news18-kannada Updated:January 27, 2021, 3:33 PM IST
ಹಂದಿಗಳನ್ನು ಹಿಡಿಯುತ್ತಿರುವ ನಗರಸಭೆ ಸಿಬ್ಬಂದಿ.
ಯಾದಗಿರಿ: ಜಿಲ್ಲೆಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಯಾದಗಿರಿ ನಗರದ ನಿವಾಸಿಗಳು ವರಾಹಗಳ ಕಾಟಕ್ಕೆ ಬೇಸತ್ತಿದ್ದಾರೆ. ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಪರಿಣಾಮ ಪೋಷಕರು ಹಾಗೂ ಯಾದಗಿರಿ ನಗರದ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಗಾಂಧಿ ನಗರ ತಾಂಡಾ, ಮದನಪುರ ಗಲ್ಲಿ, ಕನಕನಗರ, ಲಕ್ಷ್ಮೀನಗರ, ಮಾತಾ ಮಾಣಿಕೇಶ್ವರಿ ಕಾಲೋನಿ, ಲಾಡಸ್ ಗಲ್ಲಿ, ಬಸವೇಶ್ವರ ನಗರ, ಲಕ್ಷ್ಮೀನಗರ, ಕೋಳಿವಾಡ, ವಾಲ್ಮೀಕಿ ನಗರ ಸೇರಿದಂತೆ ಮೊದಲಾದ ಕಡೆ ಸಾವಿರಾರು ಹಂದಿಗಳನ್ನು ಬೇಕಾಬಿಟ್ಟಿಯಾಗಿ ಬಿಡಲಾಗಿದೆ.
ಹಂದಿಗಳ ಸಾಕಾಣಿಕೆದಾರರು ಹಂದಿಗಳನ್ನು ಬೇಕಾಬಿಟ್ಟಿಯಾಗಿ ಬೀದಿಯಲ್ಲಿ ಮೇಯಲು ಬಿಡುತ್ತಾರೆ. ಇದರಿಂದ ಅನೇಕ ಜನರು ತತ್ತರಿಸಿವಂತಾಗಿದೆ. ಬಹುತೇಕವಾಗಿ ಮಕ್ಕಳ ಮೇಲೆ ದಾಳಿ ಮಾಡಿ ಹಂದಿಗಳು ಕಚ್ಚಿ ಗಾಯಗೊಳಿಸಿವೆ. ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅದೇ ರೀತಿ ಸಾಕಷ್ಟು ಬಾರಿ ಹಂದಿಗಳು ಮೃತ ಪಟ್ಟರು ಹಂದಿಗಳ ಸಾಕಾಣಿಕೆದಾರರು ಮೃತ ಹಂದಿಗಳು ಸ್ಥಳಾಂತರ ಮಾಡಲು ಮುಂದಾಗುವುದಿಲ್ಲ. ಇದರಿಂದ ಸತ್ತ ಹಂದಿ ದುರ್ವಾಸನೆ ಬೀರಿ ಜನರು ಅನಾರೋಗ್ಯಕ್ಕೆ ತುತ್ತಾಗುವಂತಾಗಿತ್ತು. ಈ ಬಗ್ಗೆ ನಗರಸಭೆ ಅಧಿಕಾರಿಗಳು ಸಾಕಷ್ಟು ಬಾರಿ ಸಾಕಾಣಿಕೆದಾರರಿಗೆ ನೊಟೀಸ್ ನೀಡಿ ಶೀಘ್ರವಾಗಿ ಹಂದಿಗಳನ್ನು ಸ್ಥಳಾಂತರ ಮಾಡುವಂತೆ ನೊಟೀಸ್ ನೀಡಿದ್ದರು. ಆದರೆ, ನಗರಸಭೆ ಅಧಿಕಾರಿಗಳು ನೊಟೀಸ್ ನೀಡಿ ಬೇಸತ್ತಿ ಹೋಗಿದ್ದರು.‘
ನಗರದ ನಿವಾಸಿಗಳು ಹಂದಿಗಳಿಂದ ಸಮಸ್ಯೆಯಾಗುತ್ತಿದ್ದು, ಕೂಡಲೇ ಸ್ಥಳಾಂತರ ಮಾಡಬೇಕೆಂದು ನಗರಸಭೆ ಅಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಆಗ್ರಹಿಸಿದರು. ಬಹಳ ವರ್ಷಗಳ ನಂತರ ನಗರಸಭೆ ಪೌರಾಯುಕ್ತ ಬಕ್ಕಪ್ಪ ಅವರ ಖಡಕ್ ನಿರ್ಧಾರದಿಂದ ಬಹಳ ವರ್ಷಗಳ ಕಾಲ ನಗರದ ಜನರಿಗೆ ತಲೆನೋವಾಗಿದ್ದ ಹಂದಿಗಳನ್ನು ಇಂದು ರಕ್ಷಣೆ ಮಾಡಿ ಸ್ಥಳಾಂತರ ಮಾಡುತ್ತಿದ್ದಾರೆ. ನಗರಸಭೆ ಪೌರಾಯುಕ್ತ ಬಕ್ಕಪ್ಪ, ನಗರಸಭೆ ಪರಿಸರ ಅಭಿಯಂತರ ಸಂಗಮೇಶ ಪನಶೆಟ್ಟಿ ಅವರ ನೇತೃತ್ವದಲ್ಲಿ ಇಂದು ಹಂದಿಗಳನ್ನು ರಕ್ಷಣೆ ಮಾಡಿ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ.
ಇದನ್ನು ಓದಿ: ಭಾರತದ ಹೊಸ ಕೃಷಿ ಕಾನೂನುಗಳು ರೈತರ ಆದಾಯ ಹೆಚ್ಚಿಸಲಿವೆ, ಆದರೆ ಸಾಮಾಜಿಕ ಸುರಕ್ಷೆ ಅಗತ್ಯ; ಐಎಂಎಸ್ನ ಗೀತಾ ಗೋಪಿನಾಥ್
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ನಗರಸಭೆ ಪೌರಾಯುಕ್ತ ಬಕ್ಕಪ್ಪ ಮಾತನಾಡಿ, ಹಂದಿಗಳ ಹಾವಳಿಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ಸ್ಥಳೀಯ ಜನರು ಹಂದಿಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಇಂದು ಸ್ಥಳಾಂತರ ಮಾಡಲಾಗುತ್ತಿದೆ ಎಂದರು. ಗಾಂಧಿ ನಗರ, ಮದನಪುರ ಗಲ್ಲಿ ಸೇರಿದಂತೆ ಮೊದಲಾದ ಕಡೆ ತೆರಳಿ ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡಲಾಗುತ್ತಿದೆ. ನಗರದಲ್ಲಿ ಸುಮಾರು 5000ಕ್ಕೂ ಹೆಚ್ಚು ಹಂದಿಗಳಿವೆ ಎಂದು ಅಂದಾಜಿಸಲಾಗಿದೆ.
ಹಂದಿಗಳನ್ನು ರಕ್ಷಣೆ ಮಾಡಲು ನಗರಸಭೆ ಅಧಿಕಾರಿಗಳು ಹಾಗೂ ಜನರು ಹರಸಾಹಸ ಪಟ್ಟರು. ಕೆಲ ಗಂಟೆಗಳ ಕಾಲ ಹಂದಿಗಳು ರಕ್ಷಣೆ ಮಾಡಲು ಪರದಾಡುವಂತಾಗಿದೆ. ಇಂದು ಕೇವಲ 100 ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡುತ್ತಿದ್ದಾರೆ. ಕೇವಲ ಇಂದು ಮಾತ್ರ ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡಿ ಕೈತೊಳೆದುಕೊಳ್ಳದೆ ಜನರಿಗೆ ತಲೆನೋವಾಗಿರುವ ಎಲ್ಲಾ ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Published by:
HR Ramesh
First published:
January 27, 2021, 3:33 PM IST