರು. ಒಮ್ಮೆ ಶೂಟಿಂಗ್ ನಿಮಿತ್ತ ಇಬ್ಬರೂ ಮೈಸೂರಿನಿಂದ ಬೆಂಗಳೂರಿಗೆ ಬರಬೇಕಿರುತ್ತದೆ. ನೀವು ಬೆಂಗಳೂರಿಗೆ ಪ್ರತ್ಯೇಕವಾಗಿ ಹೋಗೋದೇಕೆ? ನನ್ನ ಜೊತೆ ಕಾರಿನಲ್ಲಿ ಬಂದು ಬಿಡಿ ಎಂದು ಅಂಬರೀಷ್ ಅವರು, ಅಶ್ವತ್ಥ್ ಅವರನ್ನು ಆಹ್ವಾನಿಸಿದ್ದರಂತೆ. ಅಂಬಿ ಕರೆಗೆ ಓಗೊಟ್ಟ ಅಶ್ವತ್ಥ್, ಅಂಬಿ ಕಾರನ್ನು ಏರಿದ್ದಾರೆ.
ಬಿಸಿ ರಕ್ತದ ಅಂಬರೀಷ್ ಅವರಿಗೆ ಆಗ ಕಾರುಗಳ ಬಗ್ಗೆ ವಿಪರೀತ ಕ್ರೇಜ್. ರೆಬೆಲ್ ಹೀರೋಗೆ ವೇಗವಾಗಿ ಡ್ರೈವ್ ಮಾಡೋದು ಅಂದರೆ ಬಲು ಇಷ್ಟ. ಮೈಸೂರು - ಬೆಂಗಳೂರು ಮಾರ್ಗವನ್ನು ಕಾರಿನಲ್ಲಿ ಅವರು ಒಂದೂವರೆ ಗಂಟೆಯಲ್ಲೇ ಕ್ರಮಿಸುತ್ತಾರೆ ಎನ್ನುವ ಕತೆಗಳೆಲ್ಲ ಆಗ ಚಾಲ್ತಿಯಲ್ಲಿದ್ದವು! ಇದು ಗೊತ್ತಿದ್ದೋ, ಗೊತ್ತಿಲ್ಲದೆಯೋ ಶಿಸ್ತಿನ ವ್ಯಕ್ತಿ ಅಶ್ವಥ್ ಅವರು ಕಾರು ಹತ್ತಿದ್ದಾರೆ. ಕಾರು ಹತ್ತಿದ ಹತ್ತೇ ನಿಮಿಷಕ್ಕೆ ಕಾರಿನ ವೇಗ ಅಶ್ವತ್ಥ್ ಅವರಲ್ಲಿ ನಡುಕ ಹುಟ್ಟಿಸಿತ್ತಂತೆ.
ಇದನ್ನೂ ಓದಿ: ಈ ಸಲ ಅಂಬಿ ಹುಟ್ಟುಹಬ್ಬದ ಆಚರಣೆ ಇಲ್ಲ: ಭಾವುಕರಾಗಿ ಪೋಸ್ಟ್ ಮಾಡಿದ ಅಭಿಷೇಕ್ ಅಂಬರೀಷ್
`ಬೇಡ ಕಣಯ್ಯಾ, ನಿಧಾನಕ್ಕೆ ಕಾರು ಓಡ್ಸೋ..' ಎಂದಿದ್ದಾರೆ ಅಶ್ವತ್ಥ್. `ಸುಮ್ನೆ ಕುತ್ಕೋಳ್ರೀ, ನನಗೆಲ್ಲ ಗೊತ್ತಿದೆ. ನಿಮ್ಮನ್ನ ನಾನು ಹುಷಾರಾಗಿ ಕರೆದುಕೊಂಡು ಹೋಗುತ್ತೀನಿ' ಎಂದು ತಮ್ಮ ರೆಬೆಲ್ ಶೈಲಿಯಲ್ಲೇ ಅಂಬರೀಷ್ ಗದರಿಕೊಂಡಿದ್ದಾರಂತೆ.
ಮಾತು ಕೇಳದ ಅಂಬರೀಷ್ ಮೇಲೆ ಅಶ್ವತ್ಥ್ ಅವರಿಗೆ ಕೋಪ, ಮತ್ತೊಂದೆಡೆ ಭಯ. ಆಗ ಅವರಿಗೆ ಒಂದು ಐಡಿಯಾ ಹೊಳೆಯುತ್ತದೆ. `ಸ್ವಲ್ಪ ಕಾರು ನಿಲ್ಸಯ್ಯಾ, ನನಗೆ ಮೂತ್ರವಿಸರ್ಜನೆಗೆ ಅರ್ಜೆಂಟ್ ಆಗಿದೆ' ಎನ್ನುತ್ತಾರೆ. ಅಂಬಿಗೆ ಕಾರು ನಿಲ್ಲಿಸುವುದು ಅನಿವಾರ್ಯವಾಗುತ್ತದೆ. ಕಾರಿನಿಂದ ಇಳಿದ ಅಶ್ವತ್ಥ್, `ನಿನಗೆ ದೊಡ್ಡದೊಂದು ನಮಸ್ಕಾರ ! ಇನ್ಮೇಲೆ ನಿನ್ನ ಕಾರು ಹತ್ತೋಲ್ಲ..' ಎಂದು ಹೊರಡುತ್ತಾರೆ. ಅವರ ಅದೃಷ್ಟಕ್ಕೆ ಅದೇ ವೇಳೆಗೆ ರಸ್ತೆಯಲ್ಲಿ ಮೈಸೂರು - ಬೆಂಗಳೂರು ಬಸ್ ಕಾಣಿಸುತ್ತದೆ. ಕೈ ಅಡ್ಡ ಹಾಕಿದವರೇ ಬಸ್ ಹತ್ತಿಕೊಂಡು ಬೆಂಗಳೂರಿಗೆ ಹೊರಡುತ್ತಾರಂತೆ.
ಇದನ್ನೂ ಓದಿ: Upendra: ಜಾತಿ ವಿಚಾರವಾಗಿ ಮಾತನಾಡಿದ ಉಪೇಂದ್ರ: ನಿಜವಾದ ಬುದ್ಧಿವಂತರಾಗಿ ಎಂದು ಪರೋಕ್ಷವಾಗಿ ಟೀಕಿಸಿದ ನಟ ಚೇತನ್
ಅಂಬರೀಷ್ ಅವರ ಜೀವನದಲ್ಲಿ ಇಂತಹ ಸ್ವಾರಸ್ಯಕರ ಘಟನೆಗಳು ಸಾಕಷ್ಟು ನಡೆದಿವೆ. ಪುಟ್ಟಣ್ಣ ಕಣಗಾಲ್, ರಾಜ್ಕುಮಾರ್ ಹೀಗೆ ಸಾಕಷ್ಟು ಮಂದಿಗೆ ಅಂಬಿ ಅವರ ಇಂತಹ ಗುಣವೇ ತುಂಬಾ ಇಷ್ಟವಾಗುತ್ತಿತ್ತಂತೆ. ಎಲ್ಲರೂ ಪುಟ್ಟಣ್ಣ ಕಣಗಾಲರನ್ನು ನೋಡಿ ಹೆದರಿದೆ, ಅಂಬಿ ತುಂಟಾಟದ ಮೂಲಕ ಅವರ ಮೊಗದಲ್ಲೇ ನಗು ಮೂಡಿಸುತ್ತಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ