ಹಾವೇರಿ: ಹಾವೇರಿ ನಗರದ ಅಶ್ವಿನಿನಗರದಲ್ಲಿರುವ ವಕೀಲ ಜಗದೀಶ ಮಲ್ಲಿಕೇರಿ ಎಂಬುವರಿಗೆ 11 ವರ್ಷದ ಬಾಲಕ ತೇಜಸ್ ಗೌಡ ಎಂಬ ಮಗನಿದ್ದ. ಮಾರ್ಚ್ 7ರಂದು ಮಧ್ಯಾಹ್ನ ಮೂರು ಗಂಟೆ ಇಪ್ಪತ್ತು ನಿಮಿಷಕ್ಕೆ ವಕೀಲ ಜಗದೀಶ ಅವರ ಪುತ್ರ ತೇಜಸ್ ಗೌಡ ಮಲ್ಲಿಕೇರಿ ಮನೆಯಿಂದ ಹೊರಗೆ ಹೋಗಿದ್ದ. ಮನೆಯಿಂದ ಹೊರಗೆ ಹೋಗಿದ್ದ ಬಾಲಕನನ್ನು ಮನೆಯ ಸಮೀಪದಲ್ಲಿರುವ ರಿತೇಶ ಮೇಟಿ ಮತ್ತು ಓರ್ವ ಬಾಲಕ ಸೇರಿ ಅಪಹರಣ ಮಾಡಿದ್ರಂತೆ. ಅಪಹರಣದ ನಂತರ ಕಾರಿನಲ್ಲೇ ತೇಜಸ್ ಗೌಡನ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ರಂತೆ. ಹತ್ಯೆ ನಂತರ ಮೃತದೇಹವನ್ನ ಗೋಣಿ ಚೀಲದಲ್ಲಿ ತುಂಬಿ ಹಾವೇರಿ ನಗರದ ಹೊರವಲಯದಲ್ಲಿರೋ ಹೆಗ್ಗೇರಿ ಕೆರೆಗೆ ಹಾಕಿ ಬಂದಿದ್ರು. ಮಾರ್ಚ್ 10 ರಂದು ಮೃತದೇಹವನ್ನ ಕೆರೆಯಿಂದ ತಂದು ಮನೆಯ ಹಿತ್ತಿಲಿನ ಗುಂಡಿಯಲ್ಲಿ ಹಾಕಿದ್ರಂತೆ. ನಂತರ ಅಲ್ಲಿಂದ ಮೃತದೇಹವನ್ನ ಹೊರತೆಗೆದು ಮನೆಯ ಸಮೀಪದ ಖಾಲಿ ಜಾಗದಲ್ಲಿ ಹಾಕಿ ಬೆಂಕಿ ಹಚ್ಚಿ ಸುಟ್ಟು ಪರಾರಿ ಆಗಿದ್ರು. ಈಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಬಾಲ ಅಪರಾಧಿಯನ್ನು ರಿಮ್ಯಾಂಡ್ ಹೋಂಗೆ ಮತ್ತು ಇಪ್ಪತ್ತೊಂದು ವರ್ಷದ ಆರೋಪಿ ರಿತೇಶನನ್ನು ಜೈಲಿಗೆ ಅಟ್ಟಿದ್ದಾರೆ. ಆದ್ರೆ ತೇಜಸ್ ಗೌಡನ ಹತ್ಯೆಯಲ್ಲಿ ಇಬ್ಬರದ್ದೆ ಪಾತ್ರವಿಲ್ಲ. ಇಬ್ಬರಿಂದ ಇಷ್ಟೆಲ್ಲ ಮಾಡೋಕೆ ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿ ಅಂತಿದ್ದಾರೆ ಹತ್ಯೆಯಾದ ಬಾಲಕನ ತಾಯಿ ರೇಣುಕಾ ಮಲ್ಲಿಕೇರಿ.
ಬಾಲಕ ತೇಜಸ್ ಗೌಡನನ್ನ ಹತ್ಯೆ ಮಾಡಿದ ಇಬ್ಬರನ್ನ ಮೂರು ದಿನಗಳ ಹಿಂದೆ ಬಂಧಿಸಿದ್ದ ಪೊಲೀಸರು ಹಣದಾಸೆಗೆ ಬಾಲಕನನ್ನ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಅಂತಾ ಹೇಳಿದ್ರು. ಸುಲಭವಾಗಿ ದುಡ್ಡು ಮಾಡೋ ಸಲುವಾಗಿ ಆರೋಪಿಗಳು ತೇಜಸ್ ಗೌಡನನ್ನ ಅಪಹರಿಸಿ ಹಣಕ್ಕೆ ಡಿಮ್ಯಾಂಡ್ ಮಾಡೋ ಪ್ಲಾನ್ ಮಾಡಿದ್ರು. ಆದ್ರೆ ಅಪಹರಣಕ್ಕೆ ಒಳಗಾಗ್ತಿದ್ದಂತೆ ಬಾಲಕ ಚೀರಾಟ, ಕೂಗಾಟ ಮಾಡಿದ್ದರಿಂದ ಆತನನ್ನ ಹತ್ಯೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆದ್ರೆ ತೇಜಸ್ ಗೌಡನ ಹತ್ಯೆ ಮಾಡಿ ಮೃತದೇಹ ಮನೆಯಲ್ಲಿ ತಂದಿಟ್ರೂ ಮನೆಯವರಿಗೆ ವಿಷಯ ಗೊತ್ತಾಗಿರ್ಲಿಲ್ವ. ಇಬ್ಬರಿಂದಲೇ ಇಷ್ಟೆಲ್ಲ ಸಾಧ್ಯನಾ.? ಹೀಗೆ ಹಲವಾರು ಪ್ರಶ್ನೆಗಳು ಹತ್ಯೆಯಾಗಿರೋ ಬಾಲಕನ ಕುಟುಂಬವನ್ನ ಕಾಡ್ತಿದೆ.
ಇದನ್ನು ಓದಿ: ಮತ್ತೊಮ್ಮೆ ಲಾಕ್ಡೌನ್ ಆಗಬಾರದು ಎಂದರೆ ಜನರೇ ಹೆಚ್ಚಿನ ಸುರಕ್ಷತೆ ವಹಿಸಬೇಕು: ಸಿಎಂ ಬಿಎಸ್ವೈ ಎಚ್ಚರಿಕೆ
ಹತ್ಯೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇಬ್ಬರಿಂದಲೆ ಇಷ್ಟೆಲ್ಲ ಮಾಡಲು ಸಾಧ್ಯವಿಲ್ಲ. ಅದ್ಯಾಕೋ ಪೊಲೀಸರು ಕೊಲೆ ನಡೆದಿದೆ ಅಂತಾ ಇಬ್ಬರನ್ನ ಬಂಧಿಸಿ ಸುಮ್ಮನಾಗಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಹೆಚ್ಚಿನ ತನಿಖೆ ನಡೆಸಬೇಕು. ತೇಜಸ್ ಗೌಡನ ಹತ್ಯೆಯ ಹಿಂದಿರೋ ಕಾಣದ ಕೈಗಳನ್ನ ಬಂಧಿಸಿ ಜೈಲಿಗೆ ಅಟ್ಟಬೇಕು. ಇನ್ನೂ ಸ್ವಲ್ಪ ದಿನಗಳು ಪೊಲೀಸರು ಹೆಚ್ಚಿನ ತನಿಖೆ ನಡೆಸೋ ಬಗ್ಗೆ ಕಾದು ನೋಡ್ತೀವಿ. ಹೆಚ್ಚಿನ ತನಿಖೆ ಆಗದಿದ್ರೆ ಪೊಲೀಸರ ವಿರುದ್ಧ ದೂರು ಸಲ್ಲಿಸೋ ಬಗ್ಗೆ ನಿರ್ಧಾರ ಮಾಡ್ತೀವಿ. ಅಲ್ದೆ ತಮ್ಮ ಮಗನ ಹತ್ಯೆ ನಡೆದ್ರೂ ಪೊಲೀಸರು ಈವರೆಗೂ ತಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಮೃತದೇಹ ತಮ್ಮ ಮಗನದ್ದು ಹೌದೋ ಅಲ್ವೋ ಅನ್ನೋ ಬಗ್ಗೆಯೂ ಡಿಎನ್ಎ ಪರೀಕ್ಷೆಗೆ ಮುಂದಾಗಿಲ್ಲ ಅಂತಾ ಹತ್ಯೆಯಾಗಿರೋ ಬಾಲಕನ ತಂದೆ ವಕೀಲ ಜಗದೀಶ ಮಲ್ಲಿಕೇರಿ ಹೇಳಿದ್ದಾರೆ.
ವರದಿ: ಮಂಜುನಾಥ್ ತಳವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ