ಬೆಂಗಳೂರು; ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ರಾಜವೀರ ಮದಕರಿ ನಾಯಕ ಚಿತ್ರದ ಕಥೆಗಾಗಿ ಬರೋಬ್ಬರಿ ಎರಡು ವರ್ಷಗಳ ಕಾಲ ಸಮಯ ಕೊಟ್ಟಿದ್ದಾರೆ. ಹಾಗೇ ಹಲವಾರು ಲೇಖಕರು, ಇತಿಹಾಸತಜ್ಞರ ಜತೆ ಹಲವು ದಿನಗಳ ಕಾಲ ಚರ್ಚಿಸಿದ್ದಾರೆ. ರಾಜ್ಯಾದ್ಯಂತ ತಿರುಗಿ ಸರ್ಕಾರಿ ದಾಖಲೆಗಳು, ಶಿಲಾನ್ಯಾಸಗಳನ್ನು ಪರಿಶೀಲಿಸಿ, ರೀಸರ್ಚ್ ಮಾಡಿದ್ದಾರೆ. ಅದೆಲ್ಲದರ ಫಲಿತಾಂಶ ಎಂಬಂತೆ ಒಂದಲ್ಲಾ, ಎರಡಲ್ಲಾ 14 ವರ್ಷನ್ಗಳಲ್ಲಿ ಸ್ಕ್ರಿಪ್ಟ್ ಸಿದ್ಧಮಾಡಿಕೊಂಡಿದ್ದಾರೆ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರೇ ಹೇಳುವಂತೆ, ರಾಜವೀರ ಮದಕರಿನಾಯಕ ಸಿನಿಮಾ ರಾಮಾಯಣ ಹಾಗೂ ಮಹಾಭಾರತ ಪುರಾಣದಂತಹ ಕಥೆಯಂತೆ. ಹೀಗಾಗಿ ಕೇವಲ ಎರಡೂವರೆ ಅಥವಾ ಮೂರು ತಾಸಿನಲ್ಲಿ ಸಂಪೂರ್ಣ ಕಥೆ ಹೇಳುವುದು ಅಸಾಧ್ಯ. ಅದೇ ಕಾರಣಕ್ಕಾಗಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ರಾಜೇಂದ್ರ ಸಿಂಗ್ ಬಾಬು ಇಬ್ಬರೂ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ರಿಲೀಸ್ ಮಾಡುವ ಕುರಿತೂ ಚಿಂತಿಸಿದ್ದಾರೆ. ಇನ್ನು ರಾಜವೀರ ಮದಕರಿ ನಾಯಕ ಚಿತ್ರ ಅದ್ಧೂರಿ ಬಜೆಟ್ನಲ್ಲಿ ವೈಭವೋಪೇತವಾಗಿ ಮೂಡಿಬರಲಿದೆ. ಈ ಸಿನಿಮಾಕ್ಕಾಗಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ 75ರಿಂದ 90 ಕೋಟಿ ರೂಪಾಯಿವರೆಗೆ ಬಜೆಟ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಇತಿಹಾಸವನ್ನು ತಿರುಚದೇ, ಕಮರ್ಷಿಯಲ್ ಎಲಿಮೆಂಟ್ ಬಳಸಿಕೊಂಡು ರಾಜವೀರ ಮದಕರಿ ನಾಯಕ ಸಿನಿಮಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು. ಹೈದರಾಲಿ ಮತ್ತು ರಾಜವೀರ ಮದಕರಿ ನಾಯಕನ ನಡುವಿನ ಕಾಳಗದ ಸನ್ನಿವೇಶಗಳು ಸಿನಿಮಾದ ಹೈಲೈಟ್ ಆಗಿರಲಿವೆ. ವಿಶೇಷ ಅಂದರೆ ರಾಜವೀರ ಮದಕರಿ ನಾಯಕ ಒಬ್ಬ ಅತ್ಯುತ್ತಮ ಆಡಳಿತಗಾರ. ತನ್ನ ಪಾಳೇಗಾರಿಕೆಯ ಅವಧಿಯಲ್ಲಿ ಎದುರಾಳಿಗಳ ಮೇಲೆ ಗೆರಿಲ್ಲಾ ತಂತ್ರದಿಂದ ಹಠಾತ್ ದಾಳಿ ಮಾಡಲೆಂದೇ ಒಂದು ಬೇಡರ ಪಡೆಯನ್ನು ಸಿದ್ಧಪಡಿಸಿರುತ್ತಾರೆ. ಜತೆಗೆ ಮಹಿಳೆಯರಿಗೂ ಯುದ್ಧ ತರಬೇತಿ ನೀಡಿ ಮಹಿಳಾ ಪಡೆಯನ್ನೂ ಅಣಿಗೊಳಿಸಿರುತ್ತಾರೆ. ಹೀಗೆ ಹಲವಾರು ವಿಷಯಗಳ ಬಗ್ಗೆ ಸೂಕ್ಷ್ಮತೆಯಿಂದ ವರ್ಕ್ ಮಾಡಿರುವ ರಾಜವೀರ ಮದಕರಿನಾಯಕ ಟೀಂ ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಿದೆ.
ಇದನ್ನು ಓದಿ: Mahesh Babu: ಅಭಿಮಾನಿಗಳ ಋಣ ತೀರಿಸಲಾಗದು ಎಂದ ಪ್ರಿನ್ಸ್ ಮಹೇಶ್ ಬಾಬು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ