news18-kannada Updated:April 7, 2021, 6:26 PM IST
ಖಾಸಗಿ ವಾಹನಗಳ ದರ್ಬಾರು.
ಯಾದಗಿರಿ (ಏಪ್ರಿಲ್ 07):ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಾರಿಗೆ ನೌಕರರಿಗೆ ಮುಷ್ಕರ ಕೈಬಿಡಲು ಮನವಿ ಮಾಡಿದ್ದರು. ಆದರೆ, ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮಾತ್ರ ನಿಂತಿಲ್ಲ. ಸರಕಾರಕ್ಕೆ ಸಡ್ಡು ಹೊಡೆದು ಸಾರಿಗೆ ನೌಕರರು ಮುಷ್ಕರ ನಡೆಸಿ ಸರಕಾರಕ್ಕೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಕೂಡ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಯಾದಗಿರಿ ಜಿಲ್ಲೆಯಲ್ಲಿ ಕೂಡ ಸಾರಿಗೆ ನೌಕರರ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್ ಮೊದಲಾದ ಕಡೆ ಊರಿಗೆ ತೆರಳಲು ಪ್ರಯಾಣಿಕರು ಪರದಾಡುವಂತಾಗಿದೆ.
ಬೆಳಿಗ್ಗೆಯಿಂದಲೇ ದೂರದ ಊರಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಪ್ರಯಾಣಿಕರು ಊರಿಗೆ ತೆರಳಲು ಪ್ರಯಾಸಪಡುವಂತಾಗಿದೆ. ಯಾದಗಿರಿ ಕೇಂದ್ರ ಬಸ್ ನಿಲ್ದಾಣ ಬಸ್ ಗಳಿಲ್ಲದೇ ಬಿಕೋ ಎನ್ನುತ್ತಿದೆ.ಪ್ರಯಾಣಿಕರು ಬಸ್ ಗಾಗಿ ಕಾದು ಕಾದು ತತ್ತರಿಸಿ ಹೋಗಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ವ್ಯಾಪಕ ಪೊಲೀಸ್ ಭದ್ರತೆ ಕಲ್ಪಿಸಿದ್ದಾರೆ.
ಆರ್ಟಿಓ ಅಧಿಕಾರಿಗಳಾದ ದಾಮೋದರ, ವೆಂಕಟಪ್ಪ ಅವರು ಖುದ್ದು ಬೆಳಿಗ್ಗೆ ನಗರದ ಬಸ್ ನಿಲ್ದಾಣ ಕಡೆ ಭೇಟಿ ನೀಡಿ ಖಾಸಗಿ ವಾಹನಗಳ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕು ಹೆಚ್ಚಿನ ಹಣವಸೂಲಿ ಮಾಡದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ಓದಗಿಸಬೇಕೆಂದು ಎಚ್ಚರಿಕೆ ನೀಡಿದರು. ನಂತರ ಕೇಂದ್ರ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣದಲ್ಲಿ ಕ್ರೂಷರ್ ಗಳ ಸೌಕರ್ಯ ಕಲ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿದರು.
ಮಗುವಿನೊಂದಿಗೆ ಬಾಣಂತಿ ಪರದಾಟ...!
ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ಬಾಣಂತಿ ಕಮಲಾ ಅನಾರೋಗ್ಯದಿಂದ ಬಳಲುತ್ತಿದ್ದು, ಮಗುವಿಗೆ ಚಿಕಿತ್ಸೆ ಕೊಡಿಸಲು ರಾಯಚೂರು ಜಿಲ್ಲೆಗೆ ಕರೆದುಕೊಂಡು ಹೋಗಲು ಬಸ್ ನಿಲ್ದಾಣಕ್ಕೆ ಆಗಮಿಸಿದಳು. ಆದರೆ, ಬಸ್ ಸೌಕರ್ಯವಿಲ್ಲದ ಹಿನ್ನೆಲೆ ಮಗುವಿಗೆ ಚಿಕಿತ್ಸೆ ಕೊಡಿಸಲು ತೆರಳಲು ಪರದಾಡುವಂತಾಗಿತ್ತು.
ಇದನ್ನೂ ಓದಿ: ಪ್ರಹ್ಲಾದ್ ಜೋಶಿ ನೆಹರು ಕುಡಿಗಳನ್ನು ನಕಲಿ ಗಾಂಧಿಗಳು ಎಂದಿದ್ದರಲ್ಲಿ ತಪ್ಪೇನಿದೆ?; ಟ್ವೀಟ್ನಲ್ಲಿ ಸ್ಪಷ್ಟನೆ ನೀಡಿದ ಬಿಜೆಪಿ!
ಅಂಧನ ಸಂಕಷ್ಟ...!ಶಿವಮೊಗ್ಗದಿಂದ ಯಾದಗಿರಿ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಮಲ್ಹಾರ ಗ್ರಾಮದ ಅಂಧ ಯುವಕ ಮಲ್ಹಾರ ಗ್ರಾಮಕ್ಕೆ ತೆರಳಲು ಪರದಾಡುವಂತಾಗಿದೆ. ಶಿವಮೊಗ್ಗದಿಂದ ಅಂಧ ಯುವಕ ಸಿದ್ದಾರೂಢ ಅವರು ಬೆಳಿಗ್ಗೆ ಸುರಪುರಗೆ ಆಗಮಿಸಿದನು.ಸುರಪುರದಿಂದ ಖಾಸಗಿ ವಾಹನದಲ್ಲಿ ಯಾದಗಿರಿಗೆ ಆಗಮಿಸಿದ್ದನು. ಸುರಪುರದಿಂದ ಬರುವಾಗ ಖಾಸಗಿ ವಾಹನ ಚಾಲಕ ಹೆಚ್ಚಿನ ಹಣ ವಸೂಲಿ ಮಾಡಿದ ಪರಿಣಾಮ ಅಂಧ ಯುವಕನ ಹತ್ತಿರ ಹಣ ಖಾಲಿಯಾಗಿದೆ. ನಂತರ ಊರಿಗೆ ತೆರಳಲು ಹಣವಿಲ್ಲದೇ ಕಂಗಲಾಗಿದ್ದನು.ನಂತರ ಸ್ನೇಹಿತರು ಊರಿಂದ ಆಗಮಿಸಿ ಬೈಕ್ ಮೂಲಕ ಗೆಳೆಯನನ್ನು ಕರೆದುಕೊಂಡು ಹೋದರು.
ಸಾರಿಗೆ ನೌಕರರು ಹುಡುಕುತ್ತಾ ಮನೆಗೆ ತೆರಳಿದ ಅಧಿಕಾರಿಗಳು...!
ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ ನೌಕರರನ್ನು ಭೇಟಿಯಾಗಲು ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಖುದ್ದು ಸಾರಿಗೆ ನೌಕರರ ಮನೆಗೆ ತೆರಳಿದರು.ಆದರೆ, ನೌಕರರು ಮಾತ್ರ ಅಧಿಕಾರಿಗಳಿಗೆ ಸಿಕ್ಕಿಲ್ಲ.ಫೋನ್ ಮಾಡಿದ್ದರು ಮೊಬೈಲ್ ಸ್ವಿಚ್ ಆಫ್ ಆಗಿತ್ತು ಅಧಿಕಾರಿಗಳು ಕೂಡ ನೌಕರರನ್ನು ಹುಡುಕಲು ಪರದಾಡುವಂತಾಗಿದೆ.
Published by:
MAshok Kumar
First published:
April 7, 2021, 6:26 PM IST