ಬಿಗ್ ಬಾಸ್ ಮನೆಯಲ್ಲಿ ಈಗ ಯಾರೂ ಸ್ನೇಹಿತರಲ್ಲ... ಯಾರೂ ವಿರೋಧಿಗಳಲ್ಲ. ಇಲ್ಲಿ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಆಟ ಆಡುತ್ತಿರುವ ಸ್ಪರ್ಧಿಗಳೇ. ಹೌದು, ಬಿಗ್ ಬಾಸ್ ಸೀಸನ್ 8ರ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮನೆಯಲ್ಲಿ ಉಳಿಸುಕೊಂಡು ಆಟದಲ್ಲಿರಲು ಪ್ರತಿಯೊಬ್ಬ ಸ್ಪರ್ಧಿಯೂ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಟಾಸ್ಕ್ ಎಂದರೆ ದೂರ ಓಡುತ್ತಿದ್ದವರು ಈಗ ಎಲ್ಲ ಟಾಸ್ಕ್ಗಳಲ್ಲೂ ನಾ ಮುಂದು ಅಂತ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗಲೇ ಕೊಟ್ಟಿದ್ದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ದಿವ್ಯಾ ಉರುಡುಗ ಗೆದ್ದು ಮತ್ತೊಮ್ಮೆ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಯಲ್ಲಿ ಈಗ ತಾಳ್ಮೆಯಿಂದ ಇರುತ್ತಿದ್ದವರು ತಾಳ್ಮೆ ಕಳೆದುಕೊಂಡು ವರ್ತಿಸುತ್ತಿದ್ದಾರೆ. ಮತ್ತೆ ಕೆಲವರು ಕೂಗಾಡುತ್ತಾ ಜಗಳ ಮಾಡುತ್ತಿದ್ದವರು ಸಂಪೂರ್ಣವಾಗಿ ಶಾಂತರಾಗಿದ್ದಾರೆ. ಈ ಎಲ್ಲ ಬದಲಾವಣೆಗಳು ಕೇವಲ ಆಟಕ್ಕಾಗಿ ಅಂತಿದ್ದಾರೆ ಕೆಲವು ಸ್ಪರ್ಧಿಗಳು. ಒಟ್ಟಾರೆ ಸಾಕಷ್ಟು ಬದಲಾವಣೆಗಳನ್ನು ಈ ಮನೆಯಲ್ಲಿ ನೋಡಬಹುದಾಗಿದೆ.
ವಾರಾಂತ್ಯ ಬಂತೆಂದರೆ ಸಾಕು, ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುವ ಖುಷಿ ಒಂದೆಡೆಯಾದರೆ, ಮತ್ತೊಂದು ಕಡೆ ಎಲಿಮಿನೇಷನ್ ಭಯ. ಇಷ್ಟು ದಿನಗಳು ಈ ಮನೆಯಲ್ಲಿ ಕಳೆದ ಒಬ್ಬರು ಸ್ಪರ್ಧಿ ಮನೆಯಿಂದ ಹೊರಗೆ ಹೋಗುತ್ತಾರೆ. ಆದರೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆಗೆ ಒಂದು ಟ್ವಿಸ್ ನೀಡಲಾಗಿದೆಯಂತೆ.
View this post on Instagram
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ತುಂಟಾಟ: ಫಜಿತಿಗೆ ಸಿಲುಕಿದ್ದ ದಿವ್ಯಾ ಉರುಡುಗ..!
ಈ ವಾರ ಮನೆಯಿಂದ ಹೊರ ಹೋಗಲು ಶಮಂತ್ ಗೌಡ, ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ನಾಮಿನೇಟ್ ಆಗಿದ್ದಾರೆ. ಹೀಗಿರುವಾಗಲೇ ಈ ವಾರ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.
ಕಳೆದ ವಾರ ಆಗಿರುವ ಬೆಳವಣಿಗೆಗಳಿಂದಾಗಿ ಈ ವಾರ ಮನೆಯಿಂದ ಹೊರ ಹೋಗುವವರಲ್ಲಿ ಚಕ್ರವರ್ತಿ ಚಂದ್ರಚೂಡ ಹಾಗೂ ಶುಭಾ ಪೂಂಜಾ ಅವರ ಹೆಸರು ಕೇಳಿ ಬರುತ್ತಿದೆ. ಕಾರಣ ಇರುವ ಸ್ಪರ್ಧಿಗಳಲ್ಲಿ ಶುಭಾ ಪೂಂಜಾ ತುಂಬಾ ವೀಕ್ ಎಂದು ಹೇಳಲಾಗುತ್ತಿದೆ. ಇನ್ನು ಚಕ್ರವರ್ತಿ ಅವರು ಪ್ರಿಯಾಂಕಾ ತಿಮ್ಮೇಶ್ ಅವರು ನಾಮಿನೇಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿ ಅದಭ್ಯವಾಗಿ ಸನ್ನೆ ಮಾಡಿದ್ದರು. ಈ ಕಾರಣದಿಂದಾಗಿ ನೆಟ್ಟಿಗರು ಹಾಗೂ ವೀಕ್ಷಕರಿಂದ ತುಂಬಾ ವಿರೋಧ ವ್ಯಕ್ತಗಾಗಿತ್ತು.
ಇನ್ನು ನಿನ್ನೆ ನಡೆದ ಸಂಚಿಕೆಯಲ್ಲಿ ಸುದೀಪ್ ಸಹ ಚಕ್ರವರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಬ್ಬ ಹೆಣ್ಣು ಮಗಳಿಗೆ ನೀವು ಮಾಡಿದ್ದು ಸರಿಯೇ. ಯಾರ ಮನೆಯ ಹೆಣ್ಣು ಮಕ್ಕಳಿಗಾದರೂ ಹೀಗೆ ಮಾಡಿದರೆ ಏನು ಮಾಡುತ್ತಾರೆ ಹೇಳಿ. ಇಂತಹ ವೇದಿಕೆಯಲ್ಲಿ ಹೇಗೆ ವರ್ತಿಸಬೇಕೆಂದು ತಿಳಿದುಕೊಂಡಿರಬೇಕು. ಈ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಹೆಣ್ಣಿಗೆ ಗೌರವ ಕೊಡುತ್ತೇನೆ ಎಂದಿದ್ದು ಇದೇನಾ..? ಎಂದು ಪ್ರಶ್ನಿಸುತ್ತಾರೆ ಸುದೀಪ್.
ಇದಾದ ನಂತರ ತಮ್ಮ ತಪ್ಪಿನ ಅರಿವಾಗಿ ಚಕ್ರವರ್ತಿ ಕಣ್ಣೀರಿಟ್ಟರು. ನಂತರ ಕ್ಷಮೆ ಸಹ ಕೇಳಿದ್ದರು. ಚಕ್ರವರ್ತಿ ಇದೇ ಸಂಚಿಕೆಯಲ್ಲಿ ತನ್ನನ್ನು ಹೆಣ್ಣು ನಿಂದಕ ಹಾಗೂ ಪೀಡಕನಂತೆ ತೋರಿಸಲಾಗುತ್ತಿದೆ. ಪ್ರತಿವಾರಾಂತ್ಯ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸುದೀಪ್ ಅವರಿಗೆ ಹೇಳುತ್ತಾರೆ. ಅದಕ್ಕೆ ಉತ್ತರಿಸಿದ ಸುದೀಪ್, ನೀವು ಮಾಡಿರುವ ಕೆಲಸಗಳೇ ನನ್ನ ಬಾಯಿಯಲ್ಲಿ ಬಂದಿದ್ದೇ ಹೊರತು, ನಾನು ಬೇಕೆಂದು ಹೇಳಿದ್ದಲ್ಲ. ಇನ್ನು ನೀವು ಕೊಟ್ಟ ಬೇಜಾರನ್ನು ಬೇಜಾರನ್ನಲ್ಲಿ ಹೇಳಿದ್ದೇನೆ, ಅದಕ್ಕೆ ತುಪ್ಪಾ ಹಚ್ಚಿ ಹೇಳಲಾ, ನಿಮ್ಮ ಬಗ್ಗೆ ಗೌರವ ಇದೆ ಅದನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.
ಇದನ್ನೂ ಓದಿ: Anushka Sharma: ಅತಿಯಾ ಶೆಟ್ಟಿ ತೆಗೆದ ಚಿತ್ರಗಳನ್ನು ಹಂಚಿಕೊಂಡ ಅನುಷ್ಕಾ ಶರ್ಮಾ..!
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಈ ವಾರ ಎಲಿಮಿನೇಟ್ ಆದರೆ, ಚಕ್ರವರ್ತಿ ಹಾಗೂ ಶುಭಾ ಪೂಂಜಾ ಅವರಲ್ಲಿ ಒಬ್ಬರು ಹೊರ ಹೋಗಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಈ ವಾರ ಯಾರೂ ಹೊರ ಹೋಗುವುದಿಲ್ಲ. ಅದೇ ಈ ವಾರದ ಟ್ವಿಸ್ಟ್ ಎಂದೂ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ