ವಿಜಯಪುರ; ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಶೈಲಿಯಲ್ಲಿ ಮತ್ತೆ ಚಾಟಿ ಬೀಸಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲದಿಂದ ಆಯ್ಕೆಯಾದ ಸದಸ್ಯರಿಗೆ ಕೃತಜ್ಞತಾ ಸಮಾವೇಶ ಜನಸೇವಕ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಈ ವೇಳೆ ಬೆಂಗಳೂರಿಗೆ ಹೋಗಲ್ವಾ? ಸಚಿವ ಸಂಪುಟದಲ್ಲಿ ಸೇರ್ಪಡೆಗೆ ಕರೆ ಬಂದಿದೆಯಾ ಎಂಬ ಪ್ರಶ್ನೆಗೆ ಯತ್ನಾಳ ತಮ್ಮದೇ ಧಾಟಿಯಲ್ಲಿ ಮತ್ತೆ ಚಾಟಿ ಬೀಸಿದರು. ಬೆಂಗಳೂರಿನಲ್ಲಿ ನಮ್ಮದೇನೈತ್ರಿ ಕೆಲಸ. ನಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿದೆ. ಎಲ್ಲಾ ಕರೆನ್ಸಿಯೇ ಕಟ್ ಆಗಿದೆ. ಏನ್ ಮಾಡೋದು? ಎಂದು ಯತ್ನಾಳ ಚಾಟಿ ಬೀಸಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸ್ಥಾನ ನೀಡುವ ಮೂಲಕ ಬಿಜೆಪಿ ಶಾಸಕರಲ್ಲಿ ಉಂಟಾಗಿರುವ ಅಸಮಾಧಾನ ಹೋಗಲಾಡಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿತ್ತು. ಆದರೆ, ಯತ್ನಾಳ ಅವರಿಗೆ ಈವರೆಗೂ ಕರೆ ಬಂದಿಲ್ಲ ಎಂದು ಯತ್ನಾಳ ಅವರೇ ಹೇಳುವ ಮೂಲಕ ಮತ್ತು ತಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿದೆ ಎನ್ನುವ ಮೂಲಕ ಗೂಡಾರ್ಥದ ಹೇಳಿಕೆ ನೀಡಿದ್ದಾರೆ.
ನಾಳೆಯವರೆಗೆ ಕಾಯಿರಿ ಎಂದ ಡಿಸಿಎಂ ಗೋವಿಂದ ಕಾರಜೋಳ
ಈ ಮಧ್ಯೆ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗುತ್ತಾ ಎಂಬ ಪ್ರಶ್ನೆಗೆ ಸಿಗಬಹುದು ಎಂದು ಹೇಳಿದರು. ನಂತರ ನಾಳೆಯವರೆಗೆ ಕಾಯಿರಿ ಎಂದು ಹೇಳುವ ಮೂಲಕ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ನಿರ್ಗಮಿಸಿದರು.
ಇದನ್ನು ಓದಿ: ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ಸೇರ್ಪಡೆಯಾಗುವ ನೂತನ ಮಂತ್ರಿಗಳು ಇವರೇ?
ಯತ್ನಾಳ ಬೆಂಬಲಿಗರಿಗೆ ನಿರಾಸೆ
ನಾಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಜನಸೇವಕ ಕಾರ್ಯಕ್ರಮವನ್ನು ತುರ್ತಾಗಿ ಮುಗಿಸಿದ ಡಿಸಿಎಂ ಗೋವಿಂದ ಕಾರಜೋಳ, ಸಚಿವ ವಿ. ಸೋಮಣ್ಣ ಮತ್ತು ಇತರ ಬಿಜೆಪಿ ಮುಖಂಡರು ಸಭೆಯಲ್ಲಿ ಕೇವಲ ನಾಲ್ಕು ಜನರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು 20 ನಿಮಿಷ ತಡವಾಗಿ ಆಗಮಿಸಿದ ಯತ್ನಾಳ ಕಾರ್ಯಕ್ರಮ ಆವರಣ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾ. ಪಂ. ಸದಸ್ಯರು ಕೇಕೆ ಹಾಕಿ, ಕರತಾಡನದ ಮೂಲಕ ಸ್ವಾಗತ ಕೋರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ