ಯಾದಗಿರಿ(ಸೆ.05): ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆ(Rainfall) ಜಿಲ್ಲೆಯ ಜನರು ಈಗ ಕಂಗಲಾಗಿದ್ದಾರೆ. ಯಾದಗಿರಿ(Yadagiri) ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ, ಗುರುಮಠಕಲ್ ಮೊದಲಾದ ಕಡೆ ಭಾರೀ ಮಳೆ ಸುರಿದಿದೆ. 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕೆರೆ ಹಿನ್ನೀರು ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ, ಮನೆಯಲ್ಲಿದ್ದ ಆಹಾರ ಧಾನ್ಯ, ಅಗತ್ಯ ವಸ್ತುಗಳು ಹಾನಿಯಾಗಿವೆ. ಬಾಣಂತಿಯೊಬ್ಬಳು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿ ವರ್ಷ ಮಳೆ ಬಂದಾಗ ಕೆರೆ ಹಿನ್ನೀರು ಮನೆಗಳಿಗೆ ನುಗ್ಗುವ ಪರಿಣಾಮ ಜನರು ಪದೇ ಪದೇ ತತ್ತರಿಸಿ ಹೋಗಿದ್ದಾರೆ.
ದೀಪದ ಬುಡಕ್ಕೆ ಕಗ್ಗತ್ತಲು...!
ನಾಯ್ಕಲ್ ಗ್ರಾಮದ ನಿವಾಸಿಗಳು ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಕೆರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದ ಹಿನ್ನೆಲೆ ಕೊಳವೆ ಬಾವಿಗಳು ನೀರಿನಲ್ಲಿ ಮುಳುಗಿದ ಪರಿಣಾಮ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರಊ ಯಾವುದೇ ಪ್ರಯೋಜನವಾಗಿಲ್ಲ. ಮನೆಗೆ ನೀರು ನುಗ್ಗಿದ್ದ ಹಿನ್ನೆಲೆ ನಿರಾಶ್ರಿತರು ಈಗ ಕಾಳಜಿ ಕೇಂದ್ರದಲ್ಲಿ ವಾಸ ಮಾಡುತ್ತಿದ್ದಾರೆ.
ದುರ್ಗಾ ನಗರದ ಜನರು ನರಕಯಾತನೆ ಜೀವನ...!
ಯಾದಗಿರಿಯ ದುರ್ಗಾ ನಗರದಲ್ಲಿ ಕೂಡ ಕೆರೆ ಹಿನ್ನಿರು ನುಗ್ಗಿದ್ದು, ನಿನ್ನೆ ರಾತ್ರಿಯಿಂದ ಸುರಿದ ವರುಣನ ಅಬ್ಬರಕ್ಕೆ ಕೆರೆಯ ಹಿನ್ನೀರು ಈಗ 25 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು ಮನೆಗಳು ಜಲಾವೃತವಾಗಿವೆ. ಮನೆಗೆ ನೀರು ನುಗ್ಗಿದ್ದ ಪರಿಣಾಮ ಈಗ ಸುತ್ತಲಿನ ನಿವಾಸಿಗಳಿಗೆ ಹಾವು ಚೇಳುಗಳ ಕಾಟ ಕಾಡುತ್ತಿದೆ. ಮನೆಯೊಳಗೆ ಹಾವು ಹಾಗೂ ಚೇಳುಗಳ ಉಪಟಳ ಹೆಚ್ಚಾದ ಹಿನ್ನೆಲೆ ಜನರು ಇಲ್ಲಿ ವಾಸ ಮಾಡಲು ಭಯಪಡುವಂತಾಗಿದೆ.
ಇದನ್ನೂ ಓದಿ:Karnataka Weather Today: ಇಂದು-ನಾಳೆ ಕರ್ನಾಟಕದಲ್ಲಿ ಮಳೆಯ ಆರ್ಭಟ; ಬೆಂಗಳೂರಿನ ವಾತಾವರಣ ಹೇಗಿರಲಿದೆ?
ಕೆರೆ ಹಿನ್ನೀರು ಮನೆಗಳಿಗೆ ನುಗ್ಗದಂತೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಬೇಕಾಗಿತ್ತು. ಆದರೆ, ನಗರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ದಿವ್ಯ ನಿಷ್ಕಾಳಜಿ ತೋರಿದ ಪರಿಣಾಮ ಜನರು ನರಕಯಾತನೆ ಜೀವನ ನಡೆಸುತ್ತಿದ್ದಾರೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸ್ಥಳೀಯ ನಿವಾಸಿ ಶಾಂತಮ್ಮ ಮಾತನಾಡಿ, ಸರ್ ಪ್ರತಿ ವರ್ಷ ಮಳೆ ಬಂದರೆ ಬಹಳ ಕಷ್ಟ ಆಗುತ್ತದೆ. ಕೆರೆ ನೀರು ಈಗ ಮನೆಯೊಳಗೆ ಬಂದಿದ್ದು ನಾವು ಹೇಗೆ ಜೀವನ ನಡೆಸಬೇಕು. ನಗರಸಭೆ ಅಧಿಕಾರಿಗಳು ಈ ಬಗ್ಗೆ ನೀರು ಬರದಂತೆ ಕ್ರಮವಹಿಸಬೇಕೆಂದರು.
ಯಡ್ಡಹಳ್ಳಿ ಸೇತುವೆ ಹಾನಿ...!
ಭಾರಿ ಮಳೆಗೆ ಯಾದಗಿರಿ ತಾಲೂಕಿನ ಯಡ್ಡಹಳ್ಳಿ ಗ್ರಾಮದ ಸಂಪರ್ಕ ಸೇತುವೆ ಹಾನಿಯಾಗಿದೆ.ಇದರಿಂದ ಊರಿಗೆ ಹಾಗೂ ಜಮೀನಿಗೆ ತೆರಳಲು ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನರು ಕಂಗಲಾಗಿದ್ದಾರೆ.
ಇಂದು ಮತ್ತು ನಾಳೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ , ಉತ್ತರ ಕನ್ನಡ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದೇಶದ ಬಹುತೇಕ ಭಾಗಗಳಲ್ಲಿ ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. "ಜೂನ್ನಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತಲೂ ಶೇ. 7ರಷ್ಟು ಕಡಿಮೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಶೇ. 24ರಷ್ಟು ಕಡಿಮೆಯಾಗಿದೆ. ಆದರೆ ಸೆಪ್ಟೆಂಬರ್ನಲ್ಲಿ ಉತ್ತಮ ಮಳೆಯ ಕಾರಣದಿಂದಾಗಿ ಕೊರತೆ ಪ್ರಮಾಣ ನೀಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕರ ತಿಳಿಸಿದ್ದಾರೆ. ಕಳೆದ ಜೂನ್-ಜುಲೈ ತಿಂಗಳಲ್ಲಿ ಅಬ್ಬರಿಸಿದ್ದ ಮಳೆರಾಯ, ಆಗಸ್ಟ್ ತಿಂಗಳಲ್ಲಿ ಕೊಂಚ ವಿರಾಮ ನೀಡಿದ್ದ. ಈಗ ಮತ್ತೆ ಸೆಪ್ಟೆಂಬರ್ ಪ್ರಾರಂಭದಿಂದಲೇ ಮಳೆರಾಯನ ಅಬ್ಬರ ಜೋರಾಗಿದ್ದು, ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ