ಕಾರವಾರ; ಕಾರವಾರ ನಗರದ ಮತ್ಸ್ಯಾಲಯದ ಆವರಣದಲ್ಲಿರುವ ಬೃಹತ್ ತಿಮಿಂಗಿಲದ ಅಸ್ಥಿಪಂಜರವನ್ನು ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಆ ಭಾಗದ ವಿದ್ಯಾರ್ಥಿಗಳಿಗೆ ಸಮುದ್ರ ಜೀವಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅದನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲಾಡಳಿತ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯವೇ ಕಾರಣ ಅಂತಾರೆ ಸ್ಥಳೀಯರು.
ಕೆಲವು ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ಡಿ.ಬೊಳಿಶೆಟ್ಟಿ ಮತ್ತವರ ತಂಡದ ಸದಸ್ಯರು ಇಲ್ಲಿರುವ ತಿಮಿಂಗಿಲ ಅಸ್ಥಿಪಂಜರವನ್ನು ಗಮನಿಸಿದ್ದರು. ಬಳಿಕ, ಕಡಲ ಸಸ್ತನಿಯ ದೇಹ ರಚನೆಯ ಬಗ್ಗೆ ಮಕ್ಕಳಿಗೆ ಅಧ್ಯಯನ ಮಾಡಲು ಸಹಕಾರಿಯಾಗುವಂತೆ ಅಸ್ಥಿಪಂಜರವನ್ನು ತಮ್ಮ ಕೇಂದ್ರಕ್ಕೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಅದರ ಸ್ಥಳಾಂತರಕ್ಕೆ ಒಪ್ಪಿಗೆ ಸಿಕ್ಕಿದ ಬಳಿಕ ಅಲ್ಲಿಗೆ ರವಾನೆಯಾಗಲಿದೆ.
ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಈ ಅಸ್ಥಿಪಂಜರವು ಸುಮಾರು 5 ರಿಂದ 10 ವರ್ಷಗಳಷ್ಟು ಹಳೆಯದಾಗಿದೆ. 30 ಅಡಿಗಳಷ್ಟು ಉದ್ದವಿರುವ ಈ ಅಸ್ಥಿಪಂಜರ ಇಂದಿಗೂ ಗಟ್ಟಿಮುಟ್ಟಾಗಿದೆ. ತಿಮಿಂಗಿಲದ ಹಲ್ಲುಗಳು, ಬೆನ್ನುಮೂಳೆಯ ಜೋಡಣೆಗಳು, ತಲೆಯ ಭಾಗವು ಜೀವ ವೈವಿಧ್ಯದ ಅಧ್ಯಯನ ಮಾಡುವವರ ಜ್ಞಾನದಾಹ ತಣಿಸುವಂತಿದೆ. ಅಲ್ಲದೇ ಪ್ರವಾಸಿಗರನ್ನೂ ಆಕರ್ಷಿಸಲು ಸಹಕಾರಿಯಾಗುವ ರೀತಿಯಲ್ಲಿ ಆಕರ್ಷಕವಾಗಿದೆ.
ಕೊರೋನಾ ಸಂದರ್ಭದಲ್ಲಿ ಬಾಗಿಲು ಮುಚ್ಚಿದ ಮತ್ಸ್ಯಾಲಯವು ಇನ್ನೂ ಪ್ರವಾಸಿಗರಿಗೆ ತೆರೆದಿಲ್ಲ. ಅಲ್ಲದೇ ಅದರ ಆವರಣದಲ್ಲಿ ನಿರ್ವಹಣೆಯೂ ಇಲ್ಲದೇ ಸೊರಗಿದೆ. ಇದೇ ಸಮಸ್ಯೆಯನ್ನು ತಿಮಿಂಗಿಲದ ಅಸ್ಥಿಪಂಜರವೂ ಎದುರಿಸುತ್ತಿದೆ. ಧೂಳು ಹಿಡಿದಿದ್ದು, ತಕ್ಷಣದ ಸ್ವಚ್ಛತೆಯನ್ನು ಎದುರು ನೋಡುತ್ತಿದೆ. ಹಾಗಾಗಿ ಜನಾಕರ್ಷಿಸುವಲ್ಲಿ ಹಿಂದೆ ಬಿದ್ದಿದೆ. ಇದೇ ಅಂಶವೀಗ ಅಸ್ಥಿಪಂಜರಕ್ಕೆ ಬೇರೆ ಜಿಲ್ಲೆಗಳಿಂದ ಬೇಡಿಕೆ ಬರಲು ಕಾರಣವಾಗಿದೆ.
ಇದನ್ನು ಓದಿ: ಸರ್ಕಾರ ಎಲ್ಲಿಯವರೆಗೆ ಹಠಮಾರಿ ಧೋರಣೆ ತೋರುತ್ತದೆಯೊ ಅಲ್ಲಿಯವರೆಗೆ ಪ್ರತಿಭಟನೆ ಮುಂದುವರೆಯುತ್ತದೆ; ಕೋಡಿಹಳ್ಳಿ ಚಂದ್ರಶೇಖರ್
ಈ ಬಗ್ಗೆ ಪ್ರತಿಕ್ರಿಯಿಸಿದ ಕಡಪ ಶಾಸ್ತ್ರಜ್ಞ ‘ನಿರ್ವಹಣೆಯಿಲ್ಲದೇ ಹಾಳಾಗುವ ಬದಲು ಧಾರವಾಡದಲ್ಲಿ ಸೂಕ್ತ ಪ್ರದರ್ಶನ ಮಾಡುವುದು ಸೂಕ್ತ. ಅಲ್ಲಿನ ವಿದ್ಯಾರ್ಥಿಗಳಿಗಾದರೂ ಅನುಕೂಲವಾಗಬಹುದು’ ಎಂದರು. ಇಲ್ಲಿ ನಿರ್ವಹಣೆ ಇಲ್ಲದೆ ಇರೋದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಭಟ್ಕಳದಲ್ಲಿ ಸಿಕ್ಕಿದ ಅಸ್ಥಿಪಂಜರವನ್ನು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದಲ್ಲಿ ಸಂರಕ್ಷಿಸಿ ಇಡಲಾಗಿದೆ. ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ (ಸಿ.ಎಂ.ಎಫ್.ಆರ್.ಐ) ಆವರಣದಲ್ಲೂ ತಿಮಿಂಗಿಲದ ಅಸ್ಥಿಪಂಜರವಿದೆ. ಅದು ಕೂಡ ನಿರ್ವಹಣೆಯಿಲ್ಲದೇ ಹಾಳಾಗುತ್ತಿದೆ. ಬಾಲಭವನ ಸೊಸೈಟಿ ಸ್ಥಾಪನೆಯಾದಾಗ ಅಲ್ಲಿ ಪ್ರದರ್ಶನಕ್ಕಿಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ಅವಕಾಶ ಸಿಗಲಿಲ್ಲ’ ಎಂದರು.
ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ತಿಮಿಂಗಿಲದ ಮತ್ತೊಂದು ಅಸ್ಥಿಪಂಜರವಿದೆ. ಆದರೆ, ಅದರಲ್ಲಿ ಹಲ್ಲುಗಳು ಸೇರಿದಂತೆ ಕೆಲವು ಅಂಗಗಳಿಲ್ಲ. ಮತ್ಸ್ಯಾಲಯದಲ್ಲಿರುವ ಅಸ್ಥಿಪಂಜರವನ್ನು ಕೂಡ ಇಲ್ಲೇ ಆಕರ್ಷಕವಾಗಿ ಪ್ರದರ್ಶನಕ್ಕಿಡಲು ಸಾಧ್ಯವಿದೆ ಎಂಬ ಬೇಡಿಕೆ ಹಲವರದ್ದಾಗಿದೆ. ‘ಟ್ಯಾಗೋರ್ ಕಡಲತೀರದಲ್ಲಿ ಯುದ್ಧನೌಕೆ ವಸ್ತು ಸಂಗ್ರಹಾಲಯ, ಶಿಲ್ಪೋದ್ಯಾನ, ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರ, ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವಿದೆ. ಪ್ರವಾಸಿಗರು ಹೆಚ್ಚು ಬರುವ ಈ ಪ್ರದೇಶದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಪ್ರದರ್ಶನಕ್ಕೆ ಇಡಬೇಕು. ಇದು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮತ್ತು ಪ್ರವಾಸಿ ಆಕರ್ಷಣೆಯಾಗಿಯೂ ಗಮನ ಸೆಳೆಯಲಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ