ವಿಜಯಪುರ (ಫೆ. 02): ವನ್ಯಜೀವಿಗಳ ಕುರಿತು ಪ್ರತಿಯೊಬ್ಬರು ಆಸಕ್ತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪ್ರಕೃತಿಯ ಮಡಿಲಲ್ಲಿರುವ ವಿಸ್ಮಯಗಳನ್ನು ಅರಿಯಲು ಸಾಧ್ಯ ಎಂದು ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಹೇಳಿದರು. ಬಿ.ಎಲ್.ಡಿ.ಇ ಸಂಸ್ಥೆ ಆಶ್ರಯದಲ್ಲಿ ಕೋಟಿವೃಕ್ಷ ಅಭಿಯಾನ ಹಾಗೂ ಎಸ್.ಪಿ.ಪಿ.ಎ ಜಂಟಿಯಾಗಿ ದಿ. ಡಾ. ಸಿ. ಆರ್. ಬಿದರಿಯವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ವನ್ಯಜೀವಿಗಳ ಛಾಯಾಚಿತ್ರಗಳ ಕುರಿತು ವೆಬಿನಾರ್ನಲ್ಲಿ ಅವರು ಮಾತನಾಡಿದರು.
ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿಯುವ ಅಪರೂಪದ ಕಲೆಯನ್ನು ಯುವ ಛಾಯಾಗ್ರಾಹಕರು ಅಳಡಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪರಿಸರವನ್ನು ಪೋಷಿಸಬೇಕು. ಗಿಡ ಮರಗಳು ಹೆಚ್ಚಾದಂತೆ ಪಶು ಪಕ್ಷಿಗಳ ಸಂತತಿ ವೃದ್ಧಿಸುತ್ತದೆ. ಇದರಿಂದ ಜೀವ ವೈವಿಧ್ಯದಲ್ಲಿ ಸಮತೋಲನ ಸೃಷ್ಟಿ ಆಗಲಿದೆ ಎಂದು ತಿಳಿಸಿದರು.
ಎಸ್ ಪಿ ಪಿ ಎ ಸ್ಥಾಪಕ ಮತ್ತು ಛಾಯಾಗ್ರಾಹಕ ಧ್ರುವ ಎಂ. ಪಾಟೀಲ ಮಾತನಾಡಿ, ಕಬಿನಿ ಅರಣ್ಯ ಪ್ರದೇಶದಲ್ಲಿ ಅಪರೂಪದ ಬ್ಲಾಕ್ ಪ್ಯಾಂಥರ್ (ಕಪ್ಪುಚಿರತೆ) ತಾವು ಸೆರೆ ಹಿಡಿದಿರುವ ಕುರಿತು ಸವಿವರ ಮಾಹಿತಿ ನೀಡಿದರು. ಅಲ್ಲದೇ, ಚಿತ್ರಗಳನ್ನು ಎಡಿಟ್ ಮಾಡುವ ಮತ್ತು ಕ್ಯಾಮೆರಾ ಬಳಕೆಯ ಕುರಿತು ತಮ್ಮ ಅನುಭವವನ್ನು ವೆಬಿನಾರ್ನಲ್ಲಿ ಹಂಚಿಕೊಂಡರು.
ಪ್ರತಿ ವರ್ಷ ಡಾ. ಸಿ. ಆರ್. ಬಿದರಿಯವರ ಪುಣ್ಯಸ್ಮರಣೆ ದಿನದಂದು ಕ್ರೀಡೆಯನ್ನು ಏರ್ಪಡಿಸಲಾಗುತ್ತಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಅದು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಪತ್ನಿ ಆಶಾ ಎಂ. ಪಾಟೀಲ್ಲ ಮಾತನಾಡಿ, ಡಾ. ಸಿ. ಆರ್. ಬಿದರಿಯರು ಖ್ಯಾತ ಓಟಗಾರ ಮಿಲ್ಕಾ ಸಿಂಗ್ ಅವರೊಂದಿಗೆ ಓಲಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದರು.
ಇದನ್ನು ಓದಿ: ಕಲಬುರ್ಗಿಯಲ್ಲಿ ಎಸಿಬಿ ದಾಳಿ; ಎಇ ಅವಟೆ ಮನೆಯಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ ಪತ್ತೆ!
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಛಾಯಾಚಿತ್ರಗ್ರಾಹಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಛಾಯಾಗ್ರಾಹಕರು ತಾವುಗಳು ಸೆರೆ ಹಿಡಿದ ಚಿತ್ರಗಳನ್ನು ಎಡಿಟ್ ಮಾಡಿ ಅಥವಾ ಎಡಿಟ್ ಮಾಡದೆ ಕೂಡ http://bit.ly/sppaphoto ವೆಬ್ ಲಿಂಕ್ನಲ್ಲಿ ಫೆ. 6ತೊಳಗಾಗಿ ಅಪಲೊಡ್ ಮಾಡಬೇಕು. ಫೆ.9 ರಂದು ವಿಜೇತರ ಹೆಸರುಗಳನ್ನು ತಿಳಿಸಲಾಗುವುದು. ಪ್ರಥಮ 10 ಸ್ಥಾನ ಪಡೆದವರಿಗೆ ಡಾ. ಎಂ. ಬಿ. ಪಾಟೀಲ ಅವರ ಹಸ್ತಾಕ್ಷರವುಳ್ಳ ಟಿ-ಶರ್ಟ್ ಹಾಗೂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. 10,000ರ ನಗದು, ದ್ವಿತೀಯ ಸ್ಥಾನ ಪಡೆದವರಿಗೆ ರೂ. 5000 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 3000 ನಗದು ಬಹುಮಾನ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ