ಕೊಡಗು : ‘ಒಂದು ಚಿತ್ರ ಸಾವಿರ ಪದಗಳಿಗೆ ಸಮ’ ಎಂಬಂತೆ ಒಂದೊಂದು ಚಿತ್ರಕಲೆಗಳನ್ನು ನೋಡಿದರೆ ಪುಟಗಟ್ಟಲೆ ವರ್ಣಿಸಬಹುದಾಗಿದೆ. ಆ ದಿಸೆಯಲ್ಲಿ ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಒಂದು ವಾರಗಳ ಕಾಲ ನಡೆದ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಸಮಾರೋಪ ಸಮಾರಂಭದಲ್ಲಿ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಜಲವರ್ಣ ಕಲಾಚಿತ್ರಗಳು ಕಣ್ಮನ ಸೆಳೆದವು. ಅದರಲ್ಲೂ ಅಜ್ಜಿ ಮೊಮ್ಮಗುವೊಂದಕ್ಕೆ ಸ್ನಾನ ಮಾಡಿಸುವ ದೃಶ್ಯವಂತು ಪದೇ ಪದೇ ನೋಡಬೇಕೆನಿಸುವಷ್ಟು ಕಾಡಿದ್ದು ಸುಳ್ಳಲ್ಲ.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಗೋಪುರ ಹಾಗೂ ತ್ರಿವೇಣಿ ಸಂಗಮ, ಹೊನ್ನಮ್ಮನ ಕೆರೆ ಹಾಗೂ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ರಾಜಾಸೀಟು, ಕೊಡಗಿನ ಐನ್ಮನೆ, ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಹೀಗೆ ಹತ್ತು ಹಲವು ಕಲಾಚಿತ್ರಗಳು ಚಿತ್ರಕಲಾ ಶಿಬಿರದಲ್ಲಿ ಗಮನ ಸೆಳೆದವು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾಕಾರರ ಕುಂಚದಿಂದ ಅರಳಿದ್ದ ಚಿತ್ರಕಲೆಗಳು ಒಂದಕ್ಕಿಂತ ಒಂದು ಮಿಗಿಲು ಎನ್ನುವಂತೆ ಆಕರ್ಷಣಿಯವಾಗಿದ್ದವು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಒಂದು ವಾರಗಳ ಕಾಲ ಕೊಡಗಿನ ವಿವಿಧೆಡೆ ಏರ್ಪಡಿಸಲಾಗಿದ್ದ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಡಿಕೇರಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಬಿ ಮೇದಪ್ಪ ಅರೆಭಾಷೆಯಲ್ಲಿನ ಸೋಭಾನೆ, ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಉಳಿಸಿ ಬೆಳೆಸುವಲ್ಲಿ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಕಾರ್ಯಕ್ರಮ ನಡೆಯಿತು. ಅರೆಭಾಷೆ ಸಂಸ್ಕೃತಿ, ಜಾನಪದ ಕಲೆಗಳಿಗೆ ಒತ್ತು ನೀಡುತ್ತಿರುವುದು ಸಂತಸದ ವಿಷಯ. ಈ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ಪೂರ್ವಾಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ, ಕೊಡಗಿನಲ್ಲಿ ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರಗಳು ವಿಶಿಷ್ಟವಾಗಿದ್ದು, ಅವುಗಳನ್ನು ಚಿತ್ರಕಲೆ ಮೂಲಕ ಬಿಂಬಿಸಿರುವುದು ವಿಶೇಷವಾಗಿದೆ. ರಾಮನಗರ ಜಿಲ್ಲೆಯಲ್ಲಿರುವ ಜಾನಪದ ಲೋಕದಲ್ಲಿ ಅರೆಭಾಷೆ ಸಂಸ್ಕೃತಿ, ಕಲೆಗಳ ಚಿತ್ರಗಳನ್ನು ಅಳವಡಿಸುವಂತಾಗಬೇಕು. ಜಾನಪದ ಲೋಕಕ್ಕೆ ಭೇಟಿ ನೀಡುವ ಕಲಾಭಿಮಾನಿಗಳು ಕೊಡಗಿನ ಚಿತ್ರಕಲೆಗಳನ್ನು ವೀಕ್ಷಿಸಲು ಅವಕಾಶವಾಗಬೇಕು. ಆ ನಿಟ್ಟಿನಲ್ಲಿ ಜಾನಪದ ಲೋಕದ ಅಧ್ಯಕ್ಷರೊಂದಿಗೆ ಚರ್ಚಿಸುವಂತೆ ಕಾವೇರಮ್ಮ ಸೋಮಣ್ಣ ಸಲಹೆ ಮಾಡಿದರು.
ಇದನ್ನು ಓದಿ: ಕಲಾವಿದನ ಕುಂಚ ವೈಭವಕ್ಕೆ ಸಾಕ್ಷಿಯಾದ ಡೈಮಂಡ್ ಸ್ಟ್ರೋಕ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ!
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ, ಒಂದು ವರ್ಷದಿಂದ ಕೊರೋನಾ ವೈರಸ್ ನಡುವೆಯೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಸರ್ಕಾರದ ನಿಯಮಗಳನ್ನು ಪಾಲಿಸುತ್ತಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ