news18-kannada Updated:September 15, 2020, 6:57 PM IST
ದರ್ಶನ್
ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸದ ವಿರುದ್ಧ ದಕ್ಷಿಣ ಭಾರತದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನ ಕಾಣುವ, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ 22 ಭಾಷೆಗಳಿಗೂ ಪ್ರಾಧಾನ್ಯತೆ ಕೊಡಬೇಕು. ಯಾವುದೇ ಒಂದು ಭಾಷೆಯನ್ನ ವಿಶೇಷವಾಗಿ ಕಾಣುವುದು ತಪ್ಪು ಅಂತ ದೊಡ್ಡ ದನಿಯಲ್ಲಿ ದಕ್ಷಿಣ ಭಾರತೀಯರು ಖಂಡಿಸುತ್ತಿದ್ದಾರೆ.
ಇದಕ್ಕೆ ಸಿನಿಮಾ ರಂಗ ಕೂಡ ಸಾಥ್ ನೀಡಿದ್ದು, ತಮಿಳಿನ ಯುವ ನಟರು ಹಿಂದಿ ಗೊತ್ತಿಲ್ಲ ಹೋಗೋ ಎಂಬ ಅಭಿಯಾನ ಸ್ಟಾರ್ಟ್ ಮಾಡಿದ್ದಾರೆ. ಇನ್ನು ಕನ್ನಡದ ನಟರಾದ ಧನಂಜಯ್, ಸತೀಶ್ ನೀನಾಸಂ, ನಿಖಿಲ್, ಚೇತನ್ ಸಹ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ ಅಂತ ಗಟ್ಟಿದನಿಯಲ್ಲಿ ಹೇಳುತ್ತಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ದನಿಗೂಡಿಸಿದ್ದಾರೆ.
ಆದರೆ ಇಲ್ಲಿಯವರೆಗೂ ಕನ್ನಡದ ಸ್ಟಾರ್ ನಟರು ಈ ಬಗ್ಗೆ ದನಿ ಏರಿಸಿರಲಿಲ್ಲ. ಈಗ ಈ ಹೋರಾಟಕ್ಕೆ ಡಿ-ಬಾಸ್ ಎಂಟ್ರಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಗುಡುಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಡಿಬಾಸ್, ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.
ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ. ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದಿದ್ದಾರೆ ದಾಸ ದರ್ಶನ್.
First published:
September 15, 2020, 6:57 PM IST