ಕೆಜಿಎಫ್ ಸಿನಿಮಾ (KGF Movie) ಬಗ್ಗೆ ಕಾಂತಾರ ನಟ ಕಿಶೋರ್ ಕೊಟ್ಟ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. ಸಂದರ್ಶನವೊಂದರಲ್ಲಿ ಮಾತಾಡಿದ್ದ ಕಿಶೋರ್ ನಾನು ಈವರೆಗೂ ಕೆಜಿಎಫ್ 2 ಸಿನಿಮಾವನ್ನು ನೋಡಿಲ್ಲ. ಮೈಂಡ್ಲೆಸ್ ಸಿನಿಮಾ (Mindless Movie) ನೋಡಲ್ಲ, ನಾನು ಇಷ್ಟಪಡುವ ರೀತಿಯ ಸಿನಿಮಾ ಅದಲ್ಲ ಎಂದು ಹೇಳಿದ್ರು. ಆದ್ರೆ ಇದೀಗ ತಮ್ಮ ಹೇಳಿಕೆ ಬಗ್ಗೆ ನಟ ಕಿಶೋರ್ (Actor Kishore) ಸ್ಪಷ್ಟನೆ ನೀಡಿದ್ದಾರೆ. ನಾನು ಮೈಂಡ್ಲೆಸ್ ಸಿನಿಮಾ ಎನ್ನುವ ಪದವನ್ನು ನಾನು ಬಳಸಿಲ್ಲ ಎಂದಿದ್ದಾರೆ.
ಕೆಲ ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಟ ಕಿಶೋರ್ ಬರೆದು ಕೊಂಡಿದ್ದಾರೆ. ಅವರ ಪೋಸ್ಟ್ ಕೂಡ ವೈರಲ್ ಆಗಿದೆ. ಕನ್ನಡದ ಕೆಜಿಎಫ್ ಚಿತ್ರದ ಕುರಿತು ಮಾತಾಡುವಾಗ ನಾನು ಮೈಂಡ್ ಲೆಸ್ ಎಂಬ ಪದವನ್ನೇ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿವಾದಕ್ಕೆ ಸ್ಪಷ್ಟನೆ ಕೊಟ್ಟ ನಟ ಕಿಶೋರ್
‘ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ. ಆದರೂ ಅದಕ್ಕಾಗಿ ಕ್ಷಮೆಯಿರಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆ ಆಗಿದ್ದರೆ ತೃಪ್ತಿಯಿರುತ್ತಿತ್ತು. ಅದೇನೇ ಇರಲಿ ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ’ ಎಂದು ಕಿಶೋರ್ ಬರಹ ಆರಂಭಿಸಿದ್ದಾರೆ.
View this post on Instagram
ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ. ‘ನೋಡಿಲ್ಲ’ದಿಂದ ‘ನೋಡುವುದಿಲ್ಲ’ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ. ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ. ಮಾಡಿದರೆ ತಪ್ಪೂ ಸಹ. ಆದರೆ ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು’ ಎಂದಿದ್ದಾರೆ ಕಿಶೋರ್.
‘ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ. ಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ KGF ಕಲ್ಪನೆ ಬೇರೆಯೇ ಆದರೂ ಸಹ’ ಎಂದು ಕಿಶೋರ್ ಬರೆದಿದ್ದು, ವಿವಾದಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: KGF-Kishore: ಕಿಶೋರ್ ಇನ್ನೂ ಕೆಜಿಎಫ್2 ಸಿನಿಮಾ ನೋಡಿಲ್ಲ! ಮೈಂಡ್ಲೆಸ್ ಮೂವಿ ನಾನು ನೋಡಲ್ಲ ಎಂದ ಕಾಂತಾರ ನಟ
ಸಾಲು ಸಾಲು ಸಿನಿಮಾಗಳಲ್ಲಿ ಕಿಶೋರ್ ಬ್ಯುಸಿ
ಮೂಲತಃ ಕನ್ನಡದವರಾಗಿರುವ ಕಿಶೋರ್ ಕನ್ನಡ ಮಾತ್ರವಲ್ಲದೆ, ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದಾರೆ. ತಮಿಳು, ತೆಲುಗಿನಲ್ಲಿಯೂ ಇವರಿಗೆ ಬೇಡಿಕೆ ಇದೆ. ಹಿಂದಿಯ ವೆಬ್ಸಿರೀಸ್ಗಳಲ್ಲಿಯೂ ನಟಿಸಿ ಮೋಡಿ ಮಾಡಿದ್ದಾರೆ. ಸಿನಿಮಾಗಳಷ್ಟೇ ಅಲ್ಲ ಸಾಮಾಜಿಕ ವಿಚಾರಗಳು ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಕೂಡ ನಟ ಕಿಶೋರ್ ಹೆಚ್ಚಾಗಿ ಚರ್ಚೆ ಮಾಡ್ತಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ತಾರೆ. ಇದೀಗ ಬಾಯ್ಕಾಟ್ ಬಾಲಿವುಡ್ ಅಭಿಯಾನ ನಿಲ್ಲಿಸುವಂತೆ ನಟ ಸುನೀಲ್ ಶೆಟ್ಟಿ ಮನವಿಗೂ ಕಿಶೋರ್ ಬೆಂಬಲ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ