ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದ್ದ ವೇದಿಕೆ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿ ಜನ ಪ್ರತಿನಿಧಿಗಳಿಂದಲೇ ಕೋವಿಡ್ ನಿಯಮ ಉಲ್ಲಂಘನೆ ಆದಂತ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದೆ. ಇಂದು ಮಂಡ್ಯ ನಗರದ ಸಂಜಯ ವೃತ್ತದಲ್ಲಿ ನಗರದ ಕೊರೋನಾ ವಾರಿಯರ್ಸ್ ಗಳಿಗೆ ಫುಡ್ ಕಿಟ್ ವಿತರಣಾ ಕಾರ್ಯಕ್ರಮವನ್ನ ಜಿಲ್ಲಾ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ದರು. ಹಿಗಾಗಿ ತಮ್ಮ ನೆಚ್ಚಿನ ನಾಯಕರಾದ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ಗುರುವಾರ ಜಿಲ್ಲೆಗೆ ಕರೆಯಿಸಿ ನಾಗಮಂಗಲ ತಾಲ್ಲೂಕು, ಮಂಡ್ಯ ನಗರ, ಮಳವಳ್ಳಿ ತಾಲೂಕು ಹಾಗೂ ಮದ್ದೂರು ತಾಲೂಕುಗಳಲ್ಲಿ ಫುಡ್ ಕಿಟ್ ವಿತರಣೆ ಮಾಡಿಸಿದ್ದರು. ಆದರೆ, ಈ ವೇದಿಕೆಯಲ್ಲಿ ಸಾಮಾಜಿಕ ಅಂತರವೇ ಇಲ್ಲದಂತಾಗಿದ್ದು, ಕಾಂಗ್ರೆಸ್ ನಾಯಕರು ಕೊರೋನಾವನ್ನು ಹಂಚಲೆಂದೇ ಜಿಲ್ಲೆಗೆ ಬಂದಂತೆ ಭಾಸವಾಗಿತ್ತು.
ಫುಡು ಕಿಟ್ ಜೊತೆಗೆ ಜನರಿಗೆ ಕೊರೋನಾ ಗಿಫ್ಟ್:
ಇದಕ್ಕೂ ಮೊದಲು ಜಿಲ್ಲೆಯ ನಾಗಮಂಗಲ ತಾಲೂಕಿಗೆ ಆಗಮಿಸಿದ ಡಿಕೆ ಶಿವಕುಮಾರ್ ಪಟ್ಟಣದ ಕಾಂಗ್ರೆಸ್ ಕಚೇರಿ ಎದುರು ನೂರಾರು ಆಶಾ ಕಾರ್ಯಕರ್ತೆಯರಿಗೆ ಹಾಗೂ ಪೌರ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ರು. ಆದ್ರೆ ಈ ಸಂದರ್ಭ ಸಾಮಾಜಿಕ ಅಂತರವಿಲ್ಲದೆ ಜನರು ಒಬ್ಬರಿಗೊಬ್ಬರು ತಬ್ಬಿಕೊಂಡಂತೆ ಸೇರಿದ್ದರು. ಇದರಿಂದ ಫುಡ್ ಕಿಟ್ ನೆರವಿನ ಜೊತೆಗೆ ಕೊರೊನಾ ನೆರವನ್ನ ಕೂಡ ಜನರು ಪಡೆದುಕೊಳ್ಳಬಹುದಾಗಿತ್ತು. ಆದ್ರೆ ಇಷ್ಟೆಲ್ಲ ಕೊವೀಡ್ ನಿಯಮ ಉಲ್ಲಂಘನೆ ಆಗ್ತಿದ್ರು ಕೂಡ ಪಟ್ಟಣದ ಪೊಲೀಸರು ನಮಗೂ ಅದಕ್ಕೂ ಸಂಬಂಧವಿಲ್ಲ. ನಮಗೊಂದು ಫುಡ್ ಕಿಟ್ ಸಿಕ್ಕಿದ್ದರೆ ಆಗ್ತಿತ್ತು ಅಂತ ಮೌನಕ್ಕೆ ಶರಣಾಗಿದ್ದರು.
ನಾಗಮಂಗಲದ ಬಳಿಕ ಮಂಡ್ಯ ನಗರದಲ್ಲೂ ಕೊರೊನಾ ನಿಯಮ ಉಲ್ಲಂಘನೆ:
ನಾಗಮಂಗಲದ ಬಳಿಕ ಮಂಡ್ಯಕ್ಕೆ ಬಂದ ಡಿಕೆ ಸಾಯಬರು. ನಗರದ ಸಂಜಯ ವೃತ್ತದಲ್ಲಿ ಸಿದ್ದವಾಗಿದ್ದ ವೇದಿಕೆ ಅಲಂಕರಿಸಿದ್ರು. ಆದ್ರೆ ಇಲ್ಲಿ ನಾಗಮಂಗಲಕ್ಕಿಂತಲೂ ಒಂದು ಕೈ ಮುಂದೆ ಎಂಬಂತೆ ನೂರಾರು ಜನ ವೇದಿಕೆ ಅಲಂಕರಿಸಿದ್ರು. ಈ ಸಂದರ್ಭ ಜನಗಳಿಗೆ ಬುದ್ದಿ ಹೇಳಬೇಕಿದ್ದ ರಾಜಕೀಯ ನಾಯಕರ ಜನ ಜಂಗುಳಿಯೆ ವೇದಿಕೆ ಮೇಲೆ ತುಳುಕುತಿತ್ತು. ಇನ್ನು ಜಿಲ್ಲೆಯಲ್ಲಿ ಮಾಸ್ಕ್ ಹಾಕದ ಯಾರೋ ದಾರಿ ಹೋಕರಿಗೆ ಫೈನ್ ಜಡಿಯೋ ಪೊಲೀಸರು ವೇದಿಕೆ ಮೇಲೆ ಇದ್ದ ಅಷ್ಟು ಜನಕ್ಕೂ ಫೈನ್ ಜಡಿಯುವ ಬದಲು ಮೂಕ ಪ್ರೇಕ್ಷಕರಂತೆ ವರ್ತಿಸಿದ್ರು.
ಫುಡ್ ಕಿಟ್ ವಿತರಣೆಯಲ್ಲಿ ಮಾದರಿಯಾದ ಮಳವಳ್ಳಿ:
ಮಂಡ್ಯ ಬಳಿಕ ಮಳವಳ್ಳಿಯಲ್ಲಿ ಕೊರೊನಾ ವಾರಿಯರ್ಸ್ಗೆ ಫುಡ್ ಕಿಟ್ ವಿತರಣೆ ಮಾಡಲಾಯ್ತು. ಇಲ್ಲಿ ಸಿಸ್ತು ಬದ್ದವಾಗಿ ನಡೆದ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕಿನ ಹಲವು ಕೊರೊನ ವಾರಿಯರ್ಸ್ಗಳಿಗೆ ಫುಡ್ ಕಿಟ್ ವಿತರಣೆ ಮಾಡಲಾಯ್ತು. ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಾಜಿ ಸಚಿವ ನರೇಂದ್ರಸ್ವಾಮಿಯವರು ಜನರ ಮೆಚ್ಚುಗೆಗೆ ಪಾತ್ರವಾದ್ರು.
ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಘೋಷಣೆಯಾಗಿದೆ. ರಸ್ತೆಗೆ ಇಳಿದ ಸಾಮಾನ್ಯನಿಗೆ ಸ್ಥಳದಲ್ಲೇ ದಂಡ ವಿಧಿಸಲಾಗ್ತಿದೆ. ಕೊರೊನಾ ಸಂದರ್ಭದಲ್ಲಿ ಕೂಡ ಹೆಲ್ಮೆಟ್, ಇನ್ಸೂರೆನ್ಸ್ ಅಂತ ಸಾವಿರಾರು ರೂ ಫೈನ್ ಜಡಿಯುತ್ತಿದ್ದಾರೆ. ಆದರೆ ಇಂತ ದೊಡ್ಡವರ ಕಾರ್ಯಕ್ರಮಗಳ ಬಗ್ಗೆ ಪೊಲೀಸರು ಚಕಾರ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ. ಹಿಗಾಗಿ ಜಿಲ್ಲೆಯ ಜನರು ಪೊಲೀಸರ ವಿರುದ್ದ ಬೇಸರ ವ್ಯಕ್ತಪಡಿಸುತ್ತಾ, ಉಳ್ಳವರಿಗೊಂದು ನ್ಯಾಯ. ಸಾಮಾನ್ಯನಿಗೆ ಒಂದು ನ್ಯಾಯ ಏಕೆ? ಅಂತ ಪ್ರಶ್ನಿಸಿದ್ದಾನೆ.
(ವರದಿ -ಸುನೀಲ್ ಕುಮಾರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ