ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು; ಹಬ್ಬಕ್ಕೆಂದು ದೇವಸ್ಥಾನಕ್ಕೆ ತೆರಳಿದ್ದ ಗೆಳೆಯರ ದಾರುಣ ಅಂತ್ಯ
ನಾಲ್ವರು ಸ್ನೇಹಿತರು ಕೆರೆಗೆ ಇಳಿದಾಗ ಭರತ್ ಮತ್ತು ವಿನೋದ ಕೆರೆಯ ಕೆಸರಿನಲ್ಲಿ ಸಿಲುಕಿ ಮುಳುಗಿ ನಾಪತ್ತೆ ಯಾಗಿದ್ದರು. ಇದರಿಂದ ಗಾಬರಿಗೊಂಡ ಉಳಿದ ಇಬ್ಬರು ದೇವಾಲಯದ ಬಳಿ ಇದ್ದ ಪೋಷಕರಿಗೆ ಸುದ್ದಿ ತಿಳಿಸಿದ್ದಾರೆ.
ಮಂಡ್ಯ: ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಜಲ ಸಮಾಧಿಯಾದ ಧಾರುಣ ಘಟನೆ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಜರುಗಿದೆ. ಮೃತರಿಬ್ಬರ ಶವವನ್ನು ಪೊಲೀಸರು ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಗಳು ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ. ಸಕ್ಕರೆನಾಡು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಈ ಧಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಭರತ್(24) ಮತ್ತು ವಿನೋದ್(22) ಮೃತಪಟ್ಟ ಯುವಕರಾಗಿದ್ದಾರೆ. ಸಂತೆ ಬಾಚಹಳ್ಳಿ ಗ್ರಾಮದಲ್ಲಿರುವ ಗವಿರಂ ಗಪ್ಪನ ದೇವಸ್ಥಾನಕ್ಕೆ ಈ ಮೃತ ಯುವಕರು ಕುಟುಂಬ ದವರೊಂದಿಗೆ ದೇವರ ಪರ ಮಾಡಲು ಬಂದಿದ್ದರು. ದೇವರ ದರ್ಶನ ಪಡೆದು ಈ ಯುವಕರು ತಮ್ಮೂರಿನ ಇನ್ನಿಬ್ಬರು ಯುವಕರ ಜೊತೆ ದೇವಾಲಯದ ಸಮೀಪದಲ್ಲೇ ಇದ್ದ ಕೆರೆಗೆ ಈಜಲು ತೆರಳಿದ್ದರು. ಈ ವೇ ಳೆ ಕೆರೆಯ ಕೆಸರಿಗೆ ಸಿಲುಕಿ ಈ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಮೃತ ಯುವಕರಲ್ಲಿ ವಿನೋದ ಎಂಬಾತ ಹೊಳಲು ಗ್ರಾ.ಪಂ.ನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಭರತ್ ಮಂಡ್ಯದ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ. ಮನೆ ದೇವರ ಹಬ್ಬವಿದ್ದ ಕಾರಣ ಆತ ಬೈಕ್ನಲ್ಲಿ ಇಲ್ಲಿಗೆ ಬಂದು ದೇವರ ದರ್ಶನ ಮಾಡಿ ಬಳಿಕ ಸ್ನೇಹಿತರ ಜೊತೆ ಕೆರೆ ಬಳಿತೆರಳಿದ್ದರು. ನಾಲ್ವರು ಸ್ನೇಹಿತರು ಕೆರೆಗೆ ಇಳಿದಾಗ ಭರತ್ ಮತ್ತು ವಿನೋದ ಕೆರೆಯ ಕೆಸರಿನಲ್ಲಿ ಸಿಲುಕಿ ಮುಳುಗಿ ನಾಪತ್ತೆ ಯಾಗಿದ್ದರು. ಇದರಿಂದ ಗಾಬರಿಗೊಂಡ ಉಳಿದ ಇಬ್ಬರು ದೇವಾಲಯದ ಬಳಿ ಇದ್ದ ಪೋಷಕರಿಗೆ ಸುದ್ದಿ ತಿಳಿಸಿದ್ದಾರೆ.
ಕೆರೆಯ ಬಳಿ ನಡೆದ ದುರ್ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕೆರೆಯ ಬಳಿ ಹಬ್ಬ ಮಾಡಲು ಬಂದಿದ್ದ ಪೋಷಕರು ಸೇರಿದಂತೆ ಊರಿನ ಜನರು ಜಮಾಯಿಸಿದ್ದರು. ಸ್ಥಳದಲ್ಲಿ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಯುವಕರ ಶವಕ್ಕಾಗಿ ಸ್ಥಳೀಯ ಈಜುಗಾರರು ಸೇರಿದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂ ದಿಗಳು ನಾಲ್ಕೈದು ತಾಸುಗಳ ಕಾರ್ಯಾಚರಣೆ ನಡೆಸಿದ ಬಳಿಕ ಇಬ್ಬರ ಶವ ವನ್ನು ನೀರಿನಿಂದ ಹೊರ ತೆಗೆಯಲಾಯಿತು.
ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಪತ್ತೆಯಾದ ಇಬ್ಬರ ಶವವನ್ನು ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಶವವನ್ನು ಹಸ್ತಾಂತರಿಸಿದ್ದಾರೆ.
ಮೃತ ಯುವಕರ ಸಾವಿನಿಂದ ಹೊಳಲು ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ರೆ, ಮೃತ ಯುವಕರ ಕುಟುಂಬದಲ್ಲಿ ಶೋಕ ಸಾಗರ ಮನೆ ಮಾಡಿದೆ. ಮನೆ ದೇವರ ಹಬ್ಬ ಮಾಡಿ ಸಂಭ್ರಮಿಸಿಬೇಕಾದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದ್ದು ನಿಜಕ್ಕೂ ದುರಂತವೇ ಸರಿ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ