ವಿಜಯಪುರ (ನ. 23); ಯಾರು ಲಿಂಗಾಯಿತ ಧರ್ಮ ಒಡೆದರು ಎಂಬುದಕ್ಕೆ ಉತ್ತರ ಕೊಡುವ ಕಾಲ ಬಂದಿದೆ. ಶೀಘ್ರದಲ್ಲಿ ಈ ಕುರಿತು ಸುದೀರ್ಘವಾಗಿ ಮಾತನಾಡುತ್ತೇನೆ ಎಂದು ಮಾಜಿ ಸಚಿವ ಮತ್ತು ಲಿಂಗಾಯಿತ ಸ್ವತಂತ್ರ ಧರ್ಮ ಹೋರಾಟಗಾರ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳದಲ್ಲಿ ಮಾತನಾಡಿದ ಅವರು, ಆನೆ ಕೊಟ್ಟಾಗ ಬಿಟ್ಟು, ಈಗ ಇಲಿ ಹಿಡಿಯಲು ಹೊರಟಿದ್ದಾರೆ ಎಂದು ವೀರಶೈವ ಲಿಂಗಾಯಿತಿ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಮಾರ್ಮಿಕವಾಗಿ ವ್ಯಂಗ್ಯವಾಡಿದರು.
ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಮತ್ತು ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪಾಟೀಲ ಅವರು, ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಆಯಾ ಸಮಾಜಗಳು ಮುಂದೆ ಬರುತ್ತವೆ. ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಸ್ಥಾಪನೆಯಿಂದ ಸಹಾಯವಾಗಬಹುದು. ಆದರೆ, ದೊಡ್ಡ ಸಮುದಾಯಗಳಿಗೆ ನಿಗಮದಿಂದ ಯಾವುದೇ ಲಾಭವಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಲಿಂಗಾಯತ ಸಮುದಾಯ 1.60 ಕೋಟಿ ಜನಸಂಖ್ಯೆ ಇದೆ. ಒಟ್ಟು ರಾಜ್ಯದ ಜನ ಸಂಖ್ಯೆಯಲ್ಲಿ ಶೇ. 16 ರಿಂದ 18 ರಷ್ಟು ಜನ ಲಿಂಗಾಯತರಿದ್ದಾರೆ. ಈ ನಿಗಮಕ್ಕೆ ರೂ. 100-200 ಕೋಟಿ ಅನುದಾನ ನೀಡಿದರೆ ಯಾವುದೇ ಉಪಯೋಗವಿಲ್ಲ. ರೂ. 1000 ಕೋಟಿ ಅನುದಾನ ನೀಡಿದರೂ ಸಾಲದು. 1000 ಕೋಟಿ ಅನುದಾನ ನೀಡಿದರೂ ಸಮಾಜದ ಶೇ. 25ರಷ್ಟು ಜನರಿಗೆ ಮಾತ್ರ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಯತ್ನಿಸಿದ್ದರು. ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದ್ದರೆ ಲಿಂಗಾಯಿತ ವಿದ್ಯಾರ್ಥಿಗಳಿಗೆ 1000 ಮೆಡಿಕಲ್ ಸೀಟುಗಳು, 5000 ಎಂಜಿನಿಯರಿಂಗ್ ಸೀಟುಗಳು ಸಿಗುತ್ತಿದ್ದವು. ಆಗ ಸಿದ್ಧರಾಮಯ್ಯ ಮಾಡಿದ್ದ ಶಿಫಾರಸ್ಸನ್ನು ಕೇಂದ್ರ ಸರಕಾರ ಒಪ್ಪಲಿಲ್ಲ. ಆನೆ ಕೊಟ್ಟಾಗ ಬಿಟ್ಟು ಈಗ ಇಲಿ ಹಿಡಿಯೋಕೆ ಹೊರಟಂತಿದೆ ಇವರ ವರ್ತನೆ ಎಂದು ಪರೋಕ್ಷವಾಗಿ ಬಿಜೆಪಿ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ನಿಗಮಕ್ಕೆ 1000 ಕೋಟಿ ನೀಡಿದರೆ ರೂ. 3750 ರೂಪಾಯಿ ಪ್ರತಿಯೊಬ್ಬರಿಗೆ ಸಿಗುತ್ತೆ. ರೂ. 5000 ಕೋಟಿಯನ್ನಾದರೂ ನೀಡಿ. ನಾನು ನಿಗಮಕ್ಕೆ ವಿರೋಧ ಮಾಡಿದರೆ ಎಂ.ಬಿ. ಪಾಟೀಲ ನಿಗಮ ವಿರೋಧಿಯೆಂದು ಪಟ್ಟ ಕಟ್ಟುತ್ತಾರೆ. ಈ ಹಿಂದೆ ನನಗೆ ಧರ್ಮ ಒಡೆದವರು ಎಂದು ಪಟ್ಟ ಕಟ್ಟಿದರು. ಧರ್ಮ ಒಡೆದವರು ಇವರು. ಜನರನ್ನು ಹಾಳು ಮಾಡಿದವರು ಇವರು. ನಮ್ಮ ಲಿಂಗಾಯಿತ ಮಕ್ಕಳ ಭವಿಷ್ಯ ಹಾಳು ಮಾಡಿದವರು ಇವರು. ಆದರೆ, ಎಂ.ಬಿ. ಪಾಟೀಲ ಧರ್ಮ ಒಡೆದಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು. ಈಗ ಕಾಲ ಕೂಡಿ ಬಂದಿದೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಯಾರು ಧರ್ಮ ಒಡೆದರು, ಯಾರು ಯಾರನ್ನೂ ಹಾಳು ಮಾಡಿದ್ದಾರೆ? ಯಾರು ಎಸ್ಸಿ ಸರ್ಟಿಫಿಕೇಟ್ ಪಡೆದು ಸಿದ್ಧೇಶ್ವರ ಸೋಲಾಪುರಕ್ಕೆ ಹೋಗಿ ಗೆದ್ದಿದ್ದಾರೆ. ಮೊನ್ನೆ ಸೂಕ್ಷ್ಮವಾಗಿ ಹೇಳಿದ್ದೇನೆ. ಇನ್ನು ಮುಂದೆ ಸುದೀರ್ಘವಾಗಿ ಹೇಳುತ್ತೇನೆ. ಶೀಘ್ರದಲ್ಲಿ ಎಲ್ಲವನ್ನು ಬಿಚ್ಚಿಡುತ್ತೇನೆ ಎಂದು ಎಂ. ಬಿ. ಪಾಟೀಲ ಗುಡುಗಿದರು.
ಇದನ್ನು ಓದಿ: ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ; ಡಿ.7ರವರೆಗೆ ಹಿಂಡಲಗಾ ಜೈಲೇ ಗತಿ!
ರೋಷನ ಬೇಗ್ ಐಎಂಎ ಹಗರಣದಲ್ಲಿ ಭಾಗಿಯಾಗಿದ್ದ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಕುರಿತು ತನಿಖೆ ನಡೆಯುತ್ತಿದೆ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ರೋಷನ್ ಬೇಗ್ ತನಿಖೆಯನ್ನು ಎದುರಿಸಲಿ. ಅವರು ನಿರಪರಾಧಿಯಾಗಿದ್ದರೆ ತನಿಖೆಯಲ್ಲಿ ತಿಳಿದು ಬರಲಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ