Vani Vilas Sagar Dam: 2 ದಶಕದ ಬಳಿಕ ತುಂಬಿತುಳುಕುತ್ತಿರುವ ಮಾರಿಕಣಿವೆ ಜಲಾಶಯ
VV Sagara Dam Water Level :ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ 800 ರಿಂದ 1000 ಅಡಿ ಬೋರ್ವೆಲ್ ಕೊರೆಸಿದರು ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ
ನಮಗೆಲ್ಲ ತಿಳಿದಿರುವಂತೆಯೇ ಏಳು ಸುತ್ತಿನ ಕೋಟೆ, ಸಿಡಿಲಿಗು ಬೆಚ್ಚದ ಅಂತಹ ಉಕ್ಕಿನ ಕೋಟೆ ಹೊಂದಿರುವ ಕನ್ನಡಿಗರ(Kannadiga) ಸ್ವಾಭಿಮಾನದ ಪ್ರತೀಕವಾಗಿರುವ ಆದರ್ಶದ ಮಹಿಳೆ ಓಬವ್ವನನ್ನೂ(Onake Obavva), ಮಾದರಿ ನಾಯಕರಾದಂತಹ ಮದಕರಿ ನಾಯಕರನ್ನು ನೀಡಿದ ಗಂಡು ಮೆಟ್ಟಿದ ನಾಡು ವೀರ ಯೋಧರ ಬೀಡು ಚಿತ್ರದುರ್ಗ(Chitradurga) ಜಿಲ್ಲೆ. ಇದೇ ಚಿತ್ರದುರ್ಗದ ಜಿಲ್ಲೆಯಲ್ಲಿ ಇರುವ ವಾಣಿವಿಲಾಸಸಾಗರ (Vani Vilasa Sagar) ಜಲಾಶಯ(Dam) ಏಷ್ಯಾದಲ್ಲಿಯೇ(Asia) ಮಾನವನಿರ್ಮಿತ ಪ್ರಪ್ರಥಮ ಅತಿ ದೊಡ್ಡ ಜಲಾಶಯ ಎಂಬ ಖ್ಯಾತಿಪಡೆದಿದೆ.. ಬಯಲುಸೀಮೆಯ ಏಕೈಕ ಜೀವನಾಡಿಯಾಗಿರುವ ವಿವಿ ಸಾಗರ ಜಲಾಶಯದಲ್ಲಿ ಎರಡು ದಶಕದ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ.
ಎರಡು ದಶಕಗಳ ಬಳಕ ತುಂಬಿತುಳುಕುತ್ತಿರುವ ವಿವಿ ಸಾಗರ..
ಹೆಚ್ಚು ಮಳೆ ಬೀಳದೆ ಬರದ ಭೂಮಿಯಾಗಿ ಬಯಲುಸೀಮೆಯಾಗಿದ್ದ ಚಿತ್ರದುರ್ಗದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಮಾರಿಕಣಿವೆ ಅಥವಾ ವಾಣಿವಿಲಾಸಸಾಗರ ಜಲಾಶಯ ಚಂಡಮಾರುತದ ಪರಿಣಾಮ ಕಳೆದ 15 ದಿನಗಳ ಹಿಂದೆ ಸುರಿದ ಜಿಟಿ-ಜಿಟಿ ಮಳೆಯಿಂದ ಹಾಗೂ ಭದ್ರಾ ಜಲಾಶಯದಿಂದ ಹರಿಸಿದ ನೀರಿನಿಂದ ತುಂಬುವ ಹಂತಕ್ಕೆ ಬಂದು ತಲುಪಿದೆ. ಸದ್ಯ
ಜಲಾಶಯದ ನೀರಿನ ಮಟ್ಟ 122.75 ಅಡಿಗೆ ಬಂದು ತಲುಪಿದ್ದು, ಶೀಘ್ರವೇ ಡ್ಯಾಮ್ ತುಂಬುವ ವಿಶ್ವಾಸದಲ್ಲಿ ರೈತರು ಇದ್ದಾರೆ
ಇನ್ನು 2000ನೇ ಇಸವಿಯಲ್ಲಿ 122.50 ಅಡಿ ತುಂಬಿದ್ದ ಡ್ಯಾಂ ದಾಖಲೆ ಬರೆದಿತ್ತು. ಈಗ 2021 ನವೆಂಬರ್ನಲ್ಲಿ 122.75 ಅಡಿಗೆ ಡ್ಯಾಂ ನೀರಿನ ಮಟ್ಟ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ .1958ರಲ್ಲಿ ಡ್ಯಾಂ ನೀರಿನ ಮಟ್ಟ 124.25 ಅಡಿ ದಾಟಿತ್ತು. ಇದೀಗ ಆ ದಾಖಲೆಯನ್ನು ಮುರಿಯಲು ಒಂದೂವರೆ ಅಡಿ ಮಾತ್ರ ಬಾಕಿಯಿದೆ.1935ರಲ್ಲಿ 135.25 ಅಡಿ ನೀರು ಹರಿದು ಬಂದಿದ್ದರಿಂದ ಮೊದಲ ಬಾರಿಗೆ ಜಲಾಶಯದಲ್ಲಿ ಕೋಡಿ ಬಿದ್ದು ನೀರು ಹರಿದಿತ್ತು. ತದನಂತರ 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿತ್ತು. 1957ರಲ್ಲಿ 125.05 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. 2000 ಸಾಲಿನಲ್ಲಿ 122.50 ಅಡಿಗೆ ಮಾತ್ರ ನೀರಿನ ಮಟ್ಟ ತಲುಪಿತ್ತು. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗಿ ನೀರು ಜಲಾಶಯಕ್ಕೆ ಹರಿದು ಬಂದರೆ 88 ವರ್ಷಗಳ ನಂತರ ಎರಡನೇ ಬಾರಿಗೆ ಕೋಡಿ ಬೀಳುವ ಸಂಭವವಿದೆ. ಒಂದು ವೇಳೆ ಈ ವರ್ಷ ಕೋಡಿ ಬೀಳದಿದ್ದರೂ ಮುಂಬರುವ ಮಳೆಗಾಲದಲ್ಲಿ ಕೋಡಿ ಬೀಳುವ ನಿರೀಕ್ಷೆ ಇದೆ.
ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯ
ಚಿಕ್ಕಮಗಳೂರಿನ ಗಿರಿ ಕಂದಕಗಳಲ್ಲಿ ಹುಟ್ಟುವ ವೇದಾವತಿ ನದಿಗೆ ಅಡ್ಡಲಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಪುರದ ಬಳಿ ಮರಿಕಣಿವೆ ಅಥವಾ ವಾಣಿವಿಲಾಸಸಾಗರ ಜಲಾಶಯ ವನ್ನು ನಿರ್ಮಾಣ ಮಾಡಲಾಗಿದೆ.. ವಾಣಿ ವಿಲಸಾ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರ್ IV ರ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ಮೈಸೂರು ದಿವಾನಗರಾಗಿದ್ದ ಶೇಷಾದ್ರಿ ಅಯ್ಯರ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ.. ಅಲ್ಲದೇ ಮೈಸೂರಿನಲ್ಲಿ ಇರುವ ಕೆಆರ್ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ..
ಚಿತ್ರದುರ್ಗ ಭಾಗದ ಕೊಳವೆ ಬಾವಿಗಳಲ್ಲಿ ಉಕ್ಕಿ ಹರಿಯುತ್ತಿರುವ ನೀರು
ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ 800 ರಿಂದ 1000 ಅಡಿ ಬೋರ್ವೆಲ್ ಕೊರೆಸಿದರು ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 50 ರಿಂದ 200 ಅಡಿಗೆ ನೀರು ಸಿಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ, ಚಟುವಟಿಕೆಗಳು ಸಂಭ್ರಮದಿಂದ ಗರಿಗೆದರಿದ್ದು ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ