ಚಾಮರಾಜನಗರ (ನವೆಂಬರ್ 28); ವರುಣನ ಕೃಪೆಯಿಂದ ಈ ಬಾರಿ ರೈತರು ಒಳ್ಳೆಯ ಬೆಳೆ ಬೆಳೆದಿದ್ದಾರೆ. ಆದರೆ ಊಜಿನೊಣದ ಬಾಧೆಯ ಪರಿಣಾಮ ಟೊಮ್ಯಾಟೊ ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಊಜಿನೊಣ ಬಿದ್ದ ಟೊಮ್ಯಾಟೋ ಹಣ್ಣನ್ನು ಕೇಳುವವರಿಲ್ಲದೆ ಕಾಲಕಸವಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಗೆ ಟೊಮ್ಯಾಟೋ ತಂದ ರೈತರು ನಿತ್ಯ ಟನ್ ಗಟ್ಟಲೇ ಟೊಮ್ಯಾಟೋ ಹಣ್ಣನ್ನು ರಸ್ತೆ ಬದಿಗೆ ಸುರಿದು ಹೋಗುತ್ತಿದ್ದಾರೆ. ಗುಂಡ್ಲುಪೇಟೆ ಎಪಿಎಂಸಿ ತುಂಬೆಲ್ಲಾ ಟೊಮ್ಯಾಟೊ ರಾಶಿ ಬಿದಿದ್ದು ಕೇಳುವರರೇ ಇಲ್ಲವಾಗಿದ್ದಾರೆ.
ಈಗ ಕೆ.ಜಿ ಟೊಮ್ಯಾಟೊಗೆ 9 ರಿಂದ 10 ರೂ ಬೆಲೆ ಇದ್ದರೂ ರೈತರ ಪಾಲಿಗೆ ಪ್ರಯೋಜನವಿಲ್ಲದಂತಾಗಿದೆ. ಗುಂಡ್ಲುಪೇಟೆಯಿಂದ ಪಕ್ಕದ ರಾಜ್ಯ ಕೇರಳ, ತಮಿಳುನಾಡು ಮತ್ತು ದೆಹಲಿಗೆ ಟೊಮ್ಯಾಟೊ ಹಣ್ಣನ್ನು ಸರಬರಾಜು ಮಾಡಲಾಗುತ್ತದೆ. ದೆಹಲಿಯಲ್ಲಿ ಟೊಮ್ಯಾಟೊ ಹಣ್ಣಿನ ಬೆಲೆ ಗಗನಕ್ಕೇರಿದ್ದು, ದೆಹಲಿಯೊಂದಕ್ಕೇ ಇಲ್ಲಿಂದ ಪ್ರತಿ ದಿನ ನಾಲ್ಕು ಸಾವಿರ ಕ್ರೇಟ್ ಟೊಮ್ಯಾಟೋ ಸರಬರಾಜು ಆಗುತ್ತದೆ. ಆದರೆ ಊಜಿನೊಣ ಬಾಧೆಯಿಂದ ಟೊಮ್ಯಾಟೊ ಹಣ್ಣಿನ ಮೇಲೆ ಕಪ್ಪು ಚುಕ್ಕೆ ಕಾಣಿಸಿಕೊಳ್ಳುತ್ತಿದೆ. ಹೀಗೆ ಕಪ್ಪು ಚುಕ್ಕೆ ಕಾಣಿಸಿಕೊಂಡರೆ ಯಾರೂ ಖರೀದಿ ಮಾಡುವುದಿಲ್ಲ. ಊಜಿನೊಣದ ಬಾಧೆಯಿಂದ ಕಪ್ಪು ಚುಕ್ಕೆ ಕಾಣಿಸಿಕೊಂಡ ಟೊಮ್ಯಾಟೊ ಹಣ್ಣಿನಿಂದ ಇತರ ಹಣ್ಣುಗಳು ಸಹ ಕೆಟ್ಟು ಹೋಗುವುದರಿಂದ ಇಂತಹ ಹಣ್ಣನ್ನು ಖರೀದಿಸಲು ಯಾವ ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹಾಗಾಗಿ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರತಿದಿನ ಮೂರರಿಂದ ನಾಲ್ಕು ಟನ್ ನಷ್ಟು ಟೊಮ್ಯಾಟೊವನ್ನು ಎಪಿಎಂಸಿಯ ರಸ್ತೆ ಬದಿಯಲ್ಲಿ ಬಿಸಾಡಲಾಗುತ್ತಿದೆ. ರೈತರು ಮಾರಾಟಕ್ಕೆಂದು ತರುವ ಟೊಮ್ಯಾಟೊ ಹಣ್ಣನ್ನು ಮೊದಲಿಗೆ ದಪ್ಪ ಮತ್ತು ಸಣ್ಣ ಎಂದು ವರ್ಗೀಕರಿಸಲಾಗುತ್ತದೆ. ಇದರಲ್ಲಿ ಊಜಿನೊಣದ ಬಾಧೆಗೆ ತುತ್ತಾಗಿರುವ ಟೊಮ್ಯಾಟೊವನ್ನು ಬೇರ್ಪಡಿಸುತ್ತಾರೆ. ಇದರಿಂದ ಶೇಕಡಾ 80 ರಷ್ಟು ಟೊಮ್ಯಾಟೋ ಹಣ್ಣು ಯೋಗ್ಯವಿಲ್ಲದೆ ಕಸದ ರಾಶಿಗೆ ಸುರಿಯುವಂತಾಗಿದೆ.
ಇದನ್ನು ಓದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗಲಿದೆ; ಸಚಿವ ವಿ.ಸೋಮಣ್ಣ
ಸಾಲ ಸೋಲ ಮಾಡಿ ಟೊಮ್ಯಾಟೊ ಬೆಳೆದಿದ್ದೆ. ಫಸಲೇನೋ ಉತ್ತಮವಾಗಿಯೇ ಬಂತು. ಆದರೆ ಹಣ್ಣಾಗುವಷ್ಟರಲ್ಲಿ ಊಜಿನೊಣದ ಬಾಧೆ ಶುರುವಾಯಿತು. ಎಲ್ಲಾ ರೀತಿಯ ಕ್ರಿಮಿನಾಶಕ, ಕೀಟನಾಶಕ ಸಿಂಪಡಿಸಿದರೂ ಕಡಿಮೆಯಾಗದೆ ನಷ್ಟ ಅನುಭವಿಸುವಂತಾಗಿದ ಎನ್ನುತ್ತಾರೆ ಬೇಗೂರಿನ ರೈತ ಸುಂದರೇಶ್.
ವರದಿ; ಎಸ್.ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ