ಧಾರವಾಡ : ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳು ರಜೆ ಇವೆ. ಇದನ್ನು ಬಂಡವಾಳ ಮಾಡಿಕೊಂಡ ಖದೀಮರು ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ವಿವಿಧ ಖಾಸಗಿ ಶಾಲೆಗಳಲ್ಲಿ ಕೈಚಳಕ ತೋರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ವೀರಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನಾಪೂರದ ಕಕ್ಕಯ್ಯ ಪ್ರೌಢಶಾಲೆ, ಮುಗದ ಗ್ರಾಮದ ಖಾಸಗಿ ಪ್ರೌಢ ಶಾಲೆಗಳಲ್ಲಿ ಕಳ್ಳತನ ನಡೆದಿವೆ.
ಮೂರು ಶಾಲೆಗಳ ಬೀಗ ಮುರಿದು ತಮ್ಮ ಖದೀಮರು ಕೈಚಳಕ ತೋರಿಸಿದ್ದಾರೆ. ವಿದ್ಯುತ್ ಕಡಿತದ ಸಮಯದಲ್ಲಿ ಬಳಸುವ ಬ್ಯಾಟರಿ ಹಾಗೂ ಯುಪಿಎಸ್ ಸೇರಿದಂತೆ ಮೂರು ಶಾಲೆಗಳಲ್ಲಿ ಅಂದಾಜು ರೂ.1.50 ಲಕ್ಷ ಮೌಲ್ಯದ ವಸ್ತು ದೋಚಿದ್ದಾರೆ.
ಮುಗದ ಹಾಗೂ ಹೊನ್ನಾಪೂರ, ವೀರಾಪೂರ ಸರ್ಕಾರಿ ಶಾಲೆಗಳಲ್ಲಿ ಭಾನುವಾರವೇ ಕಳ್ಳತನ ನಡೆದಿದೆ. ಈ ಬಗ್ಗೆ ಮುಖ್ಯೋಪಾಧ್ಯರು ಸೋಮವಾರ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಕಳ್ಳತನದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ತನಿಖೆ ಪ್ರಗತಿಯಲ್ಲಿದೆ.
ಇದನ್ನು ಓದಿ: ಹಾಸನಕ್ಕೆ ಕಳ್ಳ, ಭ್ರಷ್ಟ ಭೂ ಸ್ವಾಧೀನಾಧಿಕಾರಿ ನೇಮಿಸಿದ್ದಾರೆ; ಸರ್ಕಾರದ ವಿರುದ್ದ ಎಚ್.ಡಿ. ರೇವಣ್ಣ ಕಿಡಿ
ಈ ಶಾಲೆಗಳಲ್ಲಿ ಹಿಂದೆಯೂ ಟಿವಿ, ಕ್ಯಾಮೆರಾ ಕಳ್ಳತನವಾಗಿವೆ. ಆಗಲೂ ಪ್ರಕರಣ ದಾಖಲಿಸಿರಲಿಲ್ಲ. ಈಗ ಬ್ಯಾಟರಿ - ಯುಪಿಎಸ್ ಕಳ್ಳತನದ ನಂತರ ಠಾಣೆಗೆ ದೂರು ನೀಡಿದ್ದು ಗೊತ್ತಿದ್ದವರೇ ಈ ಕೆಲಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವರದಿ; ಮಂಜುನಾಥ ಯಡಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ