ಚಿಕ್ಕೋಡಿ(ಡಿಸೆಂಬರ್. 19): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈಗ ಕಳ್ಳರ ಕಾಟ ಶುರುವಾಗಿದೆ. ಮನೆ, ದೇವಸ್ಥಾನ ಎನ್ನುವುದಿಲ್ಲ. ಮನೆ ಬೀಗ ಮುರಿದು ಕೈಗೆ ಎನು ಸಿಗುತ್ತೊ ಅದನ್ನ ಎತ್ತಿಕ್ಕೊಂಡು ಹೋಗುವ ಕಳ್ಳರ ಗ್ಯಾಂಗ್ ಸದ್ಯ ಜಿಲ್ಲೆಯ ಜನರ ನೆಮ್ಮದಿ ಹಾಳುಮಾಡಿದೆ. ಕಳ್ಳರ ಕರಾಮತ್ತಿನಿಂದ ತಪ್ಪಿಸಿಕೊಳ್ಳಲು ಜನ ಈಗ ಜಾಗೃತಿ ಅಭಿಯಾನದ ಮೊರೆ ಹೋಗಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಗೆ ಈಗ ಖದೀಮರ ಭಯ ಶುರುವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ 12 ಮನೆಗಳೂ ಸೇರಿದಂತೆ ಒಂದು ಸರಕಾರಿ ಸ್ವಾಮ್ಯದ ಬ್ಯಾಂಕ್ ಕಳ್ಳತನವಾಗಿತ್ತು. ಮರು ದಿನವೇ ಅದೇ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಅಪ್ಪಯ್ಯ ಸ್ವಾಮೀ ದೇವಾಲಯ ಹಾಗೂ ಲಕ್ಕಮ್ಮ ದೇವಿ ದೇವಸ್ಥಾನದಲ್ಲಿದ್ದ ಸುಮಾರು 12 ರೂಪಾಯಿ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಖದೀಮರು 6 ಮನೆಗಳಿಗೂ ಕನ್ನ ಹಾಕಿದ್ದರು.
ಅಲ್ಲದೆ ಅಲ್ಲಲ್ಲಿ ಸಣ್ಣ ಪುಟ್ಟ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಲೆ ಇವೆ ಇದರಿಂದ ರೋಗಿ ಹೋಗಿರುವ ಜನ ಕಳ್ಳರ ಕಾಟ ತಪ್ಪಿಸಿಕೊಳ್ಳಲು ರಾತ್ರಿಯಿಡಿ ಜಾಗರಣೆ ಮಾಡುವ ಸ್ಥಿತಿ ಅಥಣಿ ತಾಲೂಕಿನಾದ್ಯಂತ ನಿರ್ಮಾಣವಾಗಿದೆ. ಅಲ್ಲದೆ ಈಗ ತಾಲೂಕು ಸೇರಿದಂತೆ ಅಥಣಿ ತಾಲೂಕಿನ ಅಕ್ಕ ಪಕ್ಕದ ಬೇರೆ ತಾಲೂಕಿನ ಹಳ್ಳಿಗಳಲ್ಲೂ ಈಗ ಕಳ್ಳರ ಭಯ ಶುರುವಾಗಿದ್ದು ಗ್ರಾಮದಲ್ಲಿ ಡಂಗೂರದ ಮೊರೆ ಹೋಗಿದ್ದಾರೆ.
ತಾಲೂಕಿನ ಗ್ರಾಮಗಳಲ್ಲಿ ಜನ ಡೊಂಗೂರ ಸಾರಿ ಎಲ್ಲೆಡೆ ಕಳ್ಳರ ಹಾವಳಿ ಜಾಸ್ತಿ ಆಗಿದ್ದು ನಿಮ್ಮ ಮನೆ ಅಂಗಗಳ ಸುರಕ್ಷತೆ ಮಾಡಿಕೊಳ್ಳಬೇಕು. ಅಲ್ಲದೆ ಅಪರಿಚಿತರನ್ನ ಊರೊಳಗೆ ಸೇರಿಸಬೇಡಿ. ಅನುಮಾನ ಬರುವ ಜನ ಬಂದರೆ ಪೊಲೀಸರಿಗೆ ತಿಳಿಸಿ ಎಂದು ಡಂಗೂರ ಸಾರುವ ಮೂಲಕ ಜಾಗೃತಿ ಮಾಡುತ್ತಿದ್ದಾರೆ.
ಇನ್ನು ಅಥಣಿ ತಾಲೂಕಿನಲ್ಲಿ ಹೆಚ್ಚಾಗಿ ರೈತಾಪಿ ಕುಟುಂಬಗಳೇ ವಾಸಿಸುವುದರಿಂದ ಇಲ್ಲಿನ ಜನ ರಾತ್ರಿ ಹೊತ್ತು ಊರಲ್ಲಿರುವ ಮನೆಗಳಲ್ಲಿ ವಾಸ ಮಾಡುವ ಬದಲು ದನಕರುಗಳನ್ನ ನೋಡಿಕೊಳ್ಳುತ್ತ ತೋಟದ ವಸತಿಯಲ್ಲೆ ಉಳಿದುಬಿಡುತ್ತಾರೆ. ಹೀಗಾಗಿ ಇದೆ ಸಮಯದಲ್ಲಿ ಹೊಂಚು ಹಾಕಿ ಊರೊಳಗೆ ನುಗ್ಗುವ ಖದೀಮರು ಸಿಕ್ಕ ಸಿಕ್ಕಿದ್ದನ್ನ ಕಳ್ಳತನ ಮಾಡುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿವೆ.
ಇದನ್ನೂ ಓದಿ : ವರ್ಗಾವಣೆ ಆದೇಶ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದ ಐಎಎಸ್ ಅಧಿಕಾರಿ ಬಿ ಶರತ್ ಸಂಕಷ್ಟದಲ್ಲಿ
ಊರಿನಲ್ಲಿ ಪೊಲೀಸರು ಗಸ್ತಿಗೆ ಬಂದಿದ್ರೆ ಹೀಗೆಲ್ಲ ಆಗುತ್ತಿರಲಿಲ್ಲ ಪೊಲೀಸರು ರಾತ್ರಿ ಗಸ್ತು ಬರದೆ ಇದ್ದಿದ್ದರಿಂದ ತಾಲೂಕಿನಾದ್ಯಂತ ಕಳ್ಳತನದ ಪ್ರಕರಣಗಳು ಹೆಚ್ಚಾಗಿವೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರ ಕರ್ತವ್ಯ ಪ್ರಜ್ಞೆಯ ಕೊರತೆಯೋ ಅಥವಾ ಜನರ ನಿಷ್ಕಾಳಜಿಯೋ ಗೊತ್ತಿಲ್ಲ. ಆದರೆ, ಅಥಣಿ ತಾಲೂಕಿನಲ್ಲಿ ಪದೇ ಪದೇ ಸರಣಿಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರನ್ನ ಆತಂಕಕ್ಕೆ ದೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ