• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ದೇಶಭಕ್ತರ ಗುತ್ತಿಗೆ ಹಿಡಿದಿರುವ ಬಿಜೆಪಿಯ ಬಣ್ಣ ಬಯಲಾಗುತ್ತಿದೆ; ಮಾಜಿ ಸಚಿವ ಎಂ.ಬಿ ಪಾಟೀಲ್

ದೇಶಭಕ್ತರ ಗುತ್ತಿಗೆ ಹಿಡಿದಿರುವ ಬಿಜೆಪಿಯ ಬಣ್ಣ ಬಯಲಾಗುತ್ತಿದೆ; ಮಾಜಿ ಸಚಿವ ಎಂ.ಬಿ ಪಾಟೀಲ್

ವಿಜಯಪುರದಲ್ಲಿ ಎಂ.ಬಿ ಪಾಟೀಲ್

ವಿಜಯಪುರದಲ್ಲಿ ಎಂ.ಬಿ ಪಾಟೀಲ್

ಬಿಜೆಪಿ ಕುರಿತು ಆಶಾವಾದ ಹೊಂದಿದ್ದ ಬಹುತೇಕರಿಗೆ ಇಂದು ಭ್ರಮನಿರಸನವಾಗಿದೆ.  ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

  • Share this:

ವಿಜಯಪುರ (ಮಾ. 16): ಬಿಜೆಪಿ ದೇಶಭಕ್ತರನ್ನು ಗುತ್ತಿಗೆ ಹಿಡಿದಿದ್ದು, ಆ ಪಕ್ಷದ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ.  ಬಿಜೆಪಿ ಪಕ್ಷವನ್ನು ತೊರೆದು ಹಲವಾರು ಮಾಜಿ ಸೈನಿಕರು ಈಗ ಕಾಂಗ್ರೆಸ್ ಪಕ್ಷವನ್ನು ಸೇರಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ವಿಜಯಪುರ ಜಿಲ್ಲೆಯ ಬಬಲೇಶ್ವರದ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ದಾಶ್ಯಾಳ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನೂರಾರು ಕಾರ್ಯಕರ್ತರನ್ನು ಸ್ವಾಗತಿಸಿ ಅವರು ಮಾತನಾಡಿದರು.


ಬಿಜೆಪಿ ಕುರಿತು ಆಶಾವಾದ ಹೊಂದಿದ್ದ ಬಹುತೇಕರಿಗೆ ಇಂದು ಭ್ರಮನಿರಸನವಾಗಿದೆ.  ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಬಬಲೇಶ್ವರ ವಿಧಾನಸಭೆ ಕ್ಷೇತ್ರದಿಂದಲೇ ಆರಂಭವಾಗಿದೆ.  ಇಲ್ಲಿನ ಪ್ರತಿ ಹಳ್ಳಿ, ಹಳ್ಳಿಯಿಂದ ನಿಷ್ಠಾವಂತ ಕ್ರಿಯಾಶೀಲ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ನಮ್ಮ ಪಕ್ಷವನ್ನು ಸೇರುತ್ತಿದ್ದಾರೆ. ‌ಅವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಅವರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.


ಈ ಭಾಗದಲ್ಲಿ ಬೇಸಿಗೆಯಲ್ಲಿ ರೈತರು ತಮ್ಮ ದ್ರಾಕ್ಷಿ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರತಿಯೊಂದು ಗ್ರಾಮದಲ್ಲಿ ರೂ. 10 ಕೋ. ಟ್ಯಾಂಕರ್‍ ನೀರಿಗಾಗಿ ಖರ್ಚು ಮಾಡುತ್ತಿದ್ದರು.  ಆದರೆ, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಜಾರಿಯಾದ ಮೇಲೆ ಈ ಭಾಗದಲ್ಲಿ ಟ್ಯಾಂಕರ್ ನೀರಿನ ಬಳಕೆ ಪ್ರಮಾಣ ಕಡಿಮೆಯಾಗಿದೆ.  ಈಗ ರೈತರು ನೆಮ್ಮದಿಯಿಂದ ಇದ್ದಾರೆ.‌‌  ಈ ನೀರಾವರಿ ಕಾರ್ಯಗಳನ್ನು ಮೆಚ್ಚಿಯೇ ಪಕ್ಷಾತೀತವಾಗಿ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.


ಹಿರಿಯ ಬಿಜೆಪಿ ಮುಖಂಡ ಚನ್ನು ಕೊಪ್ಪದ ಮಾತನಾಡಿ, ಶೀಘ್ರದಲ್ಲಿಯೇ ಬಬಲೇಶ್ವರ ಭಾಗದಲ್ಲಿ ದೊಡ್ಡ ಕಾರ್ಯಕ್ರಮವನ್ನು ಏರ್ಪಡಿಸಿ, ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ.  ತಾವೇ ಬುತ್ತಿ ಕಟ್ಟಿಕೊಂಡು ತಮ್ಮದೇ ಪೇಟ್ರೋಲ್ ಸುಟ್ಟುಕೊಂಡು, ಎಲ್ಲೆಡೆ ತಿರುಗಾಡಿ, ಪಕ್ಷವನ್ನು ಸಂಘಟಿಸಿದ ಕಾರ್ಯಕರ್ತರಿಗೆ ಈಗ ಆ ಪಕ್ಷದಲ್ಲಿ ಬೆಲೆ ಇಲ್ಲ.  ಕೆಲವು ನಾಯಕರ ವರ್ತನೆಯಿಂದ ನಿಜವಾದ ಕಾರ್ಯಕರ್ತರು ಕಾಲಕಸವಾಗಿದ್ದಾರೆ. ‌ಅಂಥವರೆಲ್ಲ ಅಲ್ಲಿಂದ ಹೊರ ಬಂದು ಎಂ. ಬಿ. ಪಾಟೀಲ ಅವರ ಅಭಿವೃದ್ಧಿ ಕಾರ್ಯಗಳನ್ನು ಅದರಲ್ಲೂ ನೀರಾವರಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.


(ವರದಿ: ಮಹೇಶ ವಿ. ಶಟಗಾರ)

First published: