ಯಾದಗಿರಿ(ಜು.02): ಬಳ್ಳಾರಿ ಬೆನ್ನಲ್ಲೀಗ ಯಾದಗಿರಿಯಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್-19 ವೈರಸ್ನಿಂದ ಮೃತರಾದ ರೋಗಿಯ ಶವವನ್ನು ಕಸದಂತೆ ಎಳೆದೊಯ್ದು ಗುಂಡಿಗೆ ಎಸೆದು ಅಮಾನವೀಯವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ. ಹೀಗೆ ಅಮಾನವೀಯವಾಗಿ ಕೊರೋನಾ ರೋಗಿಯ ಶವದ ಅಂತ್ಯಕ್ರಿಯೆ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಇದರಿಂದ ಎಚ್ಚೆತ್ತ ಯಾದಗಿರಿ ಜಿಲ್ಲಾಧಿಕಾರಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿದ್ಧಾರೆ.
ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಮೃತದೇಹ ನಿರ್ವಹಣೆಯ ತಂಡದ ಕಾರ್ಯದರ್ಶಿಗಳಾದ ಡಾ. ಹನುಮಂತ ರೆಡ್ಡಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸಿ ಕಾರಣ ಕೇಳಿದ್ದಾರೆ. ಕೊರೋನಾದಿಂದ ಸಾವನ್ನಪ್ಪಿದ್ದ ಯಾದಗಿರಿಯ ಹೊನಗೇರಾ ಗ್ರಾಮದ ನಿವಾಸಿ ಮೃತ ವ್ಯಕ್ತಿಯ ಶವವನ್ನು ನಿಯಮವಾಳಿ ಪ್ರಕಾರ ನಾಲ್ಕು ಜನ ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕಿತ್ತು. ಆದರೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಬ್ಬರು ಪ್ಲಾಸ್ಟಿಕ್ ಬಟ್ಟೆಯಲ್ಲಿ ಮುಚ್ಚಿದ ಮೃತದೇಹವನ್ನು ಎಳೆದೊಯ್ದು ಅಂತ್ಯಕ್ರಿಯೆ ಮಾಡಿದ್ದಾರೆ. ಸಿಬ್ಬಂದಿಯ ಈ ನಿರ್ಲಕ್ಷ್ಯಕ್ಕೆ ಕೂಡಲೇ ಕಾರಣ ಕೊಡಿ, ಇಲ್ಲದೇ ಹೋದಲ್ಲಿ ಎಲ್ಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹನುಮಂತ ರೆಡ್ಡಿಗೆ ನೀಡಿದ ನೋಟಿಸ್ನಲ್ಲಿ ಡಿಸಿ ಸೂಚನೆ ನೀಡಿದ್ದಾರೆ.
ಮೃತ ವ್ಯಕ್ತಿಯು ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿ ಊರಾದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಿರವಾರ ಗ್ರಾಮದಲ್ಲಿ ಪತ್ನಿ, ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಜೂನ್ 28ರಂದು ಹಿರಿಯ ಪುತ್ರಿ ವಿವಾಹ ಸಿರವಾರ ಗ್ರಾಮದಲ್ಲಿ ಮಾಡಲಾಗಿತ್ತು. ಮಗಳ ಮದುವೆ ಮರು ದಿನ ಉಸಿರಾಟ ಸಮಸ್ಯೆ ಕಾಣಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರುನ ರಿಮ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಕರೆದುಕೊಂಡು ಹೋಗಲಾಗಿತ್ತು. ಆದರೆ, ರಾಯಚೂರು ಸಮೀಪ ಮೃತಪಟ್ಟಿದ್ದರು. ನಂತರ ಮೃತದೇಹದ ಸ್ಯಾಂಪಲ್ ಸಂಗ್ರಹ ಮಾಡಿ ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕು ಇರುವುದು ದೃಢವಾಗಿತ್ತು. ಆದರೆ, ರಾಯಚೂರು ಜಿಲ್ಲಾಡಳಿತ ಇನ್ನೂ ಅಧಿಕೃತವಾಗಿ ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿಲ್ಲ. ಮೃತ ವ್ಯಕ್ತಿಯ ಊರಾದ ಹೊನಗೇರಾದಲ್ಲಿ ಅಂತ್ಯಕ್ರಿಯೆ ಮಾಡಲು ಶವವನ್ನು ರಾಯಚೂರಿನಿಂದ 30ರಂದು ನಸುಕಿನ ಜಾವ ಯಾದಗಿರಿಗೆ ತರಲಾಗಿತ್ತು. ಅಂತ್ಯಕ್ರಿಯೆ ಎಲ್ಲಿ ಮಾಡುವುದು ಎಂಬುದರ ಬಗ್ಗೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇರಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ