ಬಾಲಿವುಡ್ನಲ್ಲಿ 90ರ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ನಟ ಅಂದರೆ ಅದು ಗೋವಿಂದ. ಇದುವರೆಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ 57 ವರ್ಷದ ಗೋವಿಂದ ಅವರಿಗೆ ಕಳೆದ ಕೆಲ ವರ್ಷಗಳಿಂದ ಅದೃಷ್ಟ ಕೈಕೊಟ್ಟಿದೆ. ವಿಭಿನ್ನ ನೃತ್ಯ ಶೈಲಿ, ಅದ್ಭುತ ಕಾಮಿಡಿ ಟೈಮಿಂಗ್ಗೆ ಹೆಸರಾಗಿರುವ ಗೋವಿಂದ ಅವರ ಹಲವು ಸಿನಿಮಾಗಳು ಬಾಕ್ಸಾಫಿಸ್ ಲೂಟಿ ಮಾಡಿವೆ. ಅದರಲ್ಲಂತೂ ಆಂಖೆ, ರಾಜಾ ಬಾಬು, ಕೂಲಿ ನಂಬರ್ 1, ಹೀರೋ ನಂಬರ್ 1, ಜೋಡಿ ನಂಬರ್ 1, ಅನಾರಿ ನಂಬರ್ 1, ದುಲ್ಹೇ ರಾಜಾ, ಬಡೇ ಮಿಯಾ ಛೋಟೇ ಮಿಯಾ... ಹೀಗೆ ಸಾಗುತ್ತದೆ ಗೋವಿಂದ ಅವರ ಹಿಟ್ ಸಿನಿಮಾಗಳ ಪಟ್ಟಿ. ಆದರೆ, ಕಳೆದ ಒಂದು ದಶಕದಿಂದ ಗೋವಿಂದ ಅವರು ದೊಡ್ಡ ಪರದೆಯ ಮೇಲೆ ಅಪರೂಪವಾಗಿದ್ದಾರೆ. ಅದಕ್ಕೆ ಕಾರಣವನ್ನು ಖುದ್ದು ಅವರೇ ಬಿಚ್ಚಿಟ್ಟಿದ್ದಾರೆ. ತಾನು ಯಾರ ವಿರುದ್ಧವೂ ಮಾತನಾಡಲು ಇಷ್ಟಪಡುವುದಿಲ್ಲ. ಆದರೂ ಯಾಕೋ ಏನೋ ಎಲ್ಲರೂ ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಕಳೆದ 14 - 15 ವರ್ಷಗಳಲ್ಲಿ ನಾನು ಸುಮಾರು 16 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದೇನೆ. ಚಿತ್ರರಂಗದವರೂ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನನ್ನ ಸಿನಿಮಾಗಳಿಗೆ ಥಿಯೇಟರ್ ಕೊಡದೆ ನನ್ನ ಸಿನಿ ಜೀವನವನ್ನು ಬೀಳಿಸುವ ಯತ್ನಗಳೂ ನಡೆದಿವೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಅಂತನ್ನಿಸುತ್ತೆ. ನಮ್ಮವರೂ ಪರವಾಗಿಬಿಡುತ್ತಾರೆ. ಅದೃಷ್ಟ ಕೈಕೊಟ್ಟರೆ ನಿಮ್ಮವರೂ ನಿಮ್ಮ ವಿರುದ್ಧ ತಿರುಗಿಬಿಡುತ್ತಾರೆ' ಎಂದು ತಮ್ಮ ಅಸಮಾಧಾನ ಬಿಚ್ಚಿಟ್ಟಿದ್ದಾರೆ ಹಿರಿಯ ನಟ ಗೋವಿಂದ.
2004ರಲ್ಲಿ ಸಂಸದನಾಗಿ ಆಯ್ಕೆಯಾದ ಗೋವಿಂದ ಆ ಬಳಿಕವೂ ನಟನೆಯತ್ತ ಹೆಚ್ಚು ಗಮನ ಹರಿಸಿದ್ದರು. ಹೀಗಾಗಿ ಸಂಸತ್ ಕಲಾಪಗಳಿಗೆ ಗೈರಾಗುತ್ತಿದ್ದರು. ಇದೇ ಕಾರಣದಿಂದಾಗಿ ರಾಜಕಾರಣದಿಂದ ದೂರಾದ ಅವರು, ಸಿನಿಮಾಗಳಿಗೆ ಹೆಚ್ಚು ಸಮಯ ಕೊಡಲು ತೀರ್ಮಾನಿಸಿದರು. ಆದರೆ ಅದೇ ಸಮಯದಲ್ಲಿ ಅವರಿಗೆ ಅವಕಾಶಗಳೂ ಕೈಕೊಟ್ಟವು. ಸಿಕ್ಕ ಅವಕಾಶಗಳಲ್ಲೂ ಪಾತ್ರಗಳು ಕ್ಲಿಕ್ ಆಗಲಿಲ್ಲ. 1986ರಿಂದ 2009ರವರೆಗೆ 24 ವರ್ಷಗಳಲ್ಲಿ ಬರೋಬ್ಬರಿ 150 ಸಿನಿಮಾಗಳಲ್ಲಿ ನಟಿಸಿದ್ದ ಗೋವಿಂದ ಅವರು 2010ರಿಂದ 2020ರ ನಡುವೆ ಅಂದರೆ 10 ವರ್ಷಗಳಲ್ಲಿ ನಟಿಸಿರುವ ಸಿನಿಮಾಗಳ ಸಂಖ್ಯೆ ಕೇವಲ 12.
ಇದನ್ನೂ ಓದಿ: ಆರ್ಆರ್ಆರ್ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್: ಇಲ್ಲಿದೆ ಫಸ್ಟ್ಲುಕ್ ಪೋಸ್ಟರ್
ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ನಟ ಗೋವಿಂದ, ಬಾಲಿವುಡ್ ಸೂಪರ್ ಸ್ಟಾರ್ ಬಿಗ್-ಬಿ ಅಮಿತಾಭ್ ಬಚ್ಚನ್ ಅವರಿಗೆ ಬೆಂಬಲಿಸಿದ್ದರಂತೆ. ಆದರೆ ಅಮಿತಾಭ್ ಅವರು ಬಚಾವಾದರು, ನನ್ನನ್ನು ಎಲ್ಲರೂ ಟಾರ್ಗೆಟ್ ಮಾಡಿಕೊಂಡರು ಎನ್ನುತ್ತಾರೆ ಗೋವಿಂದ. ಹಾಗೇ ತಮ್ಮ ಸಂಬಂಧಿ ಹಾಸ್ಯ ನಟ ಕೃಷ್ಣ ಅಭಿಷೇಕ್ ಕೂಡ ತಮ್ಮ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಗೋವಿಂದ. ಇನ್ನು ಹಳೆಯ ಗೆಳೆಯ ನಿರ್ದೇಶಕ ಡೇವಿಡ್ ಧವನ್ ಕೂಡ ತಮಗೆ ಸಣ್ಣಪುಟ್ಟ ಪಾತ್ರ ಮಾಡುವಂತೆ ಹೇಳಿದ್ದು ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ.
ಹೀಗೆ ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಆಳ್ವಿಕೆ ನಡೆಸಿದ್ದ ಸೂಪರ್ ಸ್ಟಾರ್ ಇಂದು ಕೆಲಸಕ್ಕೆ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಮದ್ಯಪಾನ, ಧೂಮಪಾನದಂತಹ ದುಷ್ಚಟಗಳಿಗೆ ದಾಸರಾಗಿದ್ದಾರಂತೆ. ಈಗೀಗ ಹೆಚ್ಚೆಚ್ಚು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದೇನೆ. ಮೊದಲು ಧರ್ಮನಿಷ್ಠನಾಗಿದ್ದೆ, ಆದರೆ ಈಗ ಅಷ್ಟೊಂದು ಎಮೋಷನಲ್ ಅಲ್ಲ. ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಗೋವಿಂದ.
ಇದನ್ನೂ ಓದಿ: Happy Birthday Alia Bhatt: ಈ ಸಲದ ಹುಟ್ಟುಹಬ್ಬದ ಸೆಲಬ್ರೇಷನ್ನಲ್ಲಿ ಆಲಿಯಾ ಭಟ್ಗೆ ಕಾಡಲಿದೆ ರಣಬೀರ್ ಕಪೂರ್ ಕೊರತೆ..!
ಇನ್ನು 2019ರಲ್ಲಿ ರಂಗೀಲಾ ರಾಜಾ ಗೋವಿಂದ ನಟಿಸಿದ್ದ ಕೊನೆಯ ಸಿನಿಮಾ. ಆ ಬಳಿಕ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಭಗವಾನ್ ಕೇ ಲಿಯೇ ಮುಝೇ ಛೋಡ್ ದೋ, ಚಷ್ಮಾ ಛಡ್ಡಾ, ಪಿಂಕಿ ಡಾರ್ಲಿಂಗ್ ಆ್ಯಂಡ್ ನ್ಯಾಷನಲ್ ಹೀರೋ ಎಂಬ ಕೆಲ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದ್ದರೂ, ಅವು ಸದ್ಯಕ್ಕೆ ಸ್ಥಗಿತಗೊಂಡಿವೆ. ಮತ್ತೊಂದೆಡೆ ತಮ್ಮ ಸಿನಿ ಜೀವನವನ್ನು ತಾವೇ ರೀಸ್ಟಾರ್ಟ್ ಮಾಡಲು ಮನಸ್ಸು ಮಾಡಿರುವ ಅವರು ಜೊತೆಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲು ಮುಂದಾಗಿದ್ದಾರೆ. ಒಂದು ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಆ ಮೂಲಕ ತಾವೂ ನಟಿಸಿ, ಹೊಸ ಪ್ರತಿಭೆಗಳಿಗೂ ವೇದಿಕೆ ನೀಡಲು ಮನಸ್ಸು ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ