ರಾಮನಗರ (ಬಿಡದಿ): ಮುನಿರತ್ನಗೆ ದೇವರು ಒಳ್ಳೆಯದು ಮಾಡಲಿ. ಅವರು ಪವರ್ ಮಿನಿಷ್ಟರ್ ಆಗಲಿ, ಹೋಂ ಆಗಲಿ, ಇಲ್ಲ ಸಿಎಂ ಆಗಲಿ, ನನಗೇನು. ಅವರು ಗೆದ್ಮೇಲೆ ಅದು ನಿರ್ಧಾರವಾಗುತ್ತೆ. ನನ್ನ ಕ್ಷೇತ್ರದಲ್ಲಿ ಸಿಎಂ ಆದ್ರೆ ನನಗೆ ಸಂತೋಷ. ಆದರೆ ನಾನೊಬ್ಬ ಆಶಾವಾದಿ, ಜನರ ತೀರ್ಪು ನಮ್ಮ ಪರವಾಗಿ ಬರಲಿದೆ ಅನ್ನೋ ವಿಶ್ವಾಸವಿದೆ ಎನ್ನುವ ಮೂಲಕ ಮುನಿರತ್ನಗೆ ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದರು.
ರಾಮನಗರದ ಬಿಡದಿಯ ಖಾಸಗಿ ಕಾಲೇಜಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಈ ಚುನಾವಣೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಈಗಾಗಲೇ ಬಿಜೆಪಿಯಲ್ಲಿ ಆಂತರಿಕ ಗೊಂದಲಗಳು ನಡೆಯುತ್ತಿವೆ. ಚುನಾವಣೆ ಗೆಲ್ಲಲಿ, ಸೋಲಲಿ ಯಾವುದೇ ಕ್ಷಣದಲ್ಲಿ ಭಿನ್ನಮತ ಸ್ಫೋಟವಾಗಬಹುದು ಎಂದು ಭವಿಷ್ಯ ನುಡಿದಿದರು. ಇನ್ನು ಸಿಎಂ ಬದಲಾವಣೆ ಆಗ್ತಾರೆ ಎನ್ನುವ ವಿಚಾರಕ್ಕೆ ಮಾತನಾಡಿದ ಅವರು ಈ ಬಗ್ಗೆ ಬಿಜೆಪಿಯವರೇ ಹೇಳ್ತಿದ್ದಾರೆ. ಆದರೆ ನಮಗೆ ಯಡಿಯೂರಪ್ಪನವರೇ ಸಿಎಂ ಆಗಿರ್ಬೇಕು ಎಂದು ಹೇಳಿದರು.
ಇದನ್ನು ಓದಿ: ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ, ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತ; ಸಿದ್ದರಾಮಯ್ಯ ಭವಿಷ್ಯ
ಬಿಜೆಪಿ ಸರ್ಕಾರದಲ್ಲಿ ಕನಕಪುರಕ್ಕೆ ಯಾವುದೇ ಅನುಕೂಲವಿಲ್ಲ. ಈ ಸರ್ಕಾರದಲ್ಲಿ ಕನಕಪುರ ಕ್ಷೇತ್ರಕ್ಕೆ ಒಂದು ಬಿಡಿಗಾಸು ಸಿಕ್ಕಿಲ್ಲ. ಈ ಕುರಿತಾಗಿ ಯಾವ ಮಂತ್ರಿ ಬೇಕಾದರೂ ನೇರವಾಗಿ ಚರ್ಚೆಗೆ ಬಂದರೆ ನಾನು ಸಿದ್ಧ. ಸಿಎಂ ಹಾಗೂ ಮಂತ್ರಿಗಳ ಜೊತೆಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸುರೇಶ್ ಸವಾಲು ಹಾಕಿದರು.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ