ಗದಗ: ಕೊವಿಡ್ 3ನೇ ಅಲೆ ಮಕ್ಕಳಿಗೆ ಮಾರಕವಾಗಲಿದೆ ಎಂದು ತಜ್ಞರು ವರದಿ ನೀಡುತ್ತಲೇ ಇದ್ದಾರೆ. ಈ ಮಧ್ಯೆ ಮಕ್ಕಳ ಆರೋಗ್ಯ ರಕ್ಷಣೆಗೆ ಜನರು ದೈವದ ಮೊರೆ ಹೋಗುತ್ತಿದ್ದಾರೆ. ಆದರೆ ನಮ್ಮ ಜನರು ಸರ್ಕಾರದ ಕೋವಿಡ್ ನಿಯಮ ಮೀರುತ್ತಿರುವುದು ವಿಪರ್ಯಾಸ.
ಮೊಹರಂ ಹಬ್ಬದಲ್ಲಿ ಹುಲಿ ವೇಷ ಹಾಕಿದರೆ ಯಾವುದೆ ಖಾಯಿಲೆ, ತೊಂದರೆಗಳು ಬರುವುದಿಲ್ಲ ಎಂದು ನಂಬಿರುವ ಜನರು ಗದಗದಲ್ಲಿ ಮಕ್ಕಳಿಗೆ ಹುಲಿ ವೇಷ ಹಾಕಿಸಿದ್ದಾರೆ. ಹುಲಿ ವೇಷ ಹಾಕಿದ ಮಕ್ಕಳು ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಮೊಹರಂ ಹಬ್ಬ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಒಂದು ಹಬ್ಬವಾಗಿದೆ. ಜಾತಿ ಭೇದ ಮರೆತು ಎಲ್ಲರೂ ಸೇರಿಕೊಂಡು ಸಡಗರ ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ ಮಾಡುತ್ತಾರೆ. ದೇವರು ಹೊತ್ತುಕೊಂಡು ಬೆಂಕಿ ಕೆಂಡ ಹಾಯುವ ಮೂಲಕ ಕೆಲವು ಗ್ರಾಮಗಳಲ್ಲಿ ಹಬ್ಬ ಆಚರಣೆ ಮಾಡುತ್ತಾರೆ. ಇನ್ನು ಕೆಲವು ಕಡೆಯಲ್ಲಿ ಮಕ್ಕಳು,ಯುವಕರು ಹುಲಿ ವೇಷ ಧರಿಸುವ ಮೂಲಕ ಈ ಹಬ್ಬದಲ್ಲಿ ಭಾಗಿಯಾಗುತ್ತಾರೆ.
ಹೌದು ಮೊಹರಂ ಹಬ್ಬದ ನಿಮಿತ್ತ ಗದಗ ಜಿಲ್ಲೆಯಲ್ಲಿ ಹುಲಿ ವೇಷ ಹಾಕಿ ಮೆರವಣಿಗೆ ಮಾಡೋದು ವಾಡಿಕೆ. ಈ ಬಾರಿ ಕೊರೊನಾ ಮಹಾ ಮಾರಿ ಹೊಂಚು ಹಾಕಿ ಕುಳಿತಿದ್ದರೂ ಆಚರಣೆ ಎಗ್ಗಿಲ್ಲದೆ ನಡೆದಿದೆ. ಮಹಾಮಾರಿ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತೆ ಅನ್ನುವ ಎಚ್ಚರಿಕೆ ನೀಡಿದ್ದರೂ ಮೆರವಣಿಗೆಯಲ್ಲಿ ಮಕ್ಕಳಿಗೆ ಹುಲಿ ವೇಷ ಹಾಕಿ ಕುಣಿಸಲಾಗಿದೆ.
ಹೀಗೆ ಮೈಗೆ ಬಣ್ಣ ಹಚ್ಚಿ ಹುಲಿ ವೇಷ ಹಾಕುವುದರಿಂದ ಮಕ್ಕಳು ಆರೋಗ್ಯವಾಗಿರುತ್ತಾರೆ. ಯಾವುದೇ ರೋಗ ರುಜಿನಗಳು ಬರೋದಿಲ್ಲ.ಕೊರೋನಾ ಇದ್ದರೂ ಏನು ಆಗೋದಿಲ್ಲ. ದೇವರು ಮಾಡಿದಂತಾಗಲಿ ಅನ್ನೋದು ಜನರ ನಂಬಿಕೆ. ಮಕ್ಕಳಲ್ಲಿ ಅನಾರೋಗ್ಯ ಕಂಡು ಬಂದಲ್ಲಿ ಮೊಹರಂ ಹಬ್ಬದಲ್ಲಿ ದೇವರಿಗೆ ಮುಡಿಪು ಕಟ್ಟುತ್ತಾರೆ. ಆಗ ಆರೋಗ್ಯದಲ್ಲಿ ಸುಧಾರಣೆಯಾದರೆ ಮಕ್ಕಳಿಗೆ ಹುಲಿ ವೇಷ ಹಾಕಿಸ್ತೀವಿ ಅಂತಾ ಬೇಡಿ ಕೊಳ್ಳುತ್ತಾರೆ.
ಹರಕೆಯಂತೆ ಮೊಹರಂ ಹಬ್ಬದ ವೇಳೆ ಬಣ್ಣ ಹಚ್ಕೊಂಡ ಮಕ್ಕಳು ಓಣಿ ಓಣಿಯಲ್ಲಿ ಸುತ್ತಾಡ್ಕೊಂಡು ಹುಲಿ ಕುಣಿತ ನಡೆಸುತ್ತಾರೆ. ಭಕ್ತರು ನೀಡುವ ಹಣದಿಂದ ಪ್ರಸಾದ ಸೇವಿಸುತ್ತಾರೆ. ಹೀಗೆ ಮಾಡುವುದರಿಂದ ಕುಟುಂಬಕ್ಕೆ ಶ್ರೇಯಸ್ಸಾಗುತ್ತದೆ ಅನ್ನುವುದು ನಂಬಿಕೆ.
ಬಣ್ಣ ಹಾಕಿಕೊಂಡ ಹುಲಿ ವೇಷಧಾರಿಗಳು ಉಪ್ಪು ಹುಳಿ ಖಾರ, ಗುಟ್ಕಾ, ಮದ್ಯಪಾನದಿಂದ ದೂರ ಇರುತ್ತಾರೆ. ಹಣ್ಣು, ಹಾಲು ಸೇವಿಸೋ ಮೂಲಕ ಕಠಿಣ ನಿಯಮ ಪಾಲಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳು ರಸ್ತೆಗಿಳಿದು ಮೊಹರಂ ಆಚರಣೆ ನಡೆಸುತ್ತಿದ್ದಾರೆ. ದೇವರ ದಯೆ ಇದ್ರೆ 10 ಅಲೆಗಳು ಬಂದರು ಏನು ಆಗೋದಿಲ್ಲ ಅಂತಿದ್ದಾರೆ ಹುಲಿ ವೇಷಾದಾರಿಗಳು.
ಇದನ್ನೂ ಓದಿ: ಆರ್ಎಸ್ಎಸ್ಅನ್ನು ತಾಲಿಬಾನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ಧ್ರುವನಾರಾಯಣ್; ಬಿಜೆಪಿ ಪಾಳಯ ಕೆಂಡಾಮಂಡಲ
ತಲೆ ತಲಾಂತರದಿಂದ ಬಂದ ಆಚರಣೆಯನ್ನು ಜನರು ಬಿಡೋದಕ್ಕೆ ಒಪ್ಪುತ್ತಿಲ್ಲ. ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸಂಭವನೀಯ 3ನೇ ಅಲೆ ಮಕ್ಕಳಿಗೆ ಕಾಡಲಿದೆ ಎನ್ನಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನ ಗುರುತಿಸಿ ಇನ್ಫುಲೆಂಜಾ ಇಂಜೆಕ್ಷನ್, ಪೌಷ್ಟಿಕ ಆಹಾರ ಪೂರೈಸಲಾಗಿದೆ. ಇದರ ಜೊತೆಗೆ ಹುಲಿ ವೇಷ ಹಾಕೋ ಮಕ್ಕಳನ್ನ ಗುರುತಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಔಷಧಿ ಕೊಡಬೇಕಿದೆ. ಜನನಿಬಿಡ ಪ್ರದೇಶದಲ್ಲಿ ಓಡಾಡೋ ಮಕ್ಕಳಲ್ಲಿ ಕೋವಿಡ್ ಅರಿವು ಮೂಡಿಸಲು ಮುಂದಾಗಬೇಕು ಎನ್ನುವುದು ನ್ಯೂಸ್ 18 ಕಳಕಳಿ
ವರದಿ: ಸಂತೋಷ ಕೊಣ್ಣೂರ,ಗದಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ